ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ
ರಾಮನಗರ, ಫೆಬ್ರವರಿ 06: ಕರ್ನಾಟಕದಲ್ಲಿ ಕಳೆದ ಐದು ತಿಂಗಳಿನಿಂದ ಸರ್ಕಾರ ಸತ್ತು ಹೋಗಿದೆ, ರಾಜ್ಯ ಬಿಜೆಪಿ ಸರ್ಕಾರ ಬರೀ ಸಚಿವ ಸಂಪುಟ ವಿಸ್ತರಣೆಯಲ್ಲಿಯೇ ಮುಳುಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ಕಲಬುರಗಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವೂ ತನ್ನ ಮೌಲ್ಯ ಕಳೆದುಕೊಂಡಿದೆ ಎಂದು ಆರೋಪಿಸಿದ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರದ ಐಜೂರು ವೃತ್ತದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಅವರು ಕೆಲಕಾಲ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 5 ತಿಂಗಳಿಂದ ಸರ್ಕಾರವೇ ಇಲ್ಲ, ಮಂತ್ರಿಮಂಡಲ ಮಾಡುವುದರಲ್ಲೇ ನಿರತರಾಗಿದ್ದಾರೆ. ಈ ಸರ್ಕಾರ ಪ್ರಾಮಾಣಿಕವಾಗಿಲ್ಲ, ಕರ್ನಾಟಕದಲ್ಲಿ ಸರ್ಕಾರ ಬದುಕಿಲ್ಲ, ಸತ್ತು ಹೋಗಿದೆ. ಜೊತೆಗೆ ಸರ್ಕಾರದ ಪರಿಸ್ಥಿತಿ ಹೀನಾಯವಾಗಿದೆ, ಒಬ್ಬರೇ ಒಬ್ಬ ಶಾಸಕರಿಗೆ, ಮಂತ್ರಿಗಳಿಗೆ, ಲೋಕಸಭಾ ಸದಸ್ಯರಿಗೆ ಕನ್ನಡದ ಬಗ್ಗೆ ಕಾಳಜಿಯಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಚಿಂತನೆಯಿಲ್ಲ ಎಂದರು.

ಹಲವು ಬಾರಿ ಹೋರಾಟ ಮಾಡಿದರೂ ಮೇಕೆದಾಟು ಯೋಜನೆ, ಮಹದಾಯಿ ಯೋಜನೆ ಅನುಷ್ಠಾನ ಆಗಲಿಲ್ಲ. ಬೆಂಗಳೂರು ಈಗ ಕನ್ನಡಿಗರ ಕೈಯಲಿಲ್ಲ, ಪರಭಾಷಿಗರ ಕೈಯಲ್ಲಿದೆ ಎಂದು ಕಿಡಿಕಾರಿದರು.
ಕಲಬುರಗಿ ಸಾಹಿತ್ಯ ಸಮ್ಮೇಳನ ಕೇವಲ ನೆಪ ಮಾತ್ರಕ್ಕೆ ನಡೆಯುತ್ತಿದೆ, ಸರ್ಕಾರ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಬೆಲೆ ನೀಡಿಲ್ಲ, ಅಲ್ಲಿ ದೋಸೆ, ಕಿಚಡಿ ತಿಂದು ಬರೋಕೆ ಮಾತ್ರ ಸಮ್ಮೇಳನಗಳು ಸೀಮಿತವಾಗಿದೆ ಎಂದು ವ್ಯಂಗ್ಯವಾಡಿದರು.

ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನ, ಬರೀ ಮೆರವಣಿಗೆಯಿಂದ ಪ್ರಯೋಜನವಿಲ್ಲ. ಸಾಹಿತಿಗಳು, ಕವಿಗಳು ಬೀದಿಗೆ ಬರಬೇಕು, ಹೋರಾಟ ಮಾಡಬೇಕು, ಬಂಧನವಾಗಬೇಕು ಅಂದಾಗ ಹೋರಾಟಕ್ಕೆ ಬೆಲೆ ಸಿಗುತ್ತದೆ ಇದು ಕನ್ನಡ ಚಳವಳಿ ವಾಟಾಳ್ ಪಕ್ಷದ ಒತ್ತಾಯ ಎಂದರು.












Click it and Unblock the Notifications