ಗೋ ಪೂಜೆ ಮೂಲಕ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಶಿವಮೊಗ್ಗ, ಡಿಸೆಂಬರ್ 10: ಕರ್ನಾಟಕ ವಿಧಾನಸಭೆಯಲ್ಲಿ 'ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ' ಪ್ರತಿಪಕ್ಷಗಳ ವಿರೋಧ, ಸಭಾಗತ್ಯಾಗದ ನಡುವೆಯೇ ಅಂಗೀಕಾರಗೊಂಡಿದೆ. ಬಿಜೆಪಿ ನಾಯಕರು ಗೋ ಪೂಜೆ ಮಾಡುವ ಮೂಲಕ ಇದನ್ನು ಸಂಭ್ರಮಿಸುತ್ತಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿಯೂ ಬಿಜೆಪಿ ಕಾರ್ಯಕರ್ತರು ಗೋ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಮಾತಿನಂತೆ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ ಎಂದು ಸಂಭ್ರಮಾಚರಣೆ ಮಾಡಲಾಯಿತು.
ಶ್ರೀ ಜ್ಞಾನೇಶ್ವರಿ ಗೋಶಾಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಅಧ್ಯಕ್ಷರಾದ ದರ್ಶನ್, ನಗರ ಅಧ್ಯಕ್ಷರಾದ ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಬಳ್ಳೇಕೆರೆ ಸಂತೋಷ್, ಗೋ ಶಾಲೆಯ ಅಧ್ಯಕ್ಷರು ಮುಂತಾದವು ಉಪಸ್ಥಿತರಿದ್ದರು.

ನಗರ ಮಹಿಳಾ ಮೋರ್ಚಾದವರು ಮಂಡೇನಕೊಪ್ಪದ ಸುರಭಿ ಗೋಶಾಲೆಯಲ್ಲಿ ಗೋಪೂಜೆ ಮಾಡಿದರು. 5 ಸಾವಿರ ರೂ.ಗಳ ದೇಣಿಗೆಯನ್ನು ಗೋಶಾಲೆಗೆ ನೀಡಿದರು. ನಗರಾಧ್ಯಕ್ಷರಾದ ಜಗದೀಶ್, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ಆರತಿ ಪ್ರಕಾಶ್, ರಶ್ಮಿ ಶ್ರೀನಿವಾಸ್, ಮೇಯರ್ ಸುವರ್ಣ ಶಂಕರ್ ಮುಂತಾದವರು ಉಪಸ್ಥಿತರಿದ್ದರು.
ಪಶುಸಂಗೋಪನಾ ಸಚಿವ ಪ್ರಭು ಚೌವಾಣ್ ವಿಧಾನಸಭೆಯಲ್ಲಿ ಬುಧವಾರ 'ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ' ಮಂಡನೆ ಮಾಡಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು, ಸಭಾತ್ಯಾಗ ಮಾಡಿದ್ದರು. ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.

ಬಳಿಕ ವಿಧಾನಸೌಧದ ಮುಂದೆ ಗೋ ಪೂಜೆ ಮಾಡಿ ಬಿಜೆಪಿ ಶಾಸಕರು ಸಂಭ್ರಮಾಚರಣೆ ಮಾಡಿದ್ದರು. ಸಚಿವರು ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿ ಸಿಹಿ ನೀಡಿ ಮಾತುಕತೆ ನಡೆಸಿದ್ದರು.












Click it and Unblock the Notifications