ಯಡಿಯೂರಪ್ಪ ವಿರುದ್ಧ ಪ್ರಚಾರಕ್ಕೆ ಕೇಜ್ರಿವಾಲ್
ಶಿವಮೊಗ್ಗ, ಮಾ. 14 : ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ವಿರುದ್ಧ ಅಭ್ಯರ್ಥಿಯನ್ನು ಆಮ್ ಆದ್ಮಿ ಪಕ್ಷ ಕಣಕ್ಕಿಳಿಸಿದೆ. ಸದ್ಯ, ಯಡಿಯೂರಪ್ಪ ಅವರ ವಿರುದ್ಧವಾಗಿ ಪ್ರಚಾರ ಮಾಡಲು ಸ್ವತಃ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಧರ ಕಲ್ಲಹಳ್ಳ ಈ ಕುರಿತು ಮಾಹಿತಿ ನೀಡಿದ್ದು, ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ಕಾಗಿ ಅರವಿಂದ ಕೇಜ್ರಿವಾಲ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಆದರೆ, ಅವರು ಆಗಮಿಸುವ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೆಸರು ಸಹ ಇತ್ತು. ಆದ್ದರಿಂದ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಈಗ ಪಕ್ಷದ ಅಭ್ಯರ್ಥಿ ಪರ ಮತ್ತು ಯಡಿಯೂರಪ್ಪ ವಿರುದ್ಧ ಪ್ರಚಾರ ಮಾಡಲು ಕೇಜ್ರಿ ಆಗಮಿಸುತ್ತಿದ್ದಾರೆ. [ಆಮ್ ಆದ್ಮಿ ಅಭ್ಯರ್ಥಿಗಳ ಪರಿಚಯ]
ಅರವಿಂದ್ ಕೇಜ್ರಿವಾಲ್ ಕರ್ನಾಟಕದಲ್ಲಿ ಪ್ರಚಾರ ನಡೆಸಲು ಐದು ದಿನಗಳನ್ನು ಮೀಸಲಾಗಿಟ್ಟಿದ್ದಾರೆ. ಈ ಪೈಕಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಮಾ. 16ರಂದು ಕೇಜ್ರಿವಾಲ್ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುವ ಅವರು, ಶಿವಮೊಗ್ಗ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಶ್ರೀಧರ ಕಲ್ಲಹಳ್ಳ ಹೇಳಿದರು. [ಕೇಜ್ರಿವಾಲ್ ಭ್ರಷ್ಟರ ಪಟ್ಟಿಯಲ್ಲಿ ಬಿಎಸ್ವೈ]
ಚುನಾವಣೆಗೆ ಸಿದ್ಧತೆ : ಸದ್ಯ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಸಾಗರ, ತೀರ್ಥಹಳ್ಳಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚುನಾವಣಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಶುಕ್ರವಾರ ಮತ್ತು ಶನಿವಾರ ಎಲ್ಲಾ ತಾಲೂಕು ಮುಖಂಡರೊಂದಿಗೂ ಚುನಾವಣೆ ಕುರಿತು ಚರ್ಚೆ ನಡೆಸಲು ಸಭೆ ನಡೆಸಲಾಗುವುದು ಎಂದರು.
ಅಂದಹಾಗೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ನ ಮಂಜುನಾಥ್ ಭಂಡಾರಿ, ಜೆಡಿಎಸ್ ನಿಂದ ಮಧು ಬಂಗಾರಪ್ಪ ಅಥವ ಗೀತಾ ಶಿವರಾಜ್ ಕುಮಾರ್, ಆಮ್ ಆದ್ಮಿ ಅಭ್ಯರ್ಥಿ ಶ್ರೀಧರ ಕಲ್ಲಹಳ್ಳ ಪೈಪೋಟಿ ನೀಡಲಿದ್ದಾರೆ.












Click it and Unblock the Notifications