ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ ವಿನ್ಯಾಸ ಸಮರ್ಥಿಸಿಕೊಂಡ ಬಿ.ವೈ. ರಾಘವೇಂದ್ರ
ಶಿವಮೊಗ್ಗ, ಜೂನ್ 23: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಕಟ್ಟಡ ವಿನ್ಯಾಸದ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ, "ವಿಮಾನ ನಿಲ್ದಾಣ ಟರ್ಮಿನಲ್ ವಿನ್ಯಾಸ ನಿರ್ಮಾಣ ಬಗ್ಗೆ ವಿರೋಧ ಪಕ್ಷಗಳಿಂದ ರಾಜಕೀಯವಾಗಿ ಆರೋಪ ಮಾಡುತ್ತಿವೆ. ಅದೇ ರೀತಿ ಟರ್ಮಿನಲ್ ಎದುರು ನಿಂತು ನೋಡಿದರೆ ಕಮಲದ ಹೂವನ್ನು ಹೋಲುವುದಿಲ್ಲ, ಆದರೆ ಆಕಾಶ ನೋಟದಲ್ಲಿ ಅದು ಎಲೆಗಳ ಜೋಡಣೆ ರೀತಿ ಕಾಣಲಿದೆ ಎಂದು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿನ್ಯಾಸವನ್ನು ಸಮರ್ಥಿಸಿಕೊಂಡರು.
"ವಿಮಾನ ನಿಲ್ದಾಣನದ ಪಕ್ಷಿನೋಟದಿಂದ ಮಾತ್ರ ಕಮಲ ಹೂವಿನ ರೀತಿ ಕಾಣುತ್ತದೆ. ಅಲ್ಲದೇ ಕಮಲ ಚಿಹ್ನೆ ನಮ್ಮ ದೇಶದ ರಾಷ್ಟ್ರೀಯ ಹೂವು ಸಹ ಆಗಿದೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗ ಎಲ್ಲಾ ಪಕ್ಷದ ನಾಯಕರು ಉಪಯೋಗಿಸಲಿದ್ದಾರೆ.''

"ಈ ದೇಶದಲ್ಲಿ ರಾಜಕೀಯ ವ್ಯಕ್ತಿಗಳ ಹೆಸರುಗಳನ್ನು ಬೇರೆ ಬೇರೆ ವಿಮಾನ ನಿಲ್ದಾಣ ಹಾಗೂ ಇತರ ಸಂಸ್ಥೆಗಳಿಗೆ ಇಡಲಾಗಿದೆ. ಉದಾಹರಣೆಗೆ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಎಂದು ಹೆಸರಿಡಲಾಗಿದೆ. ಅದರಲ್ಲಿ ಯಾವುದೇ ರಾಜಕೀಯ ಮಾಡಲಾಗದು."
"ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಬಡಜನರ ಆಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಎಂಬ ಹೆಸರಿನಲ್ಲಿ ಪ್ರಾರಂಭಿಸಿದರು. ಆದರೆ ಈಗ ಅಭಿವೃದ್ಧಿ ಕೆಲಸಗಳಲಿಗೆ ಅಡ್ಡಗಾಲು ಹಾಕುತ್ತಿದೆ,"ಎಂದು ಆರೋಪಿಸಿದರು.
"ಟರ್ಮಿನಲ್ ನಿರ್ಮಾಣ ಸಂಸ್ಥೆ ವಿನ್ಯಾಸ ಮಾಡಿದ್ದು, ಅದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಕಾಂಗ್ರೆಸ್ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. 2007ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಯೋಜನೆಗೆ ಚಾಲನೆ ಕೊಟ್ಟಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಪೂರ್ಣಗೊಳಿಸಲಿಲ್ಲ," ಎಂದು ಆರೋಪಿಸಿದರು.

"2022ರ ಎಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದ್ದು, ಸಿಎಂ ಯಡಿಯೂರಪ್ಪನವರು ಶಂಕುಸ್ಥಾಪನೆ ಮಾಡಲಿದ್ದಾರೆ. ಈಗಾಗಲೇ ಎಲ್ಲ ರೈತರೊಂದಿಗೆ ಮಾತನಾಡಿ ಭೂಸ್ವಾಧೀನ ಅಂತ್ಯಗೊಳ್ಳಲಿದೆ. 300 ಕೋಟಿ ರೂ.ಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ," ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
"ಶಿವಮೊಗ್ಗ ವಿಮಾನ ನಿಲ್ದಾಣದಿಂದ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ," ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದ ಮಾದರಿ ಕಮಲದ ಹೂವಿನ ಮಾದರಿಯಲ್ಲಿದೆ, ಅದು ಬಿಜೆಪಿ ಪಕ್ಷದ ರಾಜಕೀಯ ಚಿಹ್ನೆಯಾಗಿದೆ ಎಂದು ವಿನ್ಯಾಸದ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.












Click it and Unblock the Notifications