ಎತ್ತನ್ನು ಕೊಂದು ಮಾರಾಟಕ್ಕೆ ಯತ್ನ: ಕಾರನ್ನು ವಶಪಡಿಸಿಕೊಂಡ ಪೊಲೀಸರು
ಶಿವಮೊಗ್ಗ, ಜುಲೈ.02: ಮೇಯಲು ಬಿಟ್ಟ ಎತ್ತನ್ನು ದನಗಳ್ಳರು ಕೊಂದು, ಅದರ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಎತ್ತಿನ ಮಾಲೀಕ ಅಡ್ಡಗಟ್ಟಿ ಹಿಡಿಯಲೆತ್ನಿಸಿದ ಘಟನೆ ಶಿವಮೊಗ್ಗದ ಟಿಪ್ಪು ನಗರದ ಬಳಿ ನಡೆದಿದೆ.
ಘಟನೆಯ ವಿವರ: ಕಲ್ಲೂರು ಮಂಡ್ಲಿಯ ಚಂದ್ರಶೇಖರ್, ತನ್ನ ಎರಡೂ ಎತ್ತನ್ನು ಮೇಯಲು ಬಿಟ್ಟಿದ್ದರು. ಆಗ ಒಂದು ಎತ್ತು ನಾಪತ್ತೆಯಾಗಿತ್ತು. ಎತ್ತು ಹುಡುಕಿಕೊಂಡು ಹೊರಟ ಚಂದ್ರಶೇಖರ್ ಗೆ ಇಲಿಯಾಜ್ ನಗರದಲ್ಲಿ ಒಂದು ತಂಡ ಎತ್ತಿನ ಚರ್ಮ ಸುಲಿದು ಕಟ್ ಮಾಡುತ್ತಿರುವುದು ಗಮನಕ್ಕೆ ಬಂತು.
ಮಂಗಳೂರು: ಕುಖ್ಯಾತ ಅಂತರಜಿಲ್ಲಾ ಜಾನುವಾರು ಕಳ್ಳನ ಸೆರೆ
ಇತ್ತ ಎತ್ತಿನ ಮಾಲೀಕ ಗಮನಿಸುತ್ತಿರುವುದನ್ನು ನೋಡಿ ಎಚ್ಚೆತ್ತ ತಂಡ ಮಾರುತಿ 800 ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದರು. ಆಗ ಸ್ಥಳೀಯರ ಸಹಕಾರ ಪಡೆದ ಚಂದ್ರಶೇಖರ್ ಕಾರನ್ನು ಬೆನ್ನುಹತ್ತಿದರು. ಟ್ರಾಫಿಕ್ ಇರುವುದರಿಂದ ಕಾರು ವೇಗವಾಗಿ ಹೋಗಲು ಸಾಧ್ಯವಾಗದೇ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಮಾಂಸ ಸಾಗಿಸುತ್ತಿದ್ದ ಮಾರುತಿ 800 ಕಾರನ್ನು ತುಂಗಾ ನಗರ ಪೊಲೀಸರು ವಶಪಡಿಸಿಕೊಂಡಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಬಯಲಾಗುತ್ತಿದಂತೆ ನಗರದ ಹಿಂದೂಪರ ಮುಖಂಡರು, ರೈತರು ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಗೋ ಕಳ್ಳರ ವಿರುದ್ಧ ಪೋಲಿಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಆಗಮಿಸಿ ಇದರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.