ಅಮಿತ್ ಶಾ ತಿಳಿಸುವ ಅಭ್ಯರ್ಥಿಗಳೇ ಅಂತಿಮ : ಬಿಎಸ್ವೈ
ಶಿವಮೊಗ್ಗ, ಡಿಸೆಂಬರ್ 29 : 'ಎಲ್ಲಿ ಗೊಂದಲವಿಲ್ಲವೋ ಅಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದೇನೆ. ಆದರೂ ಎರಡು ಸಮೀಕ್ಷೆಗಳು ನಡೆದ ಮೇಲೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತಿಳಿಸುವ ಅಭ್ಯರ್ಥಿಗಳ ಹೆಸರು ಅಂತಿಮ' ಎಂದು ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಕೇಂದ್ರ ಸರ್ಕಾರದ ಸಾಧನೆ ಹಾಗೂ ಪ್ರಧಾನಿ ಮೋದಿಯವರ ಸಾಧನೆಯ ಮೇರೆಗೆ ಕರ್ನಾಟಕ ಚುನಾವಣೆಗೆ ರಾಜ್ಯ ಬಿಜೆಪಿ ಜನರ ಮುಂದೆ ಹೋಗಲಿದೆ, ಅಧಿಕಾರಕ್ಕೆ ಬರಲಿದೆ' ಎಂದರು.

'ಪರಿವರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. 20ಜಿಲ್ಲೆಗಳ 141ಕ್ಷೇತ್ರಗಳಲ್ಲಿ ಯಾತ್ರೆ ಮುಗಿದಿದೆ. ಚಿಕ್ಕಮಗಳೂರಿಗೆ ಯಾತ್ರೆ ಹೋಗಲಿದ್ದು, ಜನವರಿ 28ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ' ಎಂದು ಹೇಳಿದರು.
ಅಭ್ಯರ್ಥಿಗಳ ಘೋಷಣೆ : ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಯಡಿಯೂರಪ್ಪ, 'ಎಲ್ಲಿ ಗೊಂದಲವಿಲ್ಲವೋ ಅಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದೇನೆ. ಆದರೂ ಎರಡು ಸಮೀಕ್ಷೆಗಳು ನಡೆದ ಮೇಲೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತಿಳಿಸುವ ಅಭ್ಯರ್ಥಿಗಳ ಹೆಸರು ಅಂತಿಮ' ಎಂದರು.
'ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇಡೀ 224ಕ್ಷೇತ್ರದಲ್ಲಿ ಸಮಾವೇಶ ಮುಗಿದಾಗ ಜನರ ಸಮಸ್ಯೆ ಏನು ಎನ್ನುವುದು ತಿಳಿದು ಬರುತ್ತದೆ. ಅದನ್ನು ಮೋದಿಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಬಿಜೆಪಿ ಮುಂದಾಗಲಿದೆ' ಎಂದು ವಿವರಣೆ ನೀಡಿದರು.
'ಭದ್ರಾವತಿಯ ವಿಐಎಸ್ಎಲ್ ಗಣಿಯ ಸಮಸ್ಯೆ ಎದುರಿಸುತ್ತಿದೆ. ರಾಜ್ಯ ಪ್ರವಾಸ ಮುಗಿದ ಬಳಿಕ ಉಕ್ಕು ಸಚಿವರನ್ನು ಕರೆದುಕೊಂಡು ಬರಲಿದ್ದೇನೆ ಹಾಗೂ ಸಮಸ್ಯೆ ಬಗೆಹರಿಸಲು ಶ್ರಮಿಸಲಿದ್ದೇನೆ' ಎಂದರು.
'ಸಿದ್ದರಾಮಯ್ಯ 2014ರಂದು ನ್ಯಾಯಾಲಯದ ತೀರ್ಪು ಬರುವವರೆಗೆ ಮಹದಾಯಿ ನದಿಯಿಂದ ಒಂದು ಹನಿ ನೀರು ಬಳಸುವುದಿಲ್ಲ ಎಂದು ಏಕಪಕ್ಷೀಯ ನಿರ್ಧಾರದಿಂದ ಪತ್ರ ಬರೆದಿದ್ದಾರೆ. ಏಕೆ ಈ ರೀತಿ ಪತ್ರ ಬರೆಯಬೇಕಿತ್ತು?' ಎಂದು ಪ್ರಶ್ನಿಸಿದರು.
'ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಜನವರಿ 1ರ ತನಕ ಇರುತ್ತಾರೆ. ಆಗ ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸುವ ಬಗ್ಗೆ ಗೋವಾ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಬೇಕು' ಎಂದು ಒತ್ತಾಯಿಸಿದರು.












Click it and Unblock the Notifications