ಕಬ್ಬಾಳಮ್ಮ ದೇವಿ ದರ್ಶನ ನಂತರ ಸಿಎಂ ಹುದ್ದೆ ಬಗ್ಗೆ ಡಿಕೆಶಿ ಹೇಳಿದ್ದೇನು?
Recommended Video
ಕನಕಪುರ (ರಾಮನಗರ), ಅಕ್ಟೋಬರ್ 28: ಬೆಳಗ್ಗೆಯಿಂದ ಯಶವಂತಪುರದಿಂದ ಇಲ್ಲಿಯ ತನಕ ಓಡಾಡಿದ್ದೇನೆ. ಪಕ್ಷ ಭೇದ, ಜಾತಿ ಭೇದ ಮರೆತು ಜನರು ನನಗೆ ಒಳ್ಳೆಯದಾಗಬೇಕು ಅಂತ ಹರಸಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ. ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದೇನೆ. ನಿಮ್ಮ ಪ್ರೀತಿ- ವಿಶ್ವಾಸ ಹೀಗೇ ಇರಲಿ ಎಂದು ಮಾಜಿ ಸಚಿವ- ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಸೋಮವಾರ ಹೇಳಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಅವರು ಮಾತನಾಡಿ, ಜನರ ಅಭಿಮಾನ, ಪ್ರೀತಿಯನ್ನು ತೂಕ ಅಥವಾ ಅಳತೆ ಮಾಡಲು ಸಾಧ್ಯ ಇಲ್ಲ. ಅವರ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿಯಲ್ಲಿ ಅವರ ಹಾಗೂ ನನ್ನ ಗೌರವ ಹೆಚ್ಚಿಸಿಕೊಂಡು ಕೆಲಸ ಮಾಡುತ್ತೇನೆ ಎಂದರು.
ದೇವರ ಸನ್ನಿಧಿಯಲ್ಲಿ ಮಾತನಾಡುತ್ತಿದ್ದೇನೆ. ಚುನಾವಣೆಯಲ್ಲಿ ಇಲ್ಲಿ ಪೂಜೆ- ಆಶೀರ್ವಾದ ಪಡೆಯುವುದು ನನ್ನ ಕೆಲಸ. ಕೆಲ ಮಾಧ್ಯಮದವರು ನಾಲ್ಕೈದು ಸ್ಟೋರಿ ಮಾಡಿದರಂತೆ. ಹೂವ ಇಟ್ಡು ನೋಡಿ, ದೇವಿಯ ಶಕ್ತಿ ಬಗ್ಗೆ ತಿಳಿದುಕೊಳ್ಳಲಿ. ಪ್ರತಿಷ್ಠೆ, ದುಃಖ- ದುಮ್ಮಾನ ದೂರ ಮಾಡುವ ದೇವಿ ಕಬ್ಬಾಳಮ್ಮ ಎಂದು ಅವರು ಹೇಳಿದರು.

ದೇವಿಯ ಮೂಲ ದೇವಸ್ಥಾನ ಜೀರ್ಣೋದ್ಧಾರ ಮಾಡುವುದಕ್ಕೆ ಸಾಕಷ್ಟು ಚರ್ಚೆ ಆಯಿತು. ದೇವಸ್ಥಾನ ಮುಟ್ಟಲು ಅನೇಕರು ಹಿಂದೇಟು ಹಾಕಿದರು. ಕೆಲವರು ಮಾತು ಕೊಟ್ಟರೆ ಮಾತಿಗೆ ನಿಲ್ಲಬೇಕು. ನಾನು ಅದರ ಬಗ್ಗೆ ಈಗ ಮಾತನಾಡಲ್ಲ. ದೇವಿ ಆಶೀರ್ವಾದ ನನ್ನ ಮೇಲೆ ಎಲ್ಲಿಯವರೆಗೆ ಇರುತ್ತದೋ ಅದೇ ಶ್ರೀರಕ್ಷೆ ಎಂದರು.
