ಸಾಮಾಜಿಕ ಅಂತರವಿಲ್ಲದ ಹಬ್ಬ ಆಚರಣೆ: ಗ್ರಾಮಲೆಕ್ಕಿಗ ಅಮಾನತು
ರಾಮನಗರ, ಮೇ 15: ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಜನರು ಸಾಮೂಹಿಕವಾಗಿ ಸಾಮಾಜಿಕ ಅಂತರವಿಲ್ಲದೇ ಹಬ್ಬ ಆಚರಣೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ಕನಕಪುರ ತಹಶೀಲ್ದಾರ ವರದಿ ಮೇರೆಗೆ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡಿ ರಾಮನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Recommended Video
ಕೊರೊನಾ ವೈರಸ್ ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಅವರ ಕರ್ತವ್ಯವನ್ನು ನಿರ್ವಹಿಸುವಲ್ಲಿ ಕೊಳಗೊಂಡನಹಳ್ಳಿ ಗ್ರಾಮ ಲೆಕ್ಕಿಗ ಕಲ್ಮಟ್ ಎನ್.ಸಿ ವಿಫಲರಾಗಿದ್ದಾರೆ.
ಕೊರೊನಾ ಭೀತಿಗೆ ದೇವರ ಮೊರೆ: ಕನಕಪುರದಲ್ಲಿ ಸಾಮಾಜಿಕ ಅಂತರವಿಲ್ಲ
ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮೇ 12 ರಂದು ನಡೆದ ಜಾತ್ರಾ ಮಹೋತ್ಸವವನ್ನು ತಡೆಯಲು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವುದಾಗಲೀ ಅಥವಾ ಸದರಿ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ವಿಫಲರಾಗಿದ್ದು, ಕರ್ತವ್ಯ ಲೋಪ ಎಸಗಿರುತ್ತಾರೆ. ಆದ್ದರಿಂದ ಸದರಿ ನೌಕರರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಶಿಫಾರಸ್ಸು ಮಾಡಿ ಕನಕಪುರ ತಹಶೀಲ್ದಾರ್ ವರದಿ ಸಲ್ಲಿಸಿದ್ದರು.
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ನಿಯಮ 10(1)ಡಿ ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲ್ಮಟ್ ಎನ್.ಸಿ ಗ್ರಾಮಲೆಕ್ಕಿಗರು, ಬನ್ನಿಮುಕ್ಕೋಡ್ಲು ಕಂದಾಯ ವೃತ್ತ (ಅಧಿಕ ಪ್ರಭಾರದಲ್ಲಿ ಕೊಳಗೊಂಡನಹಳ್ಳಿ ವೃತ್ತ) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶಿಸಿರುತ್ತಾರೆ.
ಆದೇಶದಲ್ಲಿ ಸದರಿ ಲೀನ್ ನನ್ನು ಚನ್ನಪಟ್ಟಣ ತಾಲ್ಲೂಕು ಬಿ.ವಿ.ಹಳ್ಳಿ ಕಂದಾಯ ವೃತ್ತಕ್ಕೆ ಸ್ಥಳಾಂತರಿಸಿದ್ದು, ನೌಕರರು ಈ ಅವಧಿಯಲ್ಲಿ ನಿಯಮಾನುಸಾರ ಜೀವಧಾರ ಭತ್ಯೆಯನ್ನು ಮಾತ್ರ ಪಡೆಯಲು ಅರ್ಹರಿರುತ್ತಾರೆ ಹಾಗೂ ನೌಕರರು ಯಾವುದೇ ಕಾರಣಕ್ಕೂ ಸಹ ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.