ಕರ್ನಾಟಕಕ್ಕೆ ಕೇಂದ್ರದಿಂದ 50 ಸಾವಿರ ಕೋಟಿ ಅನುದಾನಕ್ಕೆ ವಾಟಾಳ್ ಒತ್ತಾಯ
Recommended Video
ರಾಮನಗರ, ಆಗಸ್ಟ್ 9: "ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಆಗಿರುವ ಅನಾಹುತ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕು. ಹಾಗೂ ನೆರೆ ಸಂತ್ರಸ್ತರ ನೆರವಿಗೆ 50 ಸಾವಿರ ಕೋಟಿ ಪರಿಹಾರವನ್ನು ನೀಡಬೇಕು" ಎಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಶುಕ್ರವಾರ ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು.
ಐಜೂರು ವೃತ್ತದಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿದ ಕೊಡ ಹಾಗೂ ಹಂಡೆಗಳನ್ನು ಇಟ್ಟು ಪ್ರತಿಭಟನೆ ನಡೆಸಿದ ಅವರು, ಉತ್ತರ ಕರ್ನಾಟಕದ ನೆರವಿಗೆ 50 ಸಾವಿರ ಕೋಟಿ ನೀಡಬೇಕು, ಮಂತ್ರಿ ಮಂಡಲ ರಚಿಸಿ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಅಲ್ಲದೇ ರಾಜ್ಯದ ಎಲ್ಲ ಜನರು ಕೂಡಾ ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು ಎಂದು ಘೋಷಣೆ ಕೂಗಿದರು.
ಮಹಾಮಳೆಗೆ ಧುಮ್ಮಿಕ್ಕುತ್ತಿವೆ ಕಾವೇರಿ ಕೊಳ್ಳದ ಅಣೆಕಟ್ಟೆಗಳು
ಇದೇ ವೇಳೆ ಮಾತನಾಡಿ, ಉತ್ತರ ಭಾರತದಲ್ಲಿ ನೆರೆ ಹಾವಳಿ ಉಂಟಾದರೆ ಪ್ರಧಾನಿಯವರು ವೈಮಾನಿಕ ವೀಕ್ಷಣೆ ಮಾಡುತ್ತಾರೆ, ಅಕ್ಕಪಕ್ಕದ ಆಂಧ್ರಪ್ರದೇಶ, ತಮಿಳುನಾಡಿಗೆ ಭೇಟಿ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಆಗಿರುವ ಅನಾಹುತದ ಪ್ರಮಾಣ ವೀಕ್ಷಿಸಲು ಇನ್ನೂ ಭೇಟಿ ನೀಡಿಲ್ಲ. ರಾಜ್ಯ ಸರಕಾರವು ಸಂತ್ರಸ್ತರ ನೆರವಿಗೆ ಸರಿಯಾದ ಕೆಲಸ ಮಾಡುತ್ತಿಲ್ಲ, ಎಲ್ಲ ಶಾಸಕರು ಆಯಾ ಕ್ಷೇತ್ರಗಳ ಜನರ ನೆರವಿಗೆ ಮುಂದಾಗಬೇಕು ಎಂದರು.
ಕೇಂದ್ರ ಸರಕಾರ ಕೂಡಲೇ 50 ಸಾವಿರ ಕೋಟಿ ಅನುದಾನವನ್ನು ಘೋಷಣೆ ಮಾಡಬೇಕು. ನವ ಕರ್ನಾಟಕದ ನಿರ್ಮಾಣ ಆಗಬೇಕಿದೆ. ಇನ್ನು ಮಂತ್ರಿ ಮಂಡಲವನ್ನು ರಚನೆ ಮಾಡದ ಸಿಎಂ ಯಡಿಯೂರಪ್ಪನವರು ಏನೂ ರಾವಣನಲ್ಲ. ಅವರಿಗೆ ಹತ್ತು ತಲೆ, ಇಪ್ಪತ್ತು ಕೈಗಳೇನೂ ಇಲ್ಲ. ಎಲ್ಲ ಶಾಸಕರು ಸಂತ್ರಸ್ತರ ನೆರವಿಗೆ ಮುಂದಾಗಬೇಕು. ರಾಜ್ಯದ ಜನರು ಕೂಡ ಉತ್ತರ ಕರ್ನಾಟಕದ ಜನರ ನೆರವಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಬೇಕು ಎಂದು ಮನವಿ ಮಾಡಿದರು.