ಹೊಸ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಶಕ್ತಿ ಗೊತ್ತಿಲ್ಲ
ನನಗಾಗಿ ಜನರು ಅತ್ತಿದ್ದೀರಿ, ನೊಂದಿದ್ದೀರಿ. ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ. ಕೆಲವರು ಅಲ್ಲೇ ಇದ್ದಾರೆ. ಹೊಸ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಶಕ್ತಿ ಗೊತ್ತಿಲ್ಲ. ನಾನು ಯಾವ ಯುದ್ಧವೂ ಗೆದ್ದಿಲ್ಲ. ಆದರೆ ಪ್ರೀತಿ- ವಿಶ್ವಾಸವನ್ನು ತಡೆಯುವುದಕ್ಕೆ ಸಾಧ್ಯವಾ? ಪ್ರೀತಿ, ಮಾನವೀಯತೆ ಸ್ವೀಕರಿಸಬೇಕು. ಸಂಸ್ಕೃತಿ ಉಳಿಸಬೇಕು. ಅದಕ್ಕೆ ನಾನು ಬದ್ಧ ಎಂದು ಅವರು ಹೇಳಿದರು.
ಕೆಂಪೇಗೌಡ- ಗೌರಮ್ಮ ನನಗೆ ಜನ್ಮ ಕೊಟ್ಟಿದ್ದಾರೆ. ರಾಜ್ಯದ ಜನ, ಕ್ಷೇತ್ರದ ಜನರು ನನ್ನನ್ನು ಮಗನಂತೆ ಸಾಕಿದ್ದಾರೆ. ಬಾಲ್ಯದಲ್ಲಿ ಸಣ್ಣ ತಪ್ಪು ನಡೆದಿರಬಹುದು. ಆದರೆ ಚುನಾವಣೆಗೆ ಮತ ಕೇಳುವುದಕ್ಕೆ ಬರಲಿಲ್ಲ. ಕ್ಷೇತ್ರದಲ್ಲಿ ಸುರೇಶ್ ಗೆ ಲೀಡ್ ಕೊಟ್ಡು ಗೆಲ್ಲಿಸಿದ್ದಾರೆ. ಪಕ್ಷಾತೀತವಾಗಿ ಯಾವ ಕಾರ್ಯಕರ್ತರಿಗೂ ನೋವು ಕೊಡಬಾರದು ಎಂದು ತಿಳಿಸಿದ್ದೇನೆ ಎಂದರು ಡಿ. ಕೆ. ಶಿವಕುಮಾರ್.
ದೊಡ್ಡವರು ಅಧಿಕಾರದಲ್ಲಿ ಇದ್ದಾರೆ, ಆ ಬಗ್ಗೆ ಮಾತು ಬೇಡ
ಯುವಕರ ಸ್ಪೀಡ್ ನಿಲ್ಲಿಸೋಕೆ ಸಾಧ್ಯವಾ? ಇವತ್ತು ಕೈ, ಕಾಲು ಮುರಿದಿಲ್ಲ ಅಷ್ಟೇ. ಸೊಂಟ ಸ್ವಲ್ಪ ನೋವಾಗಿದೆ, ಅದನ್ನು ಸರಿ ಮಾಡಿಸಿಕೊಳ್ಳುತ್ತೇನೆ ಎಂದರು. "ಮುಂದಿನ ಮುಖ್ಯಮಂತ್ರಿ ಡಿಕೆಶಿ" ಎಂದು ಅಭಿಮಾನಿಗಳು ಕೂಗಿದಾಗ, ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಅದರ ಬಗ್ಗೆ ಮಾತನಾಡುವುದು ಬೇಡ. ನನಗೆ ಯಾವ ಹುದ್ದೆಯೂ ಬೇಡ, ಇರುವುದೇ ಸಾಕು ಎಂದು ಹೇಳಿದರು.
ಡಿ. ಕೆ. ಶಿವಕುಮಾರ್ ತಮ್ಮ ಇಷ್ಟದೈವ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಆ ನಂತರ ಜೆಡಿಎಸ್ ಮುಖಂಡ ಕಬ್ಬಾಳೇಗೌಡರ ಮನೆಗೆ ಭೇಟಿ ನೀಡಿ, ಮಾಧ್ಯಮಗಳೂಂದಿಗೆ ಮಾತನಾಡಿದರು. ಡಿಕೆಶಿ ಜೊತೆಯಲ್ಲಿ ಜೆಡಿಎಸ್ ಮುಖಂಡ ವಿಶ್ವನಾಥ ಇದ್ದರು (ಕನಕಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದವರು). ಕಬ್ಬಾಳಮ್ಮ ದೇವಿಯ ಕಾಣಿಕೆ ಹುಂಡಿಗೆ ಡಿ. ಕೆ. ಶಿವಕುಮಾರ್ 2001 ರುಪಾಯಿ ಕಾಣಿಕೆ ಹಾಕಿದರು.












Click it and Unblock the Notifications