ಶಿವಮೊಗ್ಗದಲ್ಲಿ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಮಹತ್ವದ ವಿಚಾರಗಳ ಪ್ರಸ್ತಾಪ
ಶಿವಮೊಗ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದ್ದು, ಸಮ್ಮೇಳನದಲ್ಲಿ ಜನರಿಗೆ ಅನುಕೂಲವಾಗುವ ಪ್ರಮುಖ ಅಂಶಗಳನ್ನು ವಿವರಿಸಲಾಗಿದೆ.
ಶಿವಮೊಗ್ಗ, ಫೆಬ್ರವರಿ, 01: ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ (ಫೆಬ್ರವರಿ 01) ಚಾಲನೆ ಸಿಕ್ಕಿದೆ. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಇದಕ್ಕೂ ಮೊದಲು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರ ಮೆರವಣಿಗೆ ನಡೆಸಲಾಯಿತು. ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಅಧ್ಯಕ್ಷ ನಾ.ಡಿಸೋಜಾ ಅವರು ಉದ್ಘಾಟನೆ ಮಾಡಿದ್ದಾರೆ. ಬಳಿಕ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.
ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ಅಧ್ಯಯನ ಪೀಠ, ದಾವಣಗೆರೆ ವಿವಿಯಲ್ಲಿ ಜೆ.ಹೆಚ್.ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ, ಸಂಶೋಧನೆ ನಡೆಸಬೇಕು ಎಂದು ಸಮ್ಮೇಳನ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹೇಳಿದರು.
ಸಿದ್ದರಾಮಯ್ಯ ಹೆಣ ನಾಯಿನು ಮೂಸುವುದಿಲ್ಲ,ಅದನ್ನು ನಾವು ಯಾಕೆ ಮುಟ್ಟಬೇಕು: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ
ಸಾಹಿತ್ಯ ಹೃದಯ ತಟ್ಟುವಂತಿರಬೇಕು
ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರಾಗಿದ್ದಾರೆ. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೇ ವರ್ಷದ ಹುಟ್ಟುಹಬ್ಬವಿದ್ದು, ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು. ಹಾಗೆಯೇ ಸಾಹಿತ್ಯ ಜನಪರ ಮತ್ತು ಸಮಾಜಮುಖಿ ಆಗಿರಬೇಕು. ಮಾನವೀಯ ಕಾಳಜಿ ಹೊಂದಿರಬೇಕು. ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ, ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದೆ ಇದ್ದರೆ ಅದು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ ಎಂದರು.
ಕಲ್ಯಾಣ ಮಂದಿರಗಳ ನಿರ್ಮಾಣ
ಭೂತ, ಯಕ್ಷಿಣಿ, ಪಂಜೂರ್ಲಿ, ಚೌಡಿಗಳೆಲ್ಲವುಗಳ ಪೂಜೆಗೆ ಅರ್ಚಕರ ಮಧ್ಯಸ್ಥಿಕೆ ಬಂದಿದೆ. ಊರಿಗೊಂದು ನಾಗದೇವತೆ ದೇವಸ್ಥಾನ ಸ್ಥಾಪನೆಯಾಗುತ್ತಿವೆ. ತಳ ಸಮುದಾಯಗಳು ಪೂಜಿಸುತ್ತಿದ್ದ ದೇವರುಗಳಿಗೆ ಶಕ್ತಿ ತುಂಬುವ ನೆಪದಲ್ಲಿ ಪುರೋಹಿತರು ಕೈ ಹಾಕಿದ್ದಾರೆ. ಈಗ ಅವೆಲ್ಲವು ಪುರೋಹಿತ ಸಂಪ್ರದಾಯದ ದೇವರುಗಳಾಗಿ ಪರಿವರ್ತನೆ ಆಗುತ್ತಿವೆ. ಇನ್ನು ಮದುವೆಗಳಲ್ಲಿ ದುಂದುವೆಚ್ಚ ತಪ್ಪಿಸಿ ಅರ್ಥಪೂರ್ಣವಾಗಿ ವೈವಾಹಿಕ ಬಾಂಧವ್ಯಕ್ಕೆ ಒಳಗಾಗಲು ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ವಿವಾಹ ಸಂಹಿತೆ ರೂಪಸಿದರು. ಅದನ್ನು ತಮ್ಮ ಮನೆಯಿಂದಲೇ ಅನುಷ್ಠಾನಕ್ಕೆ ತಂದು ಮಾದರಿಯಾದರು. ಮಲೆನಾಡಿನಲ್ಲಿ ಈ ಸುಧಾರಣೆ ಜನಪ್ರಿಯವಾಗಬೇಕಿತ್ತು. ಆದರೆ ಗ್ರಾಮೀಣ ಭಾಗದಲ್ಲಿಯೂ ಕಲ್ಯಾಣ ಮಂದಿರಗಳು ನಿರ್ಮಾಣಗೊಂಡು, ಅರ್ಚಕರ ಮಧ್ಯಸ್ಥಿಕೆಯಲ್ಲಿ ಅದ್ಧೂರಿಯಿಂದ ಮದುವೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಅಡಕೆ ತೋಟಗಳು ನೆಲಸಮ, ರೈತ ಕಂಗಾಲು
ಮಲೆನಾಡಿನಲ್ಲಿ ಅಕಾಲಿಕ ಮಳೆ, ಹೆಚ್ಚು ಮಳೆ, ಗುಡ್ಡ ಕುಸಿತ ಉಂಟಾಗುತ್ತಿದೆ. ಅರಣ್ಯ ಅತಿಕ್ರಮಣವೇ ಇದಕ್ಕೆ ಕಾರಣವಾಗಿದೆ. ಜೋಶಿಮಠ ದುರಂತರದ ಮಾದರಿಯಲ್ಲಿ ಎರಡು ವರ್ಷದ ಹಿಂದೆ ಮಂಡಗದ್ದೆ ಸಮೀಪ ಸಿಂಗನಬಿದರೆಯಲ್ಲಿ ಗುಡ್ಡ ಕುಸಿದು ಅಡಕೆ ತೋಟಗಳು ನೆಲಸಮವಾಗಿದ್ದವು. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕುಸಿತದ ಆಪಾಯದ ಬಗ್ಗೆ ಅಧ್ಯಯನ ವರದಿಗಳು ಎಚ್ಚರಿಸುತ್ತಿವೆ. ಪ್ರಕೃತಿಯೊಂದಿಗೆ ಸಹಬಾಳ್ವೆ ಅನಿವಾರ್ಯತೆ ಇದೆ ಎಂದರು. ಹಾಗೆಯೇ ಅಡಿಕೆ, ತೆಂಗಿಗೆ ಬಂದಿರುವ ಹಳದಿ ರೋಗ, ಎಲೆಚುಕ್ಕೆ ರೋಗ ನಿಯಂತ್ರಿಸದಿದ್ದರೆ ಈ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರು ಕುಟುಂಬಗಳು ಸಂಕಷ್ಟಕ್ಕೀಡಾಗುತ್ತವೆ. ಮಲೆನಾಡಿನ ಮಣ್ಣು ಮತ್ತು ಹವಾಗುಣ ಅಡಿಕೆ ಬೆಳೆಗೆ ಪ್ರಶಸ್ತವಾಗಿದೆ. ಕೃಷಿ ಕೆಲಸಗಾರರ ಅಭಾವ, ಅಡಕೆ ಧಾರಣೆ ಹೆಚ್ಚಳದಿಂದ ಗದ್ದೆಗಳನ್ನು ಕೂಡ ಅಡಿಕೆ ತೋಟವಾಗಿ ಪರವರ್ತಿಸಲಾಗುತ್ತಿದೆ. ಒಂದು ವೇಳೆ ಅಡಿಕೆ ಧಾರಣೆಯಲ್ಲಿ ಏರುಪೇರಾದರೆ ಜಿಲ್ಲೆಯ ಆರ್ಥಿಕತೆ ತಲ್ಲಣಿಸುತ್ತದೆ ಎಂದು ಎಚ್ಚರಿಸಿದರು.
ನೆಲೆಯಿಲ್ಲದೆ ಪರದಾಡುತ್ತಿರುವ ಸಂತ್ರಸ್ತರು
ಅಡಿಕೆಯ ಔಷಧಿ ಗುಣಗಳು, ಪರ್ಯಾಯ ಬಳಕೆಯ ಗುಣಗಳ ಕುರಿತು ಸಂಶೋಧನೆ ನಡೆಸಬೇಕು. ಅಡಕೆ ಚಹ ಸಂಶೋಧನೆ ಮಾಡಿದ ನಿವೇದನ್ ನೆಂಪೆ ಉದ್ಯಮಕ್ಕೆ ಉತ್ತೇಜನ ಸಿಗಬೇಕು. ಅಡಿಕೆ ಚೊಗರು ನೈಸರ್ಗಿಕ ಬಳಕೆ ಮಾಡುವಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಯಶಸ್ವಿಯಾಗಿದೆ. ಜವಳಿ ಉದ್ಯಮದಲ್ಲಿ ಚೊಗರು ಬಳಕೆ, ಅಡಿಕೆ ಚೊಗರನ್ನು ಪುಡಿ ರೂಪದಲ್ಲಿ ಸಂಗ್ರಹಿಸುವ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಿದೆ. ಇನ್ನು ಹಿರೇಭಾಸ್ಕರ, ಲಿಂಗನಮಕ್ಕಿ, ತಲಕಳಲೆ ಜಲಾಶಯಗಳಿಂದ ಮುಳುಗಡೆಯಾದ ಸಂತ್ರಸ್ತರಿಗೆ ಈವರೆಗೂ ನೆಲೆ ಸಿಕ್ಕಿಲ್ಲ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಈ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
ಕೌಶಲ್ಯ ತರಬೇತಿ ಬೇಕಿದೆ
ಹೊಸನಗರ ತಾಲೂಕು ವಿಧಾನಸಭೆ ಕ್ಷೇತ್ರದ ಮಾನ್ಯತೆ ಕಳೆದುಕೊಂಡಿದೆ. ಇದರಿಂದ ಹೊಸನಗರ ತಾಲೂಕು ಎಲ್ಲಾ ದೃಷ್ಟಿಯಿಂದ ಅನಾಥ ಸ್ಥಿತಿಗೆ ತಳ್ಳಲ್ಪಟ್ಟಿದೆ. ಈ ಸ್ಥಿತಿ ಬದಲಾಗಬೇಕಿದೆ ಎಂದು ತಿಳಿಸಿದರು. ಹಾಗೆಯೇ ಮೊಬೈಲ್ನಿಂದಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ, ಕೌಶಲ್ಯದ ಅಭಿವೃದ್ಧಿಯ ತರಬೇತಿ ದೊರೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ದೊರೆಯುವ ಉದ್ಯೋಗಗಳ ಕುರಿತು ತರಬೇತಿ ನೀಡಬೇಕಿದೆ ಎಂದರು.