ಶಿವಮೊಗ್ಗ,ಭದ್ರಾವತಿಯಲ್ಲಿ ಎಸಿಬಿ ದಾಳಿ; ದಾಖಲೆಗಳ ಪರಿಶೀಲನೆ
ಶಿವಮೊಗ್ಗ, ಡಿಸೆಂಬರ್ 31; ಶಿವಮೊಗ್ಗ ಹಾಗೂ ಭದ್ರಾವತಿಯ ಹಲವು ಕಡೆಗಳಲ್ಲಿ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿ ವಿರುದ್ಧ ಬಂದಿದ್ದ ದೂರುಗಳನ್ನು ಆದರಿಸಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಭ್ರಷ್ಟಾಚಾರ ನಿಗ್ರಹ ದಳದ ದಾವಣಗೆರೆ ಎಸ್ಪಿ ಜಯಪ್ರಕಾಶ್, ಶಿವಮೊಗ್ಗ ಎಸಿಬಿ ಡಿವೈಎಸ್ಪಿ ಜೆ. ಲೋಕೇಶ್, ದಾವಣಗೆರೆ ಡಿವೈಎಸ್ಪಿ ಪರಮೇಶ್ವರ್, ಪೊಲೀಸ್ ನಿರೀಕ್ಷಕ ವೀರೇಶ್ ನೇತೃತ್ವದ ತಂಡ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯನ್ನು ನಡೆಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುರೇಶ್ಗೆ ಸೇರಿದ ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ. ಶಿವಮೊಗ್ಗ ನಗರದ ಗುಂಡಪ್ಪ ಶೆಡ್ನ ನಿವಾಸ, ಗೋಪಾಲ ಗೌಡ ಬಡಾವಣೆಯಲ್ಲಿನ ನಿವಾಸ, ಭದ್ರಾವತಿಯ ಹುಣಸೇಕಟ್ಟೆಯ ತೋಟದ ಮನೆಯ ಮೇಲೆ ದಾಳಿ ಮಾಡಲಾಗಿದೆ.

ಶಿವಮೊಗ್ಗದ ಆಲ್ಕೊಳದಲ್ಲಿರುವ ಇಲಾಖೆಯ ಕಚೇರಿಯಲ್ಲೂ ಸಹ ಅಧಿಕಾರಿಗಳ ತಂಡ ಪರಿಶೀಲನೆಯನ್ನು ನಡೆಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿಯನ್ನು ಮಾಡಲಾಗಿದೆ.












Click it and Unblock the Notifications