'ಆರ್ಕಿಮಿಡಿಸ್ ತತ್ವ' ಬಳಸಿ ಬಾವಿಯಿಂದ ಆನೆಮರಿ ರಕ್ಷಣೆ
ರಾಂಚಿ, ಫೆಬ್ರವರಿ 1: ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದ ಆನೆಯ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು, 'ಆರ್ಕಿಮಿಡಿಸ್ ತತ್ವ' ಬಳಸಿ ಹೊರಗೆಳೆದ ರಕ್ಷಿಸಿದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಈ ರಕ್ಷಣಾ ಕಾರ್ಯಾಚರಣೆಯ ಚಿತ್ರ ಮತ್ತು ವಿಡಿಯೋ ವೈರಲ್ ಆಗಿದ್ದು, ಆನೆ ಮರಿಗೆ ಅಪಾಯವಾಗದಂತೆ ಚಾಣಾಕ್ಷತೆ ಉಪಯೋಗಿಸಿ ಅದನ್ನು ರಕ್ಷಿಸಿದ ತಂಡಕ್ಕೆ ವ್ಯಾಪಕ ಶ್ಲಾಘನೆ ದೊರೆತಿದೆ.
'ಆನೆ ಪಾಪದ ಜಂಟಲ್ಮ್ಯಾನ್, ಅದಕ್ಕೆ ದಾರಿಬಿಡಿ'
ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿನ ಅಮ್ಲಿಯಾ ಟೊಲಿ ಗ್ರಾಮದ ಬಾವಿಯೊಂದಕ್ಕೆ ಆನೆ ಮರಿ ಆಕಸ್ಮಿಕವಾಗಿ ಬಿದ್ದಿತ್ತು. ಹೊರಬರಲಾಗದೆ ಪರದಾಡುತ್ತಿದ್ದ ಆನೆ ಮರಿಯನ್ನು ಆರಂಭದಲ್ಲಿ ರಕ್ಷಿಸುವ ಗ್ರಾಮಸ್ಥರ ಪ್ರಯತ್ನ ಫಲಕೊಡಲಿಲ್ಲ. ಕೊನೆಗೆ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮೂರು ಗಂಟೆ ಕಾರ್ಯಾಚರಣೆ
ಬಾವಿಯಿಂದ ಆನೆಮರಿಯನ್ನು ಮೇಲೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಅದು ಸಾಕಷ್ಟು ತೂಕ ಇರುವುದರಿಂದ ಇರುವ ತಂತ್ರಜ್ಞಾನ ಮತ್ತು ಯಂತ್ರಗಳನ್ನು ಬಳಸಿ ಹೊರತೆಗೆಯುವುದು ಕಷ್ಟವಾಗಿತ್ತು. ಇಲ್ಲವೇ ಬಾವಿಯ ಮಣ್ಣನ್ನು ಕೊರೆದು ಅದನ್ನು ಹಾಳು ಮಾಡಬೇಕಿತ್ತು. ಬದಲಾಗಿ ಅರಣ್ಯ ಸಿಬ್ಬಂದಿ ವೈಜ್ಞಾನಿಕ ತಂತ್ರವನ್ನು ಬಳಸಿ ಬೆಳಿಗ್ಗೆ ಏಳು ಗಂಟೆಯಿಂದ ಮೂರು ಗಂಟೆ ಕಾರ್ಯಾಚರಣೆಯಲ್ಲಿಯೇ ಮರಿಯನ್ನು ಹೊರ ತೆಗೆದರು.
ಬಾವಿಗೆ ನೀರು ತುಂಬಿಸಿದರು
ಖ್ಯಾತ ಭೌತಶಾಸ್ತ್ರಜ್ಞ ಆರ್ಕಿಮಿಡಿಸ್ನ 'ಮೇಲ್ಮುಖ ತೇಲುವ ಒತ್ತಡ' ತತ್ವವನ್ನು ಅನ್ವಯಿಸಿದ ರಕ್ಷಣಾ ತಂಡ, ಮೊದಲು ಕೆಳಮಟ್ಟದಲ್ಲಿದ್ದ ನೀರನ್ನು ಹೆಚ್ಚಿಸಲು ನಿರ್ಧರಿಸಿತು. ಮೋಟಾರ್ ಪಂಪ್ ಮೂಲಕ ಬಾವಿಗೆ ನೀರು ಹರಿಸಿತು. ನೀರು ತುಂಬಿದಂತೆ ಆನೆ ಮರಿ ತೇಲುತ್ತಾ ಮೇಲೆ ಬಂದಿತು. ಬಾವಿಯೊಳಗೆ ಕಟ್ಟಿಗೆ ತುಂಡುಗಳನ್ನು ಹಾಕಿದ್ದರಿಂದ ಆನೆಗೆ ನೀರಿನೊಳಗೆ ಆಯ ತಪ್ಪದಂತೆ ಹಿಡಿತ ಸಾಧಿಸಲು ಸಾಧ್ಯವಾಯಿತು.
ಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋ
|
ಆರ್ಕಿಮಿಡಿಸ್ ತತ್ವ ಬಳಸಿಕೊಂಡರು
ನೀರು ಬಹುತೇಕ ತುಂಬಿದಂತೆ ಮೇಲೆ ಬಂದ ಆನೆ, ಕೊನೆಗೆ ಬಾವಿಯಿಂದ ಸುಲಭವಾಗಿ ಹೊರಬಂದಿತು. ಈ ಕಾರ್ಯಾಚರಣೆಯ ಫೋಟೊವನ್ನು ಅರಣ್ಯಾಧಿಕಾರಿ ರಮೇಶ್ ಪಾಂಡೆ ಹಂಚಿಕೊಂಡಿದ್ದಾರೆ.
'ಬಾವಿಯೊಳಗೆ ಬಿದ್ದಿದ್ದ ಆನೆ ಮರಿಯನ್ನು ಆರ್ಕಿಮಿಡಿಸ್ ತತ್ವ ಬಳಸಿಕೊಂಡು ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಬುದ್ಧಿವಂತಿಕೆಯಿಂದ ರಕ್ಷಿಸಿದ ಹೃದಯಸ್ಪರ್ಶಿ ಚಿತ್ರಗಳು. ಬಾವಿಗೆ ನೀರು ತುಂಬಿಸುವ ಮೂಲಕ ಆನೆ ಮೇಲೆ ತೇಲಿ ಬರುವಂತೆ ಮಾಡಿದರು. ಅದ್ಭುತ ಕಾರ್ಯ' ಎಂದು ರಮೇಶ್ ಪಾಂಡೆ ಶ್ಲಾಘಿಸಿದ್ದಾರೆ.
'ಇವರೇ ದೇಶದ ಹೀರೋಗಳು'
ಗ್ರಾಮದ ಜನರ ಸಾಂಪ್ರದಾಯಿಕ ವೈಜ್ಞಾನಿಕ ತಿಳಿವಳಿಕೆಗೆ ಅದ್ಭುತವಾದ ಉದಾಹರಣೆ. ತಮ್ಮ ಬದುಕನ್ನು ಹಿತಕರ ರೀತಿಯಲ್ಲಿ ಸಾಗಿಸಲು ದೈನಂದಿನ ಚಟುಚಟಿಕೆಗಳಲ್ಲಿ ಜನರು ಇಂತಹ ಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ತುರ್ತುಪರಿಸ್ಥಿತಿಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಉತ್ತಮ ಉದಾಹರಣೆ. ಈ ಜನರು ದೇಶದ ನಿಜವಾದ ಹೀರೋಗಳು ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ.