ನಿಖಿಲ್, ಪ್ರಜ್ವಲ್ ನಾಯಕತ್ವದಲ್ಲಿ ಮುಂದಿನ ಚುನಾವಣೆ; ಮಾಜಿ ಸಿಎಂ ಎಚ್ಡಿಕೆ
ರಾಮನಗರ, ಸೆಪ್ಟೆಂಬರ್ 30: ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದು, ಮುಂದಿನ ಚುನಾವಣೆಯನ್ನು ಪಕ್ಷದ ಯುವ ನಾಯಕರಾದ ನಿಖಿಲ್ ಹಾಗೂ ಪ್ರಜ್ವಲ್ ಜಂಟಿ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
"ಯುವಕರಿಗೂ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಯುವಕರಿಗೆ ಇಂದು ಈ ಬಗ್ಗೆ ಸಂದೇಶ ನೀಡುತ್ತೇನೆ. ಹಣದ ರಾಜಕಾರಣ ಮೆಟ್ಟಿ ನಿಲ್ಲಬೇಕು. ಜನರ ಹತ್ತಿರ ಹೋಗಿ ಜನರ ಸಮಸ್ಯೆಗಳನ್ನು ಆಲಿಸಬೇಕಾಗುತ್ತದೆ ಎಂದರಲ್ಲದೆ, ನಿಖಿಲ್ ಹಾಗೂ ಪ್ರಜ್ವಲ್ ಜಂಟಿ ನಾಯಕತ್ವದಲ್ಲಿ ಯುವ ಜನತೆಯನ್ನು ಒಗ್ಗೂಡಿಸಿ ಮುಂದಿನ ಚುನಾವಣೆ ಎದುರಿಸಲಾಗುವುದು," ಎಂದು ಮಾಜಿ ಮುಖ್ಯಮಂತ್ರಿ ಗುರುವಾರ ನಡೆಸಿದ ಪತ್ರಿಕಾಗೋಷ್ಠೀಯಲ್ಲಿ ಘೋಷಿಸಿದರು.
ಜನತಾ ಪರ್ವ 1.0 ಹಾಗೂ ಜೆಡಿಎಸ್ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಸಂಘಟನಾ ಕಾರ್ಯಗಾರದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ ಆರಂಭಕ್ಕೆ ಮುನ್ನ ಕುಮಾರಸ್ವಾಮಿ ಮಾಧ್ಯಮಗಳ ಜತೆ ಮಾತನಾಡಿದರು.

ಬಿಜೆಪಿಯಿಂದ ನಿರುದ್ಯೋಗ ಕೊಡುಗೆ:
"ರಾಜ್ಯ ಬಿಜೆಪಿ ಸರಕಾರವು ತನ್ನ ಹಿಡನ್ ಅಜೆಂಡಾಗಳಿಗೆ ಜೋತು ಬಿದ್ದು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
"ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಬಿಜೆಪಿ ಸರಕಾರ ತೀವ್ರ ನಿರ್ಲಕ್ಷ್ಯ ತೋರಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಜಾರಿಗೆ ತಂದ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಸರಕಾರ ಉಪೇಕ್ಷೆ ಮಾಡಿದೆ. ಅಧಿಕಾರಕ್ಕೆ ಬರುವ ಮುನ್ನ ಉದ್ಯೋಗ ಕೊಡುವುದಾಗಿ ಬಿಜೆಪಿ ಸರಕಾರ ಹೇಳಿತ್ತು. ಆದರೆ, ದುಡಿಯುವ ಕೈಗಳಿಗೆ ಕೆಲಸ ಕೊಡದೆ ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದೆ. 9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ನಿರ್ಮಿಸುವ ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ನಿರ್ಧಾರ ಮಾಡಿತ್ತು. ಆದರೆ ಬಿಜೆಪಿ ಸರಕಾರ ಆ ಯೋಜನೆಯನ್ನು ಮೂಲೆಗುಂಪು ಮಾಡಿದೆ," ಎಂದು ಕುಮಾರಸ್ವಾಮಿ ಆರೋಪಿಸಿದರು.

"ಸರಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಬಿಜೆಪಿಗೆ ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪ್ರಮುಖ ಉದ್ದೇಶ ಇದೆ. ಈ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಯುವಕರು ಹಾಗೂ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಬೇಕು. ಅದಕ್ಕೆ ಅವಕಾಶ ಮಾಡಿಕೊಡುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ," ಎಂದು ಅವರು ಟೀಕಿಸಿದರು.
"ಪ್ರತಿಯೊಂದು ಕುಟುಂಬದ ಯುವಕರಿಗೆ ಉದ್ಯೋಗ ದೊರಕಬೇಕು. ನಿರುದ್ಯೋಗ ತೊಡೆದು ಹಾಕುವುದು ಜೆಡಿಎಸ್ ಪಕ್ಷದ ಗುರಿ. ಮೊದಲು ಎಲ್ಲರಿಗೂ ಕೆಲಸ ಸಿಗಲಿ. ಬದುಕು ಸಿಗಲಿ. ಆಮೇಲೆ ಹಿಂದೂ ರಾಷ್ಟ್ರದ ಬಗ್ಗೆ ಯೋಚನೆ ಮಾಡೋಣ. ರಾಜ್ಯದ ಮೂಲೆ ಮೂಲೆಯಲ್ಲಿ ಯುವಕರು ಸಂಘಟನೆ ಮಾಡಬೇಕು," ಎಂದು ಕುಮಾರಸ್ವಾಮಿ ಅವರು ಹೇಳಿದರು.

"ಇಂದು ನಾಲ್ಕನೇ ದಿನದ ಕಾರ್ಯಗಾರ ನಡೆಯುತ್ತಿದ್ದು, ಕೊನೆಯ ದಿನದ ಯುವ ಜನತಾ ದಳ ಕಾರ್ಯಾಗಾರವಾಗಿದೆ. ಉತ್ಸಾಹದಲ್ಲಿ ಈ ಕಾರ್ಯಗಾರ ಆರಂಭವಾಗಿದ್ದು, ನಾವು 300 ಜನರಿಗೆ ಮಾತ್ರ ಆಹ್ವಾನ ಕೊಟ್ಟಿದ್ದೆವು. ಆದರೆ ಹೆಚ್ಚಿನ ಜನ ಇಂದು ಸೇರಿದ್ದಾರೆ. ಈ ಕಾರ್ಯಾಗಾರದಲ್ಲಿ ಮುಂದಿನ 2023ರ ಗುರಿ ಏನಿದೆ ಅದಕ್ಕೆ ಯುವ ಜನತೆಯ ದುಡಿಮೆ ಮುಖ್ಯವಾಗಿದೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications