ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿ ತರಾಟೆ ವಿಡಿಯೋ ವೈರಲ್
ರಾಮನಗರ, ಡಿಸೆಂಬರ್ 20: ಕರ್ನಾಟಕದಲ್ಲಿ ಡಿಸೆಂಬರ್ 22 ಮತ್ತು 27ರಂದು ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಪಕ್ಷದ ನಾಯಕನನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.
" ಗ್ರಾಮ ಪಂಚಾಯತಿ ಚುನಾವಣೆಗೆ ಕೇವಲ 10 ಸಾವಿರ ಸಾಲುವುದಿಲ್ಲ, ಸುಮ್ಮನೆ ಇದ್ದವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ್ದೀರಿ" ಎಂದು ಬಿಜೆಪಿ ಬೆಂಬಲಿತ ಮಹಿಳಾ ಅಭ್ಯರ್ಥಿ ಬಿಜೆಪಿ ಮುಖಂಡನಿಗೆ ನಡು ಬೀದಿಯಲ್ಲೇ ತರಾಟೆ ತೆಗೆದುಕೊಂಡಿದ್ದಾರೆ.
ರಾಮನಗರ ತಾಲೂಕಿನ ಮಾಯಗಾನಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಮಲಮ್ಮ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಅವರ ಬಳಿ ಚುನಾವಣೆ ಖರ್ಚಿಗೆ ಹಣ ನೀಡಿ ಎಂದು ಗಲಾಟೆ ಮಾಡಿರುವ ವಿಡಿಯೋ ಇದಾಗಿದೆ.

"ನೀವು ಕೇವಲ 10 ಸಾವಿರ ಕೊಟ್ಟರೆ ಹೇಗೆ ಚುನಾವಣೆ ಮಾಡುವುದು?, ಪ್ರತಿ ಅಭ್ಯರ್ಥಿಗೆ 2 ಲಕ್ಷ ನೀಡಿದ್ದಾರೆ ಅನ್ನುವ ಸುದ್ದಿ ಇದೆ. ಆದರೆ, ನೀವು ಕೇವಲ ಹತ್ತು ಸಾವಿರ ಕೊಡಲು ಬಂದಿದ್ದೀರಾ?. ಮತದಾರರಿಗೆ 10 ರೂಪಾಯಿ ಕೊಡೊದಾ?" ಎಂದು ಪ್ರಶ್ನೆ ಮಾಡಲಾಗಿದೆ.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ, "ನನಗೆ ಏನೂ ಗೊತ್ತಿಲ್ಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಿದ್ದನ್ನು ನಿಮಗೆ ಕೊಟ್ಟಿದ್ದೇನೆ" ಎಂದು ಸಮಜಾಯಿಸಿ ಕೊಟ್ಟಿದ್ದಾರೆ.
ಸುಮಾರು 14 ನಿಮಿಷದ ವಿಡಿಯೋದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರ ಹೆಸರು ಕೂಡ ಬಂದು ಹೋಗುತ್ತದೆ. ಡಿಸಿಎಂಗೆ ಫೋನ್ ಮಾಡಿ ವಿಚಾರಿಸಿಕೊಳ್ಳಿ ಎಂದು ಹೇಳುತ್ತಾರೆ.
ಗ್ರಾಮ ಪಂಚಾಯತಿ ಚುನಾವಣೆ ಪಕ್ಷಾತೀತವಾಗಿ ನಡೆಯಲಿದೆ ಎಂದು ರಾಜ್ಯ ಚುನಾವಣಾ ಅಯೋಗ ಹೇಳಿದೆ. ಅದಕ್ಕಾಗಿ ಕಟ್ಟುನಿನ ಕ್ರಮಗಳನ್ನು ಕೈಗೊಂಡಿದೆ. ಆದರೆ, ರಾಜಕೀಯ ಪಕ್ಷಗಳ ಹಸ್ತಕ್ಷೇಪ ತಡೆಯುವುದು ಮಾತ್ರ ಸಾಧ್ಯವಾಗಿಲ್ಲ.












Click it and Unblock the Notifications