ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
ಶಿವಮೊಗ್ಗ, ಜನವರಿ 21: ಶಿವಮೊಗ್ಗದ ಹುಣಸೋಡಿನಲ್ಲಿ ರೈಲ್ವೇ ಕ್ರಷರ್ನಲ್ಲಿ ಉಂಟಾದ ಭಾರಿ ಸ್ಫೋಟದಲ್ಲಿ ಕನಿಷ್ಠ 15 ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಸುಮಾರು 50 ಡೈನಮೈಟ್ಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಡೈನಮೈಟ್ ಸಿಡಿದು ಭಾರಿ ಅನಾಹುತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಕಾರ್ಮಿಕರ ದೇಹಗಳ ಛಿದ್ರ ಛಿದ್ರವಾಗಿವೆ. ಲಾರಿಯ ತುಂಬಾ ಡೈನಮೈಟ್ಗಳನ್ನು ಸಾಗಿಸಲಾಗುತ್ತಿತ್ತು. ಆಗ ಈ ಸ್ಫೋಟ ಸಂಭವಿಸಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಲ್ಲ ಕಾರ್ಮಿಕರೂ ಮೃತಪಟ್ಟಿದ್ದಾರೆ. ಅವರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಲಾರಿ ಸಂಪೂರ್ಣ ಜನಜ್ಜುಗುಜ್ಜಾಗಿದೆ, ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ.
ಐದಾರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಘಟನೆಯಲ್ಲಿ ಇನ್ನಷ್ಟು ಜನರು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಕತ್ತಲೆಯಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಮುಂದೆ ಓದಿ.
ಅಕ್ರಮ ಗಣಿಗಾರಿಕೆ ಆರೋಪ
ಹುಣಸೋಡಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರ ವಿರುದ್ದ ಅನೇಕ ದೂರುಗಳನ್ನು ನೀಡಿದ್ದರೂ ಅದನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಲ್ಲುಬಂಡೆಯ ಮಧ್ಯೆ ಕ್ರಷರ್ ಕೆಲಸ ನಡೆಯುತ್ತಿತ್ತು. ಸುತ್ತಮುತ್ತಲೂ ಕಲ್ಲುಬಂಡೆಗಳಿಂದ ಆವರಿಸಿದ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಮೃತರಲ್ಲಿ ಸ್ಥಳೀಯರು?
ರಾತ್ರಿ 10-20 ರಿಂದ 10-25ರ ವೇಳೆಗೆ ಶಿವಮೊಗ್ಗದಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಇದು ಭೂಕಂಪ ಎಂದೇ ಹೇಳಲಾಗಿತ್ತು. ಆದರೆ ಇದು ವಾಸ್ತವವಾಗಿ ಅಕ್ರಮ ಕಲ್ಲು ಕ್ವಾರಿಯಲ್ಲಿ ಉಂಟಾದ ಸ್ಫೋಟ ಎಂದು ತಿಳಿದುಬಂದಿದೆ. ಇಲ್ಲಿ ಸ್ಥಳೀಯರು ಕೂಡ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಅವರು ಕೂಡ ಮೃತಪಟ್ಟಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ.
ಸಂಸದ ರಾಘವೇಂದ್ರ ಹೇಳಿಕೆ
ಅಕ್ರಮ ಗಣಿಗಾರಿಕೆ ಮಾಡಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಗೆ ತೆರಳುತ್ತಿದ್ದಾರೆ. ಅವರಿಂದ ಮಾಹಿತಿ ಪಡೆಯುತ್ತೇನೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ಸ್ಫೋಟದ ತೀವ್ರತೆ ಮತ್ತು ಭೂಕಂಪನಕ್ಕೆ ತಮ್ಮ ಮನೆಯಲ್ಲಿಯೂ ಕಿಟಕಿ ಗಾಜುಗಳು ಒಡೆದಿವೆ. ಉಳಿದ ಕಡೆಗಳಲ್ಲಿ ಉಂಟಾದ ಭೂಕಂಪನದ ಅನುಭವಕ್ಕೂ, ಈ ಘಟನೆಗೂ ಸಂಬಂಧವಿದೆಯೇ ಎನ್ನುವುದು ತನಿಖೆ ನಡೆಯಬೇಕಿದೆ ಎಂದಿದ್ದಾರೆ.
ಜೀವಂತ ಡೈನಾಮೈಟ್ ಭೀತಿ
ಅನಿಲ್ ಎಂಬುವವರ ಒಡೆತನಕ್ಕೆ ಸೇರಿದ ಕ್ರಷರ್ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಗಂಟೆ ಕಳೆದರೂ ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಹಾಗೆಯೇ ಸ್ಥಳದಲ್ಲಿ ಸ್ಫೋಟಗೊಳ್ಳದ ಜೀವಂತ ಡೈನಾಮೈಟ್ಗಳು ಇರುವ ಸಾಧ್ಯತೆ ಇದೆ ಎಂಬ ಭೀತಿ ಕೂಡ ಇದೆ.
ವಿವಿಧೆಡೆ ಕಂಪನಕ್ಕೆ ಇದೇ ಕಾರಣ?
