ಬಿಜೆಪಿ ತೆಕ್ಕೆಗೆ ಶಿಕಾರಿಪುರ ಪುರಸಭೆ: ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆ
ಶಿವಮೊಗ್ಗ, ಏಪ್ರಿಲ್ 04: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡ ಬಿಜೆಪಿ ಕೆಲವು ಕ್ಷೇತ್ರದಲ್ಲಿ ಇನ್ನೂ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿಯ ಭದ್ರಕೋಟೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪುರಸಭೆ ಚುನಾವಣೆಯೇ ಇದಕ್ಕೆ ಉದಾಹರಣೆಯಾಗಿದೆ. ಶಿಕಾರಿಪುರ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು(ಏಪ್ರಿಲ್ 04) ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುನಂದಾ ಮಂಜುನಾಥ್, ಶಿಕಾರಿಪುರ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಅಭಿನಂದಿಸಿದ್ದಾರೆ. ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಸಿಹಿ ತಿನಿಸುವ ಮೂಲಕ ಶಿಕಾರಿಪುರ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ, 'ಶಿಕಾರಿಪುರ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ಸುನಂದಾ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.
ಶಿಕಾರಿಪುರ ವಿಧಾನಸಭಾ ಕ್ಷೇತ್ರ ಎಂದಿನಿಂದಲೂ ನಮ್ಮ ಪಕ್ಷದ ಆಡಳಿತದಲ್ಲಿ, ಅಭಿವೃದ್ಧಿಯಲ್ಲಿ ಮಾದರಿ ಸುಧಾರಣೆಯನ್ನು ಕಂಡಿದ್ದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸುತ್ತೇನೆ. ಶಿಕಾರಿಪುರ ಪಟ್ಟಣದ ಮೂಲಭೂತ ಸೌಕರ್ಯಗಳೂ ಸೇರಿದಂತೆ ಜನಪರ ಆಡಳಿತ ನೀಡಲು ಪುರಸಭೆಯ ಕಾರ್ಯನಿರ್ವಹಣೆಗೆ ನಮ್ಮ ಸಂಪೂರ್ಣ ಸಹಕಾರ ನಿರಂತರವಾಗಿ ಮುಂದುವರೆಯಲಿದೆ' ಎಂದಿದ್ದಾರೆ.
ಶಿಕಾರಿಪುರ ಪುರಸಭೆಯ ನೂತನ ಅಧ್ಯಕ್ಷೆ ಸುನಂದಾ ಮಂಜುನಾಥ್ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕು ಅಧ್ಯಕ್ಷ ಹನುಮಂತಪ್ಪ, ಸ್ಥಳೀಯ ಬಿಜೆಪಿ ಮುಖಂಡರಾದ ಕೆ.ಎಸ್ ಗುರುಮೂರ್ತಿ, ನಿಕಟ ಪೂರ್ವ ಪುರಸಭಾ ಅಧ್ಯಕ್ಷರಾದ ಶೈಲಾ ಯೋಗೀಶ್ ಮಡ್ಡಿ, ಉಪಾಧ್ಯಕ್ಷರಾದ ರೂಪಾ ಮಂಜುನಾಥ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಇನ್ನು ರಾಜ್ಯದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಇದು ಸುವರ್ಣಾವಕಾಶವಾಗಿದೆ. ಈಗಾಗಲೇ ತೆರೆ ಮರೆಯಲ್ಲಿ ಸ್ಥಳೀಯ ಚುನಾವಣೆಗಳ ಸಿದ್ಧತೆ ಜೋರಾಗಿದ್ದು, ಈ ಚುನಾವಣೆಗಳ ಮೂಲಕವೇ ರಾಜ್ಯ ನಾಯಕರು ಪಕ್ಷವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ. ಒಂದು ವೇಳೆ ಈ ಚುನಾವಣೆಗಳನ್ನು ನಿರ್ಲಕ್ಷಿಸಿದರೆ ರಾಜ್ಯದಲ್ಲಿಯೂ ಪಕ್ಷಗಳು ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications