ಒಕ್ಕಲಿಗ ಸಮಾಜವನ್ನು 2Aಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯ
ರಾಮನಗರ, ನವೆಂಬರ್ 27: ನಾಡಿಗೆ ಅನ್ನ ನೀಡಲು ಶ್ರಮಿಸುತ್ತಿರುವ ಒಕ್ಕಲಿಗ ಸಮಾಜವನ್ನು ಪ್ರವರ್ಗ 2a ಗೆ ಸೇರಿಸುವಂತೆ ರಾಮನಗರದ ಮಾಜಿ ಶಾಸಕ ಕೆ.ರಾಜು ಸರ್ಕಾರವನ್ನು ಆಗ್ರಹಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. ಈ ವೇಳೆ ಈಗಾಗಲೇ ವೀರಶೈವ ಸಮಾಜವನ್ನು ಪ್ರವರ್ಗ 2aಗೆ ಸೇರಿಸಿರುವುದನ್ನು ಒಕ್ಕಲಿಗ ಸಮಾಜದ ಮುಖಂಡರು ಸ್ವಾಗತಿಸಿಸಿದರು.
ನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರಿದ್ದು, ಅದೇ ಸಂಖ್ಯೆಯಲ್ಲಿ ಒಕ್ಕಲಿಗ ಸಮಾಜದವರು ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇವಲ ತಮ್ಮ ಸಮಾಜವನ್ನು ಮಾತ್ರ 2a ಗೆ ಸೇರಿಸಿದ್ದು ಸರಿಯಿಲ್ಲ. ಇನ್ನು ಕೇವಲ ಒಂದು ವಾರದ ಅವಧಿಯೊಳಗೆ ನಿರ್ಧಾರ ಮಾಡದಿದ್ದರೆ ಪ್ರತಿಭಟನೆಗೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾಗಿದ್ದು, ಬಿಜೆಪಿಯಲ್ಲಿರುವ ಒಕ್ಕಲಿಗ ಸಮಾಜದ ಮಂತ್ರಿಗಳು ಧ್ವನಿ ಎತ್ತಬೇಕು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಒಕ್ಕಲಿಗ ಸಮಾಜವನ್ನು 2a ವರ್ಗಕ್ಕೆ ಸೇರಿಸಲು ಮುಂದಾಗಬೇಕು ಎಂದು ಒಕ್ಕಲಿಗ ಸಮಾಜದ ಮುಖಂಡರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಾಜು, ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಶೋಕ ಮತ್ತು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಗಲ್ ನಟರಾಜ್ ಉಪಸ್ಥಿತರಿದ್ದರು.












Click it and Unblock the Notifications