ಸಿಎಂ, ಉಸ್ತುವಾರಿ ಸಚಿವರ ಗಮನಕ್ಕೆ ಬರದೇ ಅಕ್ರಮವಾಗಿ ಕ್ವಾರೆ ನಡೆಯುತ್ತಿವೆಯೇ?
ಶಿವಮೊಗ್ಗ, ಜನವರಿ 27: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ನಡೆದ ಜಿಲಿಟಿನ್ ಸ್ಪೋಟದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ""ಕಲ್ಲುಗಂಗೂರು ಗ್ರಾಮದ ಸರ್ವೆ ನಂ.02 ರಲ್ಲಿ ಕ್ರಷರ್ ನಡೆಯುತ್ತಿದೆ. ಆ ಜಮೀನು ಕುಲಕರ್ಣಿ ಎಂಬುವರಿಗೆ ಸೇರಿದ್ದು, ಸುಧಾಕರ್ ಲೀಸಿಗೆ ಪಡೆದು ಕ್ರಷರ್ ನಡೆಸುತ್ತಿದ್ದಾರೆ. ಈ ಸ್ಥಳದಲ್ಲಿ ಜ.21ರಂದು ಬ್ಲಾಸ್ಟ್ ಅಗಿದೆ. ಆದರೆ ಅಧಿಕಾರಿಗಳು ಬ್ಲಾಸ್ಟ್ ಹೇಗೆ ಆಯ್ತು ಗೊತ್ತಿಲ್ಲ ಎನ್ನುತ್ತಾರೆ'' ಎಂದರು.
ಹುಣಸೋಡು ಸ್ಪೋಟದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಇಲಾಖೆಯ ಅನುಮತಿ ಪಡೆದಿಲ್ಲ
ಪೋಲೀಸ್ ಅಧಿಕಾರಿಗಳು ಆಂಧ್ರಪ್ರದೇಶದಿಂದ ಜಿಲೆಟಿನ್ ಕಡ್ಡಿಗಳು ಬಂದಿವೆ ಎನ್ನುತ್ತಿದ್ದಾರೆ. ಸರಬರಾಜು ಮಾಡುವ ಆಂಧ್ರದ ವ್ಯಕ್ತಿಯು ಸ್ಫೋಟಕಗಳ ಪೂರೈಕೆಗೆ ಅನುಮತಿ ಪಡೆಯಬೇಕು. ಸುಧಾಕರ್ ಸಹ ಈ ಸ್ಫೋಟಕಗಳ ಬಳಕೆ ಬಗ್ಗೆ ಯಾವುದೇ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಮೃತಪಟ್ಟ ಕಾರ್ಮಿಕರಿಗೆ 5 ಲಕ್ಷ ರೂ. ಸರ್ಕಾರ ಘೋಷಣೆ ಮಾಡಿದೆ. ಆದರೆ ತಾಂತ್ರಿಕ ಕಾರಣದಿಂದ ಇದುವರೆಗೂ ಮೃತರಿಗೆ ಹಣ ಕೊಟ್ಟಿಲ್ಲ. ಮಾನವೀಯತೆ ಆಧಾರದ ಮೇಲೆ ತಕ್ಷಣವೇ ಪರಿಹಾರ ಕೊಡಬೇಕು, ಜೊತೆಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜಕೀಯ ಪ್ರಭಾವ ಇರುವುದು ಕಂಡುಬರುತ್ತಿದೆ
ಶಿವಮೊಗ್ಗ ಜಿಲ್ಲೆಯಲ್ಲಿ 97 ಕ್ವಾರಿ ಹಾಗೂ 76 ಕ್ರಷರ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಇದರ ಜೊತೆಗೆ ಅಕ್ರಮವಾಗಿ ಸಹ ನಡೆಯುತ್ತಿವೆ. ಹಲವು ವರ್ಷದಿಂದ ಅಕ್ರಮವಾಗಿ ನಡೆಯುತ್ತಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಣ್ಣೋರೆಸುವ ತಂತ್ರವಾಗಿ ಕೆಲವೊಮ್ಮೆ ದಂಡ ಹಾಕಿ ಬಿಡುತ್ತಿದ್ದಾರೆ. ಇದನ್ನೇಲ್ಲಾ ಗಮನಿಸಿದರೆ ರಾಜಕೀಯ ಪ್ರಭಾವ ಇರುವುದು ಕಂಡುಬರುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಹುಣಸೋಡಿಗೆ ಸಿದ್ದರಾಮಯ್ಯ ಭೇಟಿ; ಅಧಿವೇಶನದಲ್ಲಿ ಪ್ರಸ್ತಾಪ?
ಸಚಿವರ ಗಮನಕ್ಕೆ ಬರದೇ ಅಕ್ರಮವಾಗಿ ನಡೆಯುತ್ತಿವೆಯೇ?
ಸಿಎಂ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬರದೇ ಅಕ್ರಮವಾಗಿ ನಡೆಯುತ್ತಿವೆಯೇ? ಅಕ್ರಮದ ಬಗ್ಗೆ ಯಾರಾದರೂ ಕಾರ್ಯಕರ್ತರೊಬ್ಬರು ಅವರ ಗಮನಕ್ಕೆ ತಂದಿಲ್ಲವೇ? ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರೇ ಅಧಿಕಾರಿಗಳಿಗೆ ಸುಮ್ಮನ್ನಿರಿ ಎಂದರೆ ಏನು ಮಾಡಲು ಸಾಧ್ಯ. ಅಕ್ರಮ ನಡೆಯುತ್ತಿರುವುದರ ಜವಾಬ್ದಾರಿಯನ್ನು ಅಧಿಕಾರದಲ್ಲಿರುವವರೇ ಹೊರಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ನಿದ್ರಿಸುತ್ತಿದ್ದೇಯೇ? ಕ್ವಾರಿಯಲ್ಲಿ ಅನುಮತಿ ಇಲ್ಲದೇ ಸ್ಫೋಟ ಮಾಡುತ್ತಿದ್ದರೆ, ಜಿಲ್ಲಾಡಳಿತ ಏಕೆ ನಿದ್ರಾವಸ್ಥೆಯಲ್ಲಿದೆ? ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಇನ್ನೂ ನಿದ್ರಾವಸ್ಥೆಯಲ್ಲಿದ್ದಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ
ಮೃತರಿಗೆ ಹೆಚ್ಚಿನ ಪರಿಹಾರದ ಜೊತೆಗೆ, ಆರೋಪಿಗಳ ವಿರುದ್ಧ ಕೊಲೆ ಕೇಸ್ ದಾಖಲಿಸಬೇಕು. ಜಿಲ್ಲಾಧಿಕಾರಿಗಳಿಂದ ತನಿಖೆ ಮಾಡಿಸಿದರೆ ಆರೋಪಿಗಳಿಗೆ ಹೇಗೆ ಶಿಕ್ಷೆಯಾಗುತ್ತದೆಯೇ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕರು, ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಈ ವಿಷಯವಾಗಿ ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.