ಯೋಗೇಶ್ವರ್ ವಿರುದ್ಧ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವರಾಮು ಗರಂ!
ರಾಮನಗರ ಜುಲೈ, 25: ಚನ್ನಪಟ್ಟಣ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ ಎನ್ನುತ್ತಿದ್ದ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ಗೆ ಸ್ವಂತ ತಾಲ್ಲೂಕಿನಲ್ಲಿಯೇ ಭಿನ್ನಮತ ಎದುರಾಗಿದೆ.
"ಪಕ್ಷದ್ರೋಹಿಗಳ ಮಾತು ಕೇಳಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಸಿ. ಪಿ. ಯೋಗೇಶ್ವರ್ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ" ಎಂದು ರಾಮನಗರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವರಾಮು ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆದು ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಲಿಂಗೇಶ್ ಕುಮಾರ್ ಮಾತು ಕೇಳಿ ಪಕ್ಷದ ನಿಷ್ಠಾವಂತರನ್ನು ಯೋಗೇಶ್ವರ್ ಕಡೆಗಣಿಸುತ್ತಿದ್ದಾರೆ" ಎಂದು ಆರೋಪಿಸಿದರು.
"ಮಾಜಿ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಒಬ್ಬ 420 ಆಸಾಮಿಯಾಗಿದ್ದಾರೆ. ಇಂತಹವರ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವುದು ಎಷ್ಟು ಸರಿ?. ಲಿಂಗೇಶ್ಕುಮಾರ್ ಅಂತಹ ಪಕ್ಷ ದೋಹಿಗಳಿಗೆ ಮಾನ್ಯತೆ ನೀಡಿ ನಿಮಗೆ ದುಡಿದ ನಿಷ್ಠರನ್ನು ಕಡೆಗಣಿಸುತ್ತಿರುವುದು ತಿರುಗು ಬಾಣವಾಗಲಿದೆ" ಎಂದು ಸಿ. ಪಿ. ಯೋಗೇಶ್ವರ್ ನಡೆ ಖಂಡಿಸಿದರು.
ಸಿ.ಪಿ.ವೈ ಹಿತ್ತಾಳೆ ಕಿವಿ: "ಸಾಮಾಜಿಕ ಜಾಲತಾಣ ಹಾಗೂ ಹಾದಿಬೀದಿಯಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದವರನ್ನು ಆಪ್ತ ಸಹಾಯಕರಾಗಿ ನೇಮಿಸಿಕೊಂಡಿದ್ದೀರಿ. ಇದು ನಿಮ್ಮ ದುಸ್ಥಿತಿಯನ್ನು ತಿಳಿಸುತ್ತದೆ. ಹೊಗಳು ಭಟ್ಟ, ಚೇಲಗಳ ಮಾತು ಕೇಳುವ ನಿಮ್ಮ ಹಿತ್ತಾಳೆ ಕಿವಿಗೆ ಬಿಜೆಪಿ ಕಾರ್ಯಕರ್ತರು ಕೂಲಿ ಕಾರ್ಮಿಕರಿಗಿಂತ ದುಸ್ಥಿತಿಯಲ್ಲಿರುವುದು ಕಾಣಿಸುತ್ತಿಲ್ಲವೇ?" ಎಂದು ಶಿವರಾಮು ಪ್ರಶ್ನಿಸಿದರು.
"ಪಕ್ಷಕ್ಕಾಗಿ ದುಡಿದ ನಮ್ಮಂತಹ ಬಡ ಕಾರ್ಯಕರ್ತರಿಗೆ ನೀಡುತ್ತಿರುವ ನೋವು ಮಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ತಟ್ಟಲಿದೆ. ಅಲ್ಲದೇ ಚನ್ನಪಟ್ಟಣ ತಾಲೂಕಿನಲ್ಲಿ ಇತ್ತೀಚೆಗೆ ನಡೆದ 3 ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಇನ್ನು ಜೆಡಿಎಸ್ ಮುಂದೆ ಹೀನಾಯವಾಗಿ ಬಿಜೆಪಿ ಮಕಾಡೆ ಮಲಗಿದ್ದು, ಪಕ್ಷದ್ರೋಹಿ ಲಿಂಗೇಶ್ ಕುಮಾರ್ಗೆ ನೀವು ಮಣೆ ಹಾಕಿದ್ದರಿಂದಲೇ" ಎಂದು ಶಿವರಾಮು ದೂರಿದರು.
ಪಕ್ಷ ವಿರೋಧಿ ಕೆಲಸ: "ಚನ್ನಪಟ್ಟಣದಲ್ಲಿ ಕಳೆದ 25 ವರ್ಷಗಳ ಸುದೀರ್ಘ ರಾಜಕೀಯ ಮಾಡಿರುವ ನೀವು ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬಮೂಲ್, ಬಿಡಿಸಿಸಿ, ಟಿಎಪಿಸಿಎಂಎಸ್ ಮುಂತಾದ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದೀರಿ. ಬಮೂಲ್ ಚುನಾವಣೆಯಲ್ಲಿ ಒಮ್ಮೆ ಜಯಮುತ್ತುಗೆ ಬೆಂಬಲ ನೀಡಿದರೆ, ನಂತರ ಲಿಂಗೇಶ್ಕುಮಾರ್ಗೆ, ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲವೇ?" ಎಂದು ಪ್ರಶ್ನಿಸಲಾಗಿದೆ.
"ಇತ್ತೀಚೆಗೆ ನಡೆದ ಸುಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಾಗಲಿ. ಸಹಕಾರಿ ಕ್ಷೇತ್ರಗಳ ಚುನಾವಣೆಯಲ್ಲಾಗಲಿ ನಾನು ಯಾವುದೇ ಪಕ್ಷಾಂತರ ಚಟುವಟಿಕೆ ನಡೆಸಿಲ್ಲ. ಈ ಬಗ್ಗೆ ಹೊಸಳ್ಳಿಯ ಸಂಜೀವರಾಯ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಿಮಗೆ ಚಾಡಿ ಹೇಳಿದವರಿಂದಲೂ ಪ್ರಮಾಣ ಮಾಡಿಸಿ" ಎಂದು ಸಿ. ಪಿ. ಯೋಗೇಶ್ವರ್ಗೆ ಸವಾಲು ಎಸೆಯಲಾಗಿದೆ.