ಶಿಕಾರಿಪುರ: ಬಿಜೆಪಿ ಸೇರ್ಪಡೆಗೊಂಡ 2 ಕಾಂಗ್ರೆಸ್, 3 ಜನ ಸ್ವತಂತ್ರ ಪುರಸಭಾ ಸದಸ್ಯರು
ಶಿವಮೊಗ್ಗ, ಜುಲೈ 23: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪುರಸಭಾ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಇಂದು ಐವರು ಪುರಸಭೆ ಸದಸ್ಯರು ಸಂಸದ ಬಿ.ವೈ ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.
Recommended Video
ಒಂದನೇ ವಾರ್ಡ್ ನ ಸ್ವತಂತ್ರ ಪುರಸಭಾ ಸದಸ್ಯರಾದ ಪ್ರಶಾಂತ್ ಜಿನಳ್ಳಿ, 8ನೇ ವಾರ್ಡ್ ಸ್ವತಂತ್ರ ಪುರಸಭಾ ಸದಸ್ಯರಾದ ಸಾದೀಕ್, 16ನೇ ವಾರ್ಡ್ ನ ಸ್ವತಂತ್ರ ಸದಸ್ಯರಾದ ರೇಖಾಬಾಯಿ, ಹಾಗೂ 9ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯರಾಗಿದ ರಮೇಶ್ (ಗುಂಡ), 20ನೇ ವಾರ್ಡ್ ಕಾಂಗ್ರೆಸ್ ಸದಸ್ಯರಾಗಿದ ಉಮಾವತಿ ಇಂದು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಕಾಂಗ್ರೆಸ್ ಸದಸ್ಯರಾಗಿದ ರಮೆಶ್ ಹಾಗೂ ಉಮಾವತಿ ತಮ್ಮ ಪುರಸಭಾ ಸದಸ್ಯತ್ವ ಸ್ಥಾನಕ್ಕೆ ಮಾರ್ಚ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಇದನ್ನು ಶಿಕಾರಿಪುರ ತಾಲ್ಲೂಕು ಕಾಂಗ್ರೆಸ್ ಆಪರೇಷನ್ ಕಮಲ ಎಂದು ಆರೋಪ ಮಾಡಿದ್ದರು.

ಅಭಿವೃದ್ಧಿ ಭರವಸೆ ಮೇರೆಗೆ ಪಕ್ಷ ಸೇರ್ಪಡೆ
ಬಿಜೆಪಿ ಪಕ್ಷವನ್ನು ಸೇರಿದ್ದರ ಕುರಿತು ಮಾತನಾಡಿದ ರಮೇಶ್ (ಗುಂಡ), ನಾವು ಯಾವುದೇ ಆಮಿಷಗಳಿಗೆ ಒಳಗಾಗಿ ಪಕ್ಷ ಸೇರಿಲ್ಲ, ಶಿಕಾರಿಪುರದ ಆರಾಧ್ಯದೇವತೆ ಶ್ರೀ ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿ ಕುರಿತು ಸಂಸದರೊಂದಿಗೆ ಮಾತನಾಡಿ ಅವರ ಭರವಸೆ ಮೇರೆಗೆ ಬಿಜೆಪಿ ಪಕ್ಷವನ್ನು ಸೇರಿದ್ದೇವೆ ಎಂದರು.

ಯಡಿಯೂರಪ್ಪನವರ ಆಡಳಿತ ಗಮನಿಸಿ ನಾವು ಪಕ್ಷಕ್ಕೆ ಬಂದಿದ್ದೇವೆ
ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದು, ಕೊರೊನಾ ವೈರಸ್ ಸಂಕಷ್ಟ ಸಮಯದಲ್ಲೂ ಸಮರ್ಥವಾಗಿ ಆಡಳಿತ ಮಾಡುತ್ತಿರುವ ಬಿ.ಎಸ್ ಯಡಿಯೂರಪ್ಪನವರ ಆಡಳಿತ ಗಮನಿಸಿ ನಾವು ಪಕ್ಷಕ್ಕೆ ಬಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಮೂವರು ಪಕ್ಷೇತರ ಪುರಸಭಾ ಸದಸ್ಯರು ನಾವು ಹಿಂದೆಯೂ ಬಿಜೆಪಿ ಪಕ್ಷದಲ್ಲಿ ಇದ್ದು ಪಕ್ಷದ ಟಿಕೆಟ್ ಸಿಗದ ಕಾರಣ ನಾವು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದೇವು, ನಾವು ಬಿಜೆಪಿಯಲ್ಲಿಯೇ ಮುಂದುವರಿಯುತ್ತೇವೆ ಎಂದರು.

ಯಡಿಯೂರಪ್ಪ ಶಿಕಾರಿಪುರ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ
ಈ ವೇಳೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಗುರುತಿಸಿ ಬೆಂಬಲ ನೀಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಶಿಕಾರಿಪುರ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದು, ಮಾದರಿ ತಾಲ್ಲೂಕು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಕಾರಣಾಂತರಗಳಿಂದ ಬೇರೆ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಪುರಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಪಕ್ಷವನ್ನು ಸೇರಿದ್ದಾರೆ ಎಂದು ತಿಳಿಸಿದರು.

ಪಟ್ಟಣ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಜೊತೆಯಾಗೋಣ
ತಮ್ಮ ತಮ್ಮ ವಾರ್ಡ್ ಗಳ ಅಭಿವೃದ್ಧಿ ಬಗ್ಗೆ ಹಾಗೂ ವಿಶೇಷವಾಗಿ ರಮೇಶ್ ಗುಂಡ ಅವರು ಶ್ರೀ ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇಂದು ಸೇರಿದ ಎಲ್ಲಾ ಸದಸ್ಯರು ನಮ್ಮ ಪಕ್ಷಕ್ಕೆ ಸ್ವಾಗತ ಕೊರುತ್ತೇವೆ, ಮುಂದಿನ ದಿನಗಳಲ್ಲಿ ಪಟ್ಟಣ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣವೆಂದರು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾದ ಕೆ.ರೇವಣ್ಣಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿರೇಂದ್ರ ಪಾಟೀಲ್, ಮುಖಂಡರಾದ ಕಬಾಡಿ ರಾಜಣ್ಣ, ಟಿ.ಎಸ್ ಮೋಹನ್, ಕೆ.ಹಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.












Click it and Unblock the Notifications