ಶಿವಮೊಗ್ಗ; ಕೋವಿಡ್ ಸೋಂಕಿತರ ಶವ ಅದಲು ಬದಲು
ಶಿವಮೊಗ್ಗ, ಮೇ 20; ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಮೃತದೇಹಗಳು ಅದಲು ಬದಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಂತ್ಯಕ್ರಿಯೆಗೆ ಕೆಲವೇ ಹೊತ್ತಿಗೆ ಮುನ್ನ ವಿಚಾರ ತಿಳಿದಿದ್ದು, ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದವರು ಮತ್ತಷ್ಟು ಫಜೀತಿ ಅನುಭವಿಸುವಂತಾಯಿತು.
ಕೋವಿಡ್ ಸೋಂಕಿನಿಂದ ಮೃತಪಟ್ಟ ಇಬ್ಬರ ಮೃತದೇಹಗಳು ಅದಲು ಬದಲಾಗಿದ್ದವು. ಇದಕ್ಕೆ ಕಾರಣವೇನು? ಅನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಕಡೆ ಕ್ಷಣದಲ್ಲಿ ವಿಚಾರ ಗೊತ್ತಾಗಿದೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣದ ಮುಗ್ಗಟ್ಟು: ಆಸ್ಪತ್ರೆಯಲ್ಲೇ ಶವ ಬಿಟ್ಟು ಹೋಗಲು ಕುಟುಂಬ ನಿರ್ಧಾರ
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಷಡಾಕ್ಷರಪ್ಪ ಮತ್ತು ನ್ಯಾಮತಿ ತಾಲೂಕಿನ ಗ್ರಾಮವೊಂದರ ಮಲ್ಲಿಕಾರ್ಜುನಪ್ಪ ಮೃತಪಟ್ಟಿದ್ದರು. ಎರಡು ಕಡೆಯ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು.
ಆನೇಕಲ್ ಆಸ್ಪತ್ರೆ ಎಡವಟ್ಟು; ಕೋವಿಡ್ ಸೋಂಕಿತರ ಶವ ಅದಲು ಬದಲು
ಷಡಾಕ್ಷರಪ್ಪ ಅವರ ಕುಟುಂಬದವರಿಗೆ ಮಲ್ಲಿಕಾರ್ಜುನಪ್ಪ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. ಅದೆ ರೀತಿ ಮಲ್ಲಿಕಾರ್ಜುನಪ್ಪ ಕುಟುಂಬದವರಿಗೆ ಷಡಾಕ್ಷರಪ್ಪ ಅವರ ಮೃತದೇಹವನ್ನು ನೀಡಲಾಗಿತ್ತು.
ಬಿಹಾರ; ಗಂಗಾನದಿಯಲ್ಲಿ ಹಲವು ಶವ ಪತ್ತೆ, ಗ್ರಾಮಸ್ಥರಲ್ಲಿ ಆತಂಕ
ವಿಚಾರ ಗೊತ್ತಾಯಿತು; ಷಡಾಕ್ಷರಪ್ಪ ಕುಟುಂಬದವರು ಅಂತ್ಯಕ್ರಿಯೆ ಹೊತ್ತಿಗೆ ಕೊನೆಯ ಬಾರಿಗೆ ಮುಖ ದರ್ಶನಕ್ಕೆ ಮುಂದಾದರು. ಈ ವೇಳೆ ಇದು ಷಡಾಕ್ಷರಪ್ಪ ಅವರ ಮೃತದೇಹವಲ್ಲ ಅನ್ನುವುದು ಗೊತ್ತಾಗಿದೆ.
ತಕ್ಷಣ ಮೆಗ್ಗಾನ್ ಆಸ್ಪತ್ರೆ ಶವಾಗಾರವನ್ನು ಸಂಪರ್ಕಿಸಿದರು. ವಿಚಾರ ತಿಳಿಯುತ್ತಿದ್ದಂತೆ ಶವಾಗಾರದ ಸಿಬ್ಬಂದಿ ಪರಿಶೀಲನೆ ನಡೆಸಿ, ನ್ಯಾಮತಿಯ ಮಲ್ಲಿಕಾರ್ಜುನಪ್ಪ ಅವರ ಕುಟುಂಬದವರನ್ನು ಸಂಪರ್ಕಿಸಿ ವಿಚಾರ ತಿಳಿಸಿದರು.
ನ್ಯಾಮತಿಯಲ್ಲಿ ಮಲ್ಲಿಕಾರ್ಜುನಪ್ಪ ಅವರ ಕುಟುಂಬದವರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಮೃತದೇಹವನ್ನು ಶಿವಮೊಗ್ಗಕ್ಕೆ ಮರಳಿ ತಂದಿದ್ದಾರೆ.
ಮೃತದೇಹ ಹಸ್ತಾಂತರ; ಎರಡು ಕುಟುಂಬದವರು ಮೃತದೇಹವನ್ನು ಮತ್ತೆ ಮೆಗ್ಗಾನ್ ಆಸ್ಪತ್ರೆಗೆ ತಂದು ಬದಲು ಮಾಡಿಕೊಂಡಿದ್ದಾರೆ. ತಮ್ಮವರ ಮೃತದೇಹವನ್ನು ಪಡೆದು ಹಿಂತಿರುಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಸಿದ್ದಪ್ಪ, "ಅದಲು ಬದಲು ಆಗಿರುವುದು ನಿಜ. ಇದು ಅಚಾತುರ್ಯದಿಂದ ಆಗಿದೆ. ಈ ಘಟನೆಗೆ ಕಾರಣರಾರು ಅನ್ನುವುದನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.