ಶಿವಮೊಗ್ಗ ಮಾತ್ರವಲ್ಲದೆ, ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಕೂಡ ನೆಲ ಕಂಪಿಸಿದ ಅನುಭವ ಆಗಿತ್ತು. ಹೀಗಾಗಿ ಇಲ್ಲಿನ ಕಂಪನಕ್ಕೂ ಹುಣಸೋಡಿನಲ್ಲಿ ಉಂಟಾದ ಸ್ಫೋಟಕ್ಕೂ ಸಂಬಂಧವಿದೆಯೇ ಎನ್ನುವುದು ಖಾತರಿಯಾಗಿಲ್ಲ. ಸ್ಥಳಕ್ಕೆ ಡಿಸಿ ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಜೀವಂತ ಡೈನಾಮೈಟ್ ಅಪಾಯ
ಅನೇಕ ಕಡೆಗಳಲ್ಲಿ ಜಲ್ಲಿಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ಒಳಗೆ ಬರಲು ಮಣ್ಣಿನ ರಸ್ತೆಗಳು ಮಾತ್ರ ಇವೆ. ಇಲ್ಲಿಗೆ ಬರಲು ಸೂಕ್ತ ದಾರಿಯಿಲ್ಲ. ಅದರಲ್ಲಿಯೂ ಅನೇಕ ದಾರಿಗಳು ಈ ಕ್ವಾರಿಯ ನಡುವೆ ಇದ್ದು, ಪ್ರತಿ ಭಾಗದಲ್ಲಿಯೂ ಜಲ್ಲಿ ಕ್ರಷರ್ಗಳನ್ನು ಇರಿಸಲಾಗಿದೆ. ಹೀಗಾಗಿ ಇಲ್ಲಿ ಎಷ್ಟು ಕಾರ್ಮಿಕರು ಇದ್ದು, ಎಷ್ಟು ಮಂದಿ ಮೃತಪಟ್ಟಿದ್ದಾರೆ, ಯಾರಾದರೂ ಬದುಕುಳಿದಿದ್ದಾರೆಯೇ ಎನ್ನುವುದು ತಿಳಿಯುತ್ತಿಲ್ಲ. ಸುತ್ತಮುತ್ತಲಿನ ಸ್ಥಳಗಳಲ್ಲಿ ಕೂಡ ವಿದ್ಯುತ್ ಕಡಿತವಾಗಿರುವುದರಿಂದ ಅಲ್ಲಿ ಪತ್ತೆ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ. ಜಿಲೆಟಿನ್ ಕಡ್ಡಿಗಳು ಎಲ್ಲೆಂದರಲ್ಲಿ ಬಿದ್ದಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಸ್ಥಳಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ಸ್ಥಳೀಯರನ್ನು ತಡೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ನಿಗೂಢ ಸ್ಥಳ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕ್ರಷರ್ ಯಾರಿಗೆ ಸೇರಿದ್ದು, ಹೇಗೆ ಘಟನೆ ಸಂಭವಿಸಿದೆ ಎನ್ನುವುದು ಅವರಿಗೂ ತಿಳಿದಿಲ್ಲ. ಇಲ್ಲಿ ಕ್ರಷರ್ ನಡೆಸುತ್ತಿದ್ದವರು ಯಾರು ಎಂಬಮಾಹಿತಿ ಸ್ಥಳೀಯರಿಗೂ ಇಲ್ಲ. ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಇಲ್ಲದ ಕಾರಣ ಪ್ರತಿ ವಿಚಾರವೂ ನಿಗೂಢವಾಗಿದೆ.
ಬೆಳಕು ಹರಿದ ಬಳಿಕವೇ ಮಾಹಿತಿ
ಘಟನೆಯ ಸ್ಥಳದ ಸನ್ನಿವೇಶ ಭಯಾನಕವಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಮಿಕರ ಅಂಗಗಳು ಛಿದ್ರ ಛಿದ್ರವಾಗಿದ್ದು, ಒಂದೊಂದು ಭಾಗಗಳು ಒಂದೊಂದು ಕಡೆ ಬಿದ್ದಿವೆ. ಲಾರಿಯ ಭಾಗಗಳು ಎರಡು ಮೂರು ಕಿಮೀ ವ್ಯಾಪ್ತಿಗಳಲ್ಲಿ ಹಾರಿ ಬಿದ್ದಿವೆ. ರಾತ್ರಿ ಕತ್ತಲಿನಲ್ಲಿ ಪರಿಶೀಲನೆಗೆ ತೆರಳಿದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾಲಿಡುವಂತಾಗಿದೆ. ಇಡೀ ಪ್ರದೇಶದಲ್ಲಿ ಪರಿಶೀಲನೆ ನಡೆಸಲು ಬೆಳಕಿನ ಅಗತ್ಯವಿದೆ. ಹೀಗಾಗಿ ಬೆಳಕು ಹರಿದ ಬಳಿಕವೇ ಘಟನೆಯ ಅನಾಹುತದ ಸ್ಪಷ್ಟ ಚಿತ್ರಣ ದೊರಕಲಿದೆ.