ಜೋಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿ.ಟಿ.ರವಿ ಭರವಸೆ
ಶಿವಮೊಗ್ಗ, ಸೆಪ್ಟೆಂಬರ್ 13: "ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ನೀತಿಯನ್ನು ರೂಪಿಸಲಾಗುವುದು" ಎಂದು ಪ್ರವಾಸ್ಯೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ಜೋಗಕ್ಕೆ ಭೇಟಿ ನೀಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಇದು ತಕ್ಷಣವೇ ಪರಿಹಾರ ಕಲ್ಪಿಸಲು ಕೈಗೊಂಡಿರುವ ಭೇಟಿ ಅಲ್ಲ. ಸಮಸ್ಯೆಗಳನ್ನು ಅರಿತು ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಧಾರ್ಮಿಕ, ಪ್ರಕೃತಿ ಸೌಂದರ್ಯ ಹೀಗೆ ಪ್ರವಾಸೋದ್ಯಮವನ್ನು ಪ್ರತ್ಯೇಕಿಸಿ ಸ್ಥಳಗಳಿಗೆ ಭೇಟಿ ನೀಡಲಾಗುತ್ತಿದೆ. ರಾಜ್ಯದಲ್ಲಿ 319 ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಿವೆ. 1500 ಪುರಾತತ್ವ ಇಲಾಖೆಯ ಪ್ರಮುಖ ಜಾಗಗಳಿವೆ. ಜಾಗತಿಕ ಮಟ್ಟದ 40 ಪ್ರವಾಸ ಕೇಂದ್ರಗಳನ್ನು ಗುರುತಿಸಲಾಗುವುದು" ಎಂದು ಮಾಹಿತಿ ನೀಡಿದರು.
ಪಶ್ಚಿಮ ಘಟ್ಟದಲ್ಲಿನ ಪ್ರವಾಸೋದ್ಯಮ, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ಎಂದು ಪ್ರತ್ಯೇಕಿಸಿ, ಅಲ್ಪಾವಧಿ, ದೀರ್ಘಾವಧಿ ಯೋಜನೆಗಳನ್ನು ರೂಪಿಸುವ ಜೊತೆಗೆ ಸಮಸ್ಯೆಗಳ ಚರ್ಚೆ ನಂತರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಹೊಸ ನೀತಿ ರೂಪಿಸುವುದಾಗಿ ತಿಳಿಸಿದರು.

ಜೋಗದ ಅಭಿವೃದ್ಧಿ ಕುರಿತು ಜೋಗ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ ನಂತರ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಅವರು, "ಶೌಚಾಲಯದ ಸಮಸ್ಯೆಗಳೇ ಹೆಚ್ಚಾಗಿವೆ, ಜೊತೆಗೆ ಜೋಗ್ ನಿಂದ ಸಾಗರಕ್ಕೆ ಕೆಎಸ್ಆರ್ ಟಿಸಿ ಬಸ್ ಬಿಡುವ ಬಗ್ಗೆ, ಪ್ರವೇಶದ ಶುಲ್ಕ ಕಡಿಮೆಗೊಳಿಸುವಂತೆ ಅಹವಾಲಿನಲ್ಲಿ ಕೇಳಿಬಂದವು. ಈ ವಿಷಯಗಳ ಕುರಿತು ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು" ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳ ಹಾಲಪ್ಪ ಇದ್ದರು.












Click it and Unblock the Notifications