ಶಿವಮೊಗ್ಗ ಉಪ ಚುನಾವಣೆ : ಬಿ.ವೈ.ರಾಘವೇಂದ್ರ ಒಮ್ಮತದ ಅಭ್ಯರ್ಥಿಯೇ?
ಶಿವಮೊಗ್ಗ, ಅಕ್ಟೋಬರ್ 08 : ಶಿವಮೊಗ್ಗ ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಸೋಮವಾರ ಬಿ.ವೈ.ರಾಘವೇಂದ್ರ ಅವರು ನಗರದ ಕೋಟೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ವಿಶೇಷ ಪೂಜೆ ಸಲ್ಲಿಸಿದರು. ಹಲವಾರು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ.3ರಂದು ಉಪ ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆದ್ದವರ ಅಧಿಕಾರಾವಧಿ ಸುಮಾರು ನಾಲ್ಕು ತಿಂಗಳು. ಆದರೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ದವಾಗಬೇಕಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಬಿ.ವೈ.ರಾಘವೇಂದ್ರ ಅವರು ಅಭ್ಯರ್ಥಿಯಾಗಿದ್ದು, ಹಲವು ಟಿಕೆಟ್ ಆಕಾಂಕ್ಷಿಗಳಿಗೂ ನಿರಾಸೆ ಮೂಡಿಸಿದೆ....

ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ
ಶನಿವಾರ ಶಿಕಾರಿಪುರದ ಮಾರನಹಳ್ಳಿಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು, 'ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.

ಹಲವು ಆಕಾಂಕ್ಷಿಗಳಿದ್ದರು
ಬಿ.ಎಸ್.ಯಡಿಯೂರಪ್ಪ ಅವರು ಬಿ.ವೈ.ರಾಘವೇಂದ್ರ ಹೆಸರು ಘೋಷಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಎಂ.ಬಿ.ಭಾನುಪ್ರಕಾಶ್, ದತ್ತಾತ್ರಿ ಸೇರಿದಂತೆ ಹಲವು ನಾಯಕರು ಆಕಾಂಕ್ಷಿಗಳಾಗಿದ್ದರು. ಆದರೆ, ಯಡಿಯೂರಪ್ಪ ಏಕಾಏಕಿ ಪುತ್ರನ ಹೆಸರನ್ನು ಘೋಷಣೆ ಮಾಡಿದರು. ಆದ್ದರಿಂದ, ರಾಘವೇಂದ್ರ ಅವರು ಒಮ್ಮತದ ಅಭ್ಯರ್ಥಿಯೇ? ಎಂಬ ಅನುಮಾನ ಉಂಟಾಗಿದೆ.

ಹಿಂದೆ ಸಂಸದರಾಗಿದ್ದರು
ಬಿ.ವೈ.ರಾಘವೇಂದ್ರ ಅವರು 2009-2014ರ ತನಕ ಶಿವಮೊಗ್ಗ ಸಂಸದರಾಗಿದ್ದರು. ಸತತ ಎರಡು ಚುನಾವಣೆಗಳನ್ನು ಎದುರಿಸಿದ ಅನುಭವ ಅವರಿಗೆ ಇದೆ. ಸುಮಾರು 10 ವರ್ಷಗಳಿಂದ ಕ್ಷೇತ್ರದ ಮೇಲೆ ಅವರ ಕುಟುಂಬವೇ ಹಿಡಿತವನ್ನು ಹೊಂದಿದೆ. 2019ರ ಲೋಕಸಭೆ ಚುನಾವಣೆಗೂ ಅವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಬಿಜೆಪಿಗೆ ಗೆಲುವು ಸುಲಭ?
2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಸ್ಥಾನಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದಾರೆ. ಆದ್ದರಿಂದ, ಉಪ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ. ಜಿಲ್ಲೆಯಲ್ಲಿ ಯಾವುದೇ ಜೆಡಿಎಸ್ ಶಾಸಕರು ಗೆದ್ದಿಲ್ಲ. ಆದರೆ, ರಾಜ್ಯದಲ್ಲಿ ಅವರ ಪಕ್ಷವೇ ಅಧಿಕಾರದಲ್ಲಿದೆ. ಆದ್ದರಿಂದ, ಪಕ್ಷ ಕಾಂಗ್ರೆಸ್ ಜೊತೆ ಸೇರಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.












Click it and Unblock the Notifications