ಬಿಡದಿ ಕೋತಿ ಆಂಜನೇಯನ ಪಾಸ್ಪೋರ್ಟ್ ಮಹಿಮೆ ಏನು?
ರಾಮನಗರ, ಸೆಪ್ಟೆಂಬರ್ 16: ಸಾಮಾನ್ಯವಾಗಿ ಒಂದೊಂದು ದೇಗುಲವೂ ಒಂದೊಂದು ವಿಚಾರಕ್ಕೆ ಸಂಬಂಧಿಸಿದಂತೆ ಶಕ್ತಿ ಮತ್ತು ಪವಾಡದಿಂದ ಭಕ್ತರನ್ನು ಸೆಳೆಯುತ್ತವೆ. ಆದರೆ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಸಮೀಪದ ಹನುಮಂತನಗರದ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ ಮಾತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನ ಸೆಳೆಯುತ್ತದೆ.
ಇಲ್ಲಿ ನಡೆಯುವ ಪವಾಡ ಮತ್ತು ಭಕ್ತರ ನಂಬಿಕೆಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಆದರೆ ಇದು ಸತ್ಯ ಎಂದು ಬಹಳಷ್ಟು ಭಕ್ತರು ನಂಬಿದ್ದಾರೆ. ಹಾಗಾದರೆ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆಯುವ ಪವಾಡವಾದರೂ ಏನು ಎಂದು ಹುಡುಕುತ್ತಾ ಹೋದರೆ, ಇಲ್ಲಿ ಪಾಸ್ಪೋರ್ಟ್ ಪ್ರತಿಯನ್ನಿಟ್ಟು ಪೂಜಿಸಿದರೆ ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿರುವುದು ಬೆಳಕಿಗೆ ಬರುತ್ತದೆ.
ಇಷ್ಟಕ್ಕೂ ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ ಹೇಗೆ ನಿರ್ಮಾಣವಾಯಿತು ಎಂಬುದರ ಹಿಂದೆಯೂ ಒಂದು ರೋಚಕ ಕಥೆಯಿದೆ. ಈ ದೇಗುಲ 1955ರಲ್ಲಿ ನಿರ್ಮಾಣವಾಯಿತು ಎಂದು ಹೇಳಲಾಗಿದೆ. ಅದು ಆರಂಭವಾಗಿದ್ದು ಕೂಡ ಒಂದು ದುರಂತದ ಸನ್ನಿವೇಶದಲ್ಲಿ ಎಂಬುದು ಅಷ್ಟೇ ಸತ್ಯ.

ಕೋತಿ ಆಂಜನೇಯಸ್ವಾಮಿಯ ರೋಚಕ ಇತಿಹಾಸ
ಇವತ್ತು ದೇಗುಲ ನಿರ್ಮಾಣವಾದ ಸ್ಥಳದ ಸುತ್ತಮುತ್ತ ಜಮೀನುಗಳಿದ್ದವು. ಇಲ್ಲಿ ಬೀಡು ಬಿಟ್ಟಿದ್ದ ಕೋತಿಗಳು ಬಾಳೆ ಸೇರಿದಂತೆ ಇತರೆ ಬೆಳೆಗಳನ್ನೆಲ್ಲ ನಾಶ ಮಾಡುತ್ತಿದ್ದವು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಅವುಗಳ ಮಾರಣ ಹೋಮ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಮಂಡ್ಯದ ಸಂಪತ್ ಎಂಬುವರಿಗೆ ಸೇರಿದ ಕಾವೇರಿ ಲಾರಿ ಟ್ರಾನ್ಸ್ಪೋರ್ಟ್ನ ಲಾರಿಯೊಂದು ಬಂದಿತ್ತಲ್ಲದೆ, ಕೋತಿಗಳ ಮಾರಣಹೋಮ ನಡೆದ ಸ್ಥಳದಲ್ಲಿ ಕೆಟ್ಟು ನಿಂತಿತು. ಲಾರಿಯ ಪರಿಶೀಲನೆ ನಡೆಸಿದಾಗ ಯಾವುದೇ ದೋಷಗಳು ಕಂಡು ಬರಲಿಲ್ಲ. ಆದರೆ ಲಾರಿ ಮಾತ್ರ ಸ್ಟಾರ್ಟ್ ಆಗಲೇ ಇಲ್ಲ. ಇದರಿಂದ ಮಾಲೀಕ ಸಂಪತ್ ಚಿಂತಾಕ್ರಾಂತರಾಗಿ ಲಾರಿಯಲ್ಲೇ ಕುಳಿತುಕೊಂಡಿದ್ದರು.

