ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾ ಅತ ಕೇಳಿದ್ದಕ್ಕೆ ಪತ್ನಿ ಉಷಾ ಶಿವಕುಮಾರ್ ಪ್ರತಿಕ್ರಿಯೆ ಏನಿತ್ತು ಗೊತ್ತಾ?
ಈ ಬಾರಿ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಇಡೀ ರಾಜ್ಯದಾದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅವರ ಸ್ವ ಕ್ಷೇತ್ರ ಕನಕಪುರದಲ್ಲಿ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದು, ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಕನಕಪುರ ಪಟ್ಟಣದ ಪ್ರಮುಖ ಬೀದಿಗಳು ಸೇರಿದಂತೆ ಹಲಸಿಮರದೊಡ್ಡಿ, ವಾಣಿ ಟಾಕೀಸ್, ಜೆಸಿ ಬಡವಾಣೆಯ ಪ್ರಮುಖ ಬೀದಿಗಳಲ್ಲಿ ಮತಬೇಟೆ ನಡೆಸಿದರು.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, "ಕನಕಪುರ ನಗರದಲ್ಲಿ ನಾನು ಪ್ರಚಾರ ಮಾಡುತ್ತಿದ್ದೇನೆ, ಚುನಾವಣೆ ಹಿಂದಿನ ದಿನದವರೆಗೂ ನಾನು ಪ್ರಚಾರ ಮಾಡುತ್ತೇನೆ. ಹೋದ ಕಡೆಯಲ್ಲೆಲ್ಲಾ ಜನ ಪ್ರೀತಿ ತೋರಿಸುತ್ತಿದ್ದಾರೆ. ಕೆಲವರು ನೀವು ಯಾಕೆ ಪ್ರಚಾರಕ್ಕೆ ಬರ್ತಾ ಇದಿರಾ ನಾವು ವೋಟ್ ಹಾಕ್ತಿವಿ ಅಂತಾ ಹೇಳುತ್ತಿದ್ದಾರೆ" ಎಂದು ಹೇಳಿದರು.

ಕನಕಪುರದಲ್ಲಿ ಚುನಾವಣೆಯ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ವಹಿಸಿಕೊಂಡಿದ್ದಾರೆ, ಅವರೇ ನಮಗೆ ಬಲ ಎಂದು ಉಷಾ ಶಿವಕುಮಾರ್ ಹೇಳಿದರು. ಕನಕಪುರ ನಗರದಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲಿ ಕೂಡ ಪ್ರಚಾರ ಮಾಡುತ್ತೇನೆ, ಕಳೆದ ಬಾರಿ ಚುನಾವಣೆಯಲ್ಲಿ ಕೂಡ ನಾನು ಪ್ರಚಾರ ಮಾಡಿದ್ದೆ, ಸಾತನೂರು ಸೇರಿದಂತೆ ಹಲವು ಭಾಗಗಳಲ್ಲಿ ತೆರಳಿ ಪ್ರಚಾರ ಮಾಡ್ತೀನಿ ಎಂದರು.
ಡಿಕೆಶಿ ಸಿಎಂ ಆಗ್ತಾರ ಎಂದು ಕೇಳಿದ್ದಕ್ಕೆ ಉಷಾ ಪ್ರತಿಕ್ರಿಯೆ
ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, "ಇಲ್ಲ ಅದೆಲ್ಲ ನನಗೆ ಗೊತ್ತಿಲ್ಲ, ಹೈ ಕಮಾಂಡ್ ಮತ್ತು ದೇವರ ಇಚ್ಛೆ" ಎಂದು ಹೇಳಿದ್ದಾರೆ.
ನನಗೆ ರಾಜಕೀಯ ಗೊತ್ತಿಲ್ಲ, ಯಾರು ಸ್ಪರ್ಧಿ, ಯಾರು ಪ್ರತಿಸ್ಪರ್ಧಿ ತಿಳಿದಿಲ್ಲ ಡಿಕೆ ಶಿವಕುಮಾರ್ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಹಾಗಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ನಾವು ಪ್ರಚಾರಕ್ಕೆ ಬರದಿದ್ದರು ನಮ್ಮ ಜನ ಡಿಕೆ ಶಿವಕುಮಾರ್ ಗೆ ಮತ ನೀಡುತ್ತಾರೆ. ಬಹಿರಂಗ ಪ್ರಚಾರ ಮುಕ್ತಾಯವಾಗುವವರೆಗೂ ಕ್ಷೇತ್ರದಲ್ಲೇ ಉಳಿದು ಚುನಾವಣಾ ಪ್ರಚಾರ ಮಾಡ್ತೇನೆ ಎಂದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಹೆಸರು ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಚುನಾವಣೆಗೂ ಮೊದಲಿನಿಂದಲೇ ರಾಜಕೀಯ ವಲಯದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈ ಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡ್ತಾರೆ ಎಂದು ನೋಡಬೇಕಿದೆ.












Click it and Unblock the Notifications