ಯಡಿಯೂರಪ್ಪ ಆರಾಧ್ಯ ದೈವ ಹುಚ್ಚರಾಯಸ್ವಾಮಿಗೆ ಸಂಸದರಿಂದ ಪ್ರಾರ್ಥನೆ
ಶಿವಮೊಗ್ಗ, ಆಗಸ್ಟ್ 03: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆದಷ್ಟು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗಲಿ ಎಂದು ಶಿಕಾರಿಪುರ ತಾಲೂಕಿನ ಜನತೆಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆರಾಧ್ಯ ದೈವ ಹುಚ್ಚರಾಯಸ್ವಾಮಿಗೆ ಸ್ಥಳೀಯ ಬಿಜೆಪಿ ಮುಖಂಡರು ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದರು.
ನಿನ್ನೆ ರಾತ್ರಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಗೆ ಕೊರೊನಾ ಸೋಂಕು ದೃಢಪಟಿರುವುದಾಗಿ ಹೇಳಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ದರಿಂದ ಇಡೀ ರಾಜ್ಯದ ಪ್ರಮುಖ ನಾಯಕರು ಬಿ.ಎಸ್.ವೈ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು. ಇಂದು ಬಿ.ಎಸ್ ವೈ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಪಕ್ಷದ ಕಾರ್ಯಕರ್ತರು, ಸಂಸದರು ಸೇರಿ ಪಟ್ಟಣ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಇಡೀ ದೇಶವೇ ಕೊರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿದ್ದು, ದೇಶದ ರಾಜ್ಯದ ಎಲ್ಲಾ ಸೋಂಕಿತರು ಗುಣಮುಖರಾಗಲಿ, ಮುಖ್ಯಮಂತ್ರಿ ಬಿ.ಎಸ್ ವೈ ಅವರ ಆರೋಗ್ಯ ಉತ್ತಮವಾಗಲಿ ಎಂದು ಸಂಸದ ಬಿ.ವೈ ರಾಘವೇಂದ್ರ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.












Click it and Unblock the Notifications