ಪಂಚೆ ಹಿಡಿದು ಎಳೆದ ಕೋತಿಮರಿ
ಈ ವೇಳೆ ಅವರ ಬಳಿ ಬಂದ ಕೋತಿ ಮರಿಯೊಂದು ಅವರ ಪಂಚೆಯನ್ನು ಹಿಡಿದು ಕೋತಿಗಳ ಮಾರಣಹೋಮ ನಡೆದ ಸ್ಥಳಕ್ಕೆ ಎಳೆದುಕೊಂಡು ಹೋಯಿತು. ಅಲ್ಲಿ ಸತ್ತು ಬಿದ್ದಿದ್ದ ಕೋತಿಗಳನ್ನು ನೋಡಿದ ಸಂಪತ್ ಮನಕರಗಿತು. ಕೂಡಲೇ ಅವರು ಇತರೆ ತಮ್ಮ ಸ್ನೇಹಿತರು ಮತ್ತು ಲಾರಿ ಮಾಲೀಕರಾದ ಡಾ.ವೆಂಕಟ್ಟಪ್ಪ, ಗೋವಿಂದರಾಜು ನಾಯ್ಡು, ಕೋದಂಡರಾಮ ನಾಯ್ದು, ಎಂ. ನಾರಾಯಣಪ್ಪರನ್ನು ಕರೆಸಿಕೊಂಡು ಎಲ್ಲರೂ ಸೇರಿ ಕೋತಿಗಳ ಅಂತ್ಯಸಂಸ್ಕಾರ ವಿಧಿವಿಧಾನಗಳಂತೆ ನೆರವೇರಿಸಿ ಅಲ್ಲೊಂದು ಕಲ್ಲು ನೆಟ್ಟರು. ಆ ನಂತರ ನಿಂತಿದ್ದ ಲಾರಿ ಸ್ಟಾರ್ಟ್ ಆಯಿತು. ಈ ನಡುವೆ ಅಲ್ಲೊಂದು ಪುಟ್ಟ ಗುಡಿಸಲು ನಿರ್ಮಿಸಿ ಜನ ಪೂಜಿಸಲು ಆರಂಭಿಸಿದರು.

ಪುಟ್ಟ ಗುಡಿಸಲ್ಲಿ ಆರಂಭವಾದ ದೇಗುಲ
ಪುಟ್ಟ ಗುಡಿಸಲಿನಿಂದ ಆರಂಭವಾದ ದೇಗುಲಕ್ಕೆ ಕೋತಿ ಆಂಜನೇಯ ಸ್ವಾಮಿ ದೇವಾಲಯ ಎಂದೇ ಪ್ರಸಿದ್ಧಿ ಪಡೆಯಿತಲ್ಲದೆ, ದೇಗುಲ ಅಭಿವೃದ್ಧಿಯಾಗುತ್ತಾ ಹೋಯಿತು. ಇಂದು ಹೆದ್ದಾರಿಯಲ್ಲಿ ಚಲಿಸುವ ಬಹುತೇಕ ಲಾರಿ ಸೇರಿದಂತೆ ಖಾಸಗಿ ವಾಹನಗಳು ಇಲ್ಲಿ ನಿಲ್ಲಿಸಿ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ಮೂರ್ತಿಯ ದರ್ಶನ ಪಡೆದು ಮುಂದೆ ಹೋಗುವುದು ವಾಡಿಕೆಯಾಗಿದೆ. ಪ್ರವಾಸ ಸಂದರ್ಭದಲ್ಲಿ ಇಲ್ಲಿ ವಾಹನಗಳನ್ನು ಪೂಜಿಸಿ ಮುನ್ನಡೆಸಿದರೆ ಯಾವುದೇ ಅಪಾಯವಿಲ್ಲದೆ ಹಿಂತಿರುಗಬಹುದು ಎಂಬ ಧಾರ್ಮಿಕ ನಂಬಿಕೆಯೂ ಜನ ವಲಯದಲ್ಲಿದೆ.
Recommended Video

ಪಾಸ್ಪೋರ್ಟ್ ಆಂಜನೇಯ ಎಂದೇ ಖ್ಯಾತಿ
ಇನ್ನು ಕೋತಿ ಆಂಜನೇಯಸ್ವಾಮಿ ದೇಗುಲ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ. ಪಾಸ್ಪೋರ್ಟ್ ಪ್ರತಿಯನ್ನ್ಲು ಇಲ್ಲಿನ ಆಂಜನೇಯ ಮೂರ್ತಿಯ ಪಾದದ ಸಮೀಪ ಇಟ್ಟು ಪೂಜಿಸಿದರೆ ಕೈಹಾಕಿದ ಕೆಲಸವಾಗುತ್ತದೆ. ಪಾಸ್ಪೋರ್ಟ್ ಪಡೆದ ಉದ್ದೇಶವೂ ಈಡೇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಹೀಗಾಗಿ ಇದು ಈಗೀಗ ಕೋತಿ ಪಾಸ್ಪೋರ್ಟ್ ಆಂಜನೇಯ ಎಂದೇ ಖ್ಯಾತಿ ಪಡೆಯಲಾರಂಭಿಸಿದೆ. ಜನರು ಹೇಳುವ ಪ್ರಕಾರ ಇಲ್ಲಿ ಪಾರ್ಸ್ಪೋರ್ಟ್ನ್ನು ಇಟ್ಟು ಪೂಜಿಸಿದವರ ಪೈಕಿ ಶೇ.90 ರಷ್ಟು ಮಂದಿ ವಿದೇಶಗಳಲ್ಲಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರಂತೆ. ಹೀಗಾಗಿಯೇ ಕೋತಿ ಆಂಜನೇಯನಿಗೆ ದೇಶ- ವಿದೇಶದಲ್ಲಿ ಲಕ್ಷಾಂತರ ಭಕ್ತರು ಇರುವುದನ್ನು ಕಾಣಬಹುದಾಗಿದೆ.












Click it and Unblock the Notifications