ಸಚಿವ ಈಶ್ವರಪ್ಪ ಹೆಸರಿನಲ್ಲಿ ಲಕ್ಷ-ಲಕ್ಷ ಹಣ ಪಡೆದು ವಂಚನೆ
ಶಿವಮೊಗ್ಗ, ಅಕ್ಟೋಬರ್ 05; ಗ್ರಾಮೀಣಾಭಿವೃದ್ಧಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೆಸರು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವವರಿಗೆ 100 ಕೋಟಿ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು.
ಇದಕ್ಕಾಗಿ ಐವರು ಆರೋಪಿಗಳು 10 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ 2; 106 ವಾಟರ್ ಆರ್. ಒ. ಪ್ಲಾಂಟ್ ಕೊಡಿಸುವುದಾಗಿ ಶಿವಮೊಗ್ಗದ ಗುತ್ತಿಗೆದಾರ ಲಕ್ಷ್ಮಣ್ ಎಂಬುವವರಿಗೆ ವಂಚಿಸಲಾಗಿದೆ. ಲಕ್ಷ್ಮಣ್ ಅವರಿಂದ 26.25 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚನೆ ಮಾಡಲಾಗಿದೆ. ಆರ್.ಒ ಪ್ಲಾಂಟ್ ಕೊಡಿಸದೇ ಇರುವಾಗ ಹಣ ಕೇಳಿದಾಗ ಲಕ್ಷ್ಮಣ್ಗೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಐವರ ವಿರುದ್ಧ ಕೇಸ್; ಎರಡು ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಆಪ್ತರು ಎಂದು ಬಿಂಬಿಸಿಕೊಂಡಿದ್ದಾರೆ. ಇದನ್ನು ನಂಬಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಹಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡು ಪ್ರಕರಣದಲ್ಲಿ ವಿಠಲ ರಾವ್, ಮಹೊಮ್ಮದ್ ಮುಫಾಸಿರ್, ಮಂಜುನಾಥ, ಕಾಜಿವಲೀಸ್, ಮೊಹಮ್ಮದ್ ರೆಹಮಾನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ದೂರಿನ ಅನ್ವಯ 2/10/2021 ರಂದು ಸಿಇಎನ್ ಠಾಣೆಯಲ್ಲಿ ಕಲಂ 506, 419, 420 ಐಪಿಸಿಯಡಿಯಲ್ಲಿ ಸಂಖ್ಯೆ 84/2021 & 85/2021ರಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications