ಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್ಕುಮಾರ್ ಹೆಗಡೆ
ಸಾಗರ, ಜನವರಿ 13: ಇತ್ತೀಚೆಗಷ್ಟೆ 'ಜಾತ್ಯಾತೀತರಿಗೆ ಅಪ್ಪ ಅಮ್ಮ ಇಲ್ಲ' ಎಂದು ಹೇಳಿ ವಿವಾದ ಎಬ್ಬಿಸಿದ್ದ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಮತ್ತೆ ಜಾತ್ಯಾತೀತರನ್ನು ವ್ಯಂಗ್ಯ ಮಾಡಿದ್ದಾರೆ.
ಸಾಗರ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ನನ್ನ ಜಾತ್ಯಾತೀತ ಹೇಳಿಕೆಯಿಂದ ಕೆಲವು ಜಾತ್ಯಾತೀತರಿಗೆ ಚಡ್ಡಿಯಲ್ಲಿ ಬೆಂಕಿ ಹತ್ತಿಕೊಂಡಿದೆ' ಎಂದು ವ್ಯಂಗ್ಯ ಮಾಡಿದ್ದಾರೆ.
ಜಾತ್ಯತೀತ ಎಂಬುದು ಯಾರೋ ಫ್ಯಾಷನ್ಗೆ ಹೇಳಿಕೊಟ್ಟಿರುವ ವಿಷಯ, ಜಾತ್ಯತೀತ ಹೆಸರಿನಲ್ಲಿ ನಮ್ಮತನ ಮರೆಯುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.

'ಕೆಲವು ಬುದ್ಧಿಜೀವಿಗಳು ರಾಮನ ಅಪ್ಪ-ಅಮ್ಮ ಯಾರು ಎಂದು ಕೇಳುತ್ತಾರೆ. ಇಂಥವರಿಗೆ ಅವರ ಅಪ್ಪ-ಅಮ್ಮ ಯಾರು ಎಂಬುದೇ ಗೊತ್ತಿರುವುದಿಲ್ಲ, ತಾವು ಬರೆದಿದ್ದೇ ಸಾಹಿತ್ಯ ಎಂದು ಪ್ರತಿಪಾದಿಸುವ ಮೂರ್ಖರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.' ಎಂದು ಕಠುವಾಗಿ ಟೀಕಿಸಿದರು.
ರಾಮ, ಗಣಪತಿ, ಕಾಳಿ ಮೊದಲಾದ ಹಿಂದೂ ದೇವರು ಸೌಮ್ಯ ದೇವತೆಗಳಲ್ಲ, ಬದಲಾಗಿ ಶಕ್ತಿ ದೇವತೆಗಳು. ಅನ್ಯಾಯದ ವಿರುದ್ಧ ಶಸ್ತ್ರ ಹಿಡಿದು ಸೆಟೆದು ನಿಂತವರು. ಹಿಂದೂ ದೇವತೆಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಕೈಯಲ್ಲಿ ಕತ್ತಿ, ಕೊಡಲಿ ಹಿಡಿದು ನಿಲ್ಲಬೇಕಿತ್ತು. ಸೋಗಲಾಡಿತನದ ಸಭ್ಯತೆ ಇದ್ದವರು ರಾಮ, ಗಣಪತಿ, ಕಾಳಿ ಮೊದಲಾದ ಶಕ್ತಿ ದೇವತೆಗಳಿಗೆ ನಮಸ್ಕಾರ ಮಾಡುವ ಅಗತ್ಯವಿಲ್ಲ' ಎಂದು ಉದ್ರೇಕದಿಂದ ಮಾತನಾಡಿದರು.











Click it and Unblock the Notifications