ಶಿವಮೊಗ್ಗ: ಬೇಟೆಗಾರರ ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ
ಶಿವಮೊಗ್ಗ, ಡಿಸೆಂಬರ್ 7: ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೋಣೆಹೊಸೂರು ಗ್ರಾಮದ ಕಿರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಚಿರತೆಯು 5 ರಿಂದ 6 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಹಾರ ಅರಸುತ್ತ ಬಂದ ಚಿರತೆ ಉರುಳಿಗೆ ಸಿಕ್ಕಿಬಿದ್ದಿದೆ. ಉರುಳಿಗೆ ಸಿಲುಕಿದ ಚಿರತೆ ತಲೆ ಕೆಳಗಾದ ಸ್ಥಿತಿಯಲ್ಲಿ ಮರದಲ್ಲಿ ಜೋತಾಡುತ್ತಿತ್ತು. ಮರವನ್ನು ಹತ್ತಲಾಗದೇ, ಉರುಳಿನಿಂದ ತಪ್ಪಿಸಿಕೊಂಡು ಕೆಳಗೆ ಜಿಗಿಯಲು ಆಗದೇ ಒದ್ದಾಡಿದೆ. ಕೊನೆಯಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಸಫಲವಾಗದೆ ಮರದಲ್ಲಿ ಪ್ರಾಣ ಬಿಟ್ಟಿದೆ ಎನ್ನಲಾಗಿದೆ.
ಚಿರತೆಯೊಂದು ಉರುಳಿಗೆ ಸಿಕ್ಕಿಬಿದ್ದಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮರದಲ್ಲಿ ಪ್ರಾಣ ಬಿಟ್ಟ ಚಿರತೆಯನ್ನು ಕಾಡಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲಿಯೇ ದಹನ ಮಾಡಲಾಯಿತು.

ಕೋಣೆಹೊಸೂರು ಗ್ರಾಮದ ಕಿರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣುತಪ್ಪಿಸಿ ವನ್ಯಜೀವಿಗಳನ್ನು ಬೇಟೆಯಾಡಲಾಗುತ್ತಿದೆ ಎನ್ನುವ ಆರೋಪವಿದೆ. ಬಂದೂಕಿನಿಂದ ಗುಂಡು ಹಾರಿಸಿದರೆ ಶಬ್ದ ಕೇಳುತ್ತದೆ. ಹಾಗಾಗಿ ಯಾರಿಗೂ ಗೊತ್ತಾಗದಂತೆ ಬೇಟೆಯಾಡಲು ಉರುಳು ಕಟ್ಟಲಾಗುತ್ತಿದೆ. ಪ್ರಾಣಿಗಳು ಸಾಮಾನ್ಯವಾಗಿ ಸಂಚರಿಸುವ ಜಾಗದಲ್ಲಿ ಉರುಳು ಕಟ್ಟುತ್ತಿದ್ದಾರೆ. ಕಾಡು ಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳು ಈ ಉರುಳಿಸಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಚಿರತೆ ಸಾವನ್ನಪ್ಪಿರುವುದರಿಂದ ಬೇಟೆಗಾರರ ಉರುಳು ತಂತ್ರ ಬೆಳಕಿಗೆ ಬಂದಿದೆ.
ಘಟನಾ ಸ್ಥಳದಲ್ಲಿ ಸಾಗರ ಎಸಿಎಫ್ ಶ್ರೀಧರ್, ವಲಯ ಅರಣ್ಯಾಧಿಕಾರಿ ಅರವಿಂದ್, ಡಿವೈಆರ್ಎಫ್ಒ ದೀಪಕ್ ಸಿಂಗ್, ಸೋಮಶೇಖರ್, ಅಶೋಕ್, ಮುಬಾರಕ್ ಬಾಷಾ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಸವರಾಜ, ಮಂಜನಾಥ್ ಮಲ್ಲಾದೊರೆ, ಗ್ರಾಮ ಪಂಚಾಯಿತಿ ಸದಸ್ಯ ಸುದರ್ಶನ ಹಾಜರಿದ್ದರು.
ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವು
ವಿಜಯನಗರ, ಡಿಸೆಂಬರ್ 7: ರಸ್ತೆ ದಾಟಲು ಮುಂದಾಗಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ನಡೆದಿದೆ. ಮೃತ ಚಿರತೆಗೆ ಐದು ಅಥವಾ ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶಿವಪುರ ಭಾಗದ ಕೂಡ್ಲಿಗಿ ಅರಣ್ಯ ವಲಯದಲ್ಲಿ ಎನ್ಆರ್ಇಜಿ ಕಾಮಗಾರಿ ಮಾಡಿಸಲು ಗಾರ್ಡ್ ನಾಗರಾಜ ಎನ್ನುವವರು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ಹೆದ್ದಾರಿ 50ರ ರಸ್ತೆಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡು ತಕ್ಷಣ ಕೂಡ್ಲಿಗಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೊಸಪೇಟೆ ವಲಯಾರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಚಿರತೆಯ ಮೃತದೇಹವನ್ನು ಹೊಸಪೇಟೆ ಅರಣ್ಯವಲಯದ ಕಚೇರಿಗೆ ರವಾನಿಸಲಾಗಿದ್ದು, ಪಶುವೈದ್ಯಾಧಿಕಾರಿಗಳ ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications