ಶಿವಮೊಗ್ಗ: ನಿವೇಶನ ಅರ್ಜಿ ಸಲ್ಲಿಸಿದವರು ಡಿ.31 ರೊಳಗೆ ವಂತಿಕೆ ಹಣ ಪಾವತಿಸಬೇಕು
ಶಿವಮೊಗ್ಗ, ನವೆಂಬರ್ 5: ಶಿವಮೊಗ್ಗ ಮಹಾನಗರ ಪಾಲಿಕೆಯು ಶಿವಮೊಗ್ಗ ಸಮೀಪದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಶಿವಮೊಗ್ಗ ನಗರದ ನಿವೇಶನ ರಹಿತರಿಗೆ ಜಿ+2 ಮಾದರಿಯ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಿದ್ದು, 2017-18 ಮತ್ತು 2018-19ನೇ ಸಾಲಿನಲ್ಲಿ ಅರ್ಹರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಅಂತೆಯೇ 2018-19ನೇ ಸಾಲಿನಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಈಗಾಗಲೇ 1113 ಅರ್ಹ ನಿವೇಶನ ರಹಿತರನ್ನು ಆಯ್ಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಒಟ್ಟು 2696 ಫಲಾನುಭವಿಗಳು ಸಂಪೂರ್ಣ ವಂತಿಕೆ ಹಣವನ್ನು ಪಾವತಿಸಿರುತ್ತಾರೆ.
ಇತ್ತೀಚೆಗೆ ನಡೆದ ಆಶ್ರಯ ಸಮಿತಿ ಸಭೆಯ ನಿರ್ಣಯದಂತೆ ಇನ್ನುಳಿದ ಸಂಪೂರ್ಣ ವಂತಿಕೆ ಹಣವನ್ನು ಪಾವತಿಸದ ನಿವೇಶನ ರಹಿತರು ಹಾಗೂ 2018-19ನೇ ಸಾಲಿನಲ್ಲಿ ಆಯ್ಕೆಯಾದ 1113 ಅರ್ಜಿದಾರರು ಕೂಡಲೇ ತಮಗೆ ನಿಗದಿಪಡಿಸಿದ ವಂತಿಕೆ ಹಣವನ್ನು ಶೇಷಾದ್ರಿಪುರಂನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಸಂಖ್ಯೆ 0521101046136ಗೆ ಡಿಸೆಂಬರ್ 31 ರೊಳಗಾಗಿ ಪಾವತಿಸಬೇಕು.

ಚಲನ್ ರಸೀದಿಯನ್ನು ಈ ಹಿಂದೆ ಪಾವತಿಸಿದ ವಂತಿಕೆ ಮೊತ್ತದ ರಸೀದಿ ನಕಲು, ರೇಷನ್ ಕಾರ್ಡ್ ಝೆರಾಕ್ಸ್ ಪ್ರತಿ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಅರ್ಜಿದಾರರ ಭಾವಚಿತ್ರ, ಆದಾಯ ಪ್ರಮಾಣಪತ್ರ, ಜಾತಿ ಮತ್ತು ಆದಾಯ ದೃಢೀಕರಣ ಮತ್ತು ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿಗಳನ್ನು ನಿಗದಿಪಡಿಸಿದ ದಿನಾಂಕದೊಳಗೆ ಒದಗಿಸಬೇಕು.
ವಿಳಾಸ: ಆಶ್ರಯ ಕಚೇರಿ, 2ನೇ ಮಹಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣ ಕಟ್ಟಡ, ನೆಹರೂ ರಸ್ತೆ, ಶಿವಮೊಗ್ಗ ವಿಳಾಸದಲ್ಲಿ ಖುದ್ದಾಗಿ ನೀಡುವಂತೆ ಮಹಾನಗರಪಾಲಿಕೆ ನಗರ ಆಶ್ರಯ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications