ಕ್ಯಾನ್ಸರ್ ಔಷಧಿ ನೀಡುತ್ತಿದ್ದ ನರಸೀಪುರ ನಾರಾಯಣ ಮೂರ್ತಿ ವಿಧಿವಶ
ಶಿವಮೊಗ್ಗ, ಜೂನ್ 25 : ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ಶಿವಮೊಗ್ಗದ ವೈದ್ಯ ನರಸೀಪುರ ನಾರಾಯಣ ಮೂರ್ತಿ ವಿಧವಶರಾಗಿದ್ದಾರೆ. ನಾರಾಯಣ ಮೂರ್ತಿ ಅವರ ಬಳಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ದೇಶದ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನರಸೀಪುರದ ನಾರಾಯಣ ಮೂರ್ತಿ ಹೃಧಯಾಘಾತದಿಂದ ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್ ಔಷಧಿಯ ಮಾಂತ್ರಿಕ ಎಂದೇ ನಾರಾಯಣ ಮೂರ್ತಿ ಖ್ಯಾತಿ ಪಡೆದಿದ್ದರು.
ಗುರುವಾರ ಮತ್ತು ಭಾನುವಾರ ನಾರಾಯಣ ಮೂರ್ತಿಗಳು ಔಷಧಿಯನ್ನು ನೀಡುತ್ತಿದ್ದರು. ಮುಂಜಾನೆಯಿಂದಲೇ ಅವರ ಮನೆಯ ಮುಂದೆ ಜನರು ಔಷಧಿಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ವಿವಿಧ ರೋಗ ಹೆಚ್ಚಾಗಿ ಕ್ಯಾನ್ಸರ್ ರೋಗಿಗಳು ಅವರ ಬಳಿ ಔಷಧಿ ಪಡೆಯುತ್ತಿದ್ದರು.

ಮಾರ್ಚ್ನಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ನಾರಾಯಣ ಮೂರ್ತಿಗಳು ಔಷಧಿ ನೀಡುವುದನ್ನು ನಿಲ್ಲಿಸಿದ್ದರು. ಜಿಲ್ಲಾ ಆರೋಗ್ಯ ಇಲಾಖೆಯೇ ಔಷಧಿ ನೀಡದಂತೆ ಅವರಲ್ಲಿ ಮನವಿ ಮಾಡಿತ್ತು.
ದೇಶದ ವಿವಿಧ ರಾಜ್ಯಗಳಿಂದ ಔಷಧಿ ಪಡೆಯಲು ಜನರು ನರಸೀಪುರಕ್ಕೆ ಆಗಮಿಸುತ್ತಿದ್ದರು. ಆದ್ದರಿಂದ, ಯಾರಿಂದಾದರೂ ಕೊರೊನಾ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಔಷಧಿ ನೀಡುವುದನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿತ್ತು.
ನರಸೀಪುರ ನಾರಾಯಣ ಮೂರ್ತಿ ಅವರು ಮೂಲತಃ ಶಿಕಾರಿಪುರದವರು. ಗುರುವಾರ ಮತ್ತು ಭಾನುವಾರ ನಾರಾಯಣ ಮೂರ್ತಿ ಅವರ ಬಳಿ ಚಿಕಿತ್ಸೆ ಪಡೆಯಲು 700ಕ್ಕೂ ಅಧಿಕ ಜನರು ಆಗಮಿಸುತ್ತಿದ್ದರು. ತಾವೇ ಕಾಡಿನಿಂದ ಗಿಡಮೂಲಿಕೆಗಳನ್ನು ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧಪಡಿಸುತ್ತಿದ್ದರು.
ಸುಮಾರು 25 ವರ್ಷಗಳಿಂದ ನಾರಾಯಣ ಮೂರ್ತಿಗಳು ಇಂತಹ ಸೇವೆಯಲ್ಲಿ ತೊಡಗಿದ್ದರು. ಕಾನ್ಸರ್ ಔಷಧಿಗೆ ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ವಸೂಲಿ ಮಾಡುವಾಗ ನಾರಾಯಣ ಮೂರ್ತಿಗಳು ಕೇವಲ 100 ರೂ.ಗಳನ್ನು ಪಡೆಯುತ್ತಿದ್ದರು.
ಮಧುಮೇಹ, ಅಲರ್ಜಿ, ಕ್ಯಾನ್ಸರ್, ಚರ್ಮ ರೋಗಗಳು, ಕೀಲು ಮತ್ತು ಮೂಳೆ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ನಾರಾಯಣ ಮೂರ್ತಿಗಳು ಔಷಧಿಯನ್ನು ನೀಡುತ್ತಿದ್ದರು. 'ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್' ಇದೊಂದು ಅಪರೂಪದ ವೈದ್ಯಕೀಯ ರೀತಿ ಎಂದು ಕಾರ್ಯಕ್ರಮ ಮಾಡಿ ಶ್ಲಾಘನೆ ಮಾಡಿತ್ತು.












Click it and Unblock the Notifications