ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ ಖ್ಯಾತ ನಿರ್ಮಾಪಕ
ರಾಮನಗರ, ನವೆಂಬರ್ 30; ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕಾವು ಏರ ತೊಡಗಿದ್ದುದೆ. 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ರಾಮನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದಲ್ಲದೇ ಮುಂದೆ ರಾಜಕೀಯಕ್ಕೂ ಧುಮುಕುವುದಾಗಿ ಘೋಷಿಸಿದ್ದಾರೆ.
ಡಿಸೆಂಬರ್ 12ರಂದು ನಿಗದಿಯಾಗಿರುವ ಒಕ್ಕಲಿಗ ಸಂಘದ ಚುನಾವಣೆಗೆ ಎಲ್ಲೆಡೆ ಬಿರುಸಿನ ಪ್ರಚಾರದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಅದರಂತೆ ನಿರ್ಮಾಪಕ ಉಮಾಪತಿ ರಾಮನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ಇನ್ನು ಮುಳುಗುತ್ತಿರುವ ಒಕ್ಕಲಿಗ ಸಂಘವನ್ನು ಉಳಿಸುವ ನಿಟ್ಟಿನಲ್ಲಿ ತಾವು ನಿರ್ದೇಶಕ ಸ್ಥಾನಕ್ಕೆ ಡಾ. ಕೆ. ನಾರಾಯಣ ಗೌಡ ಹಾಗೂ ಡಾ. ಬಿ. ಎಸ್. ಆಂಜನಪ್ಪ ಬಣದಿಂದ ಮೊದಲ ಬಾರಿಗೆ ಸ್ಪರ್ಧೆಗೆ ಇಳಿದಿದ್ದೇನೆ. ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದು ಸಂಘಕ್ಕೆ ಮೂರು ಕೋಟಿ ವೆಚ್ಚದ ಜಾಗವನ್ನು ನೀಡಿದ್ದೇನೆ. ಸಂಘದ ಶ್ರೇಯೋಭಿವೃದ್ದಿಗಾಗಿ ನಾನು, ನಮ್ಮ ತಂಡ ದುಡಿಯಲಿದ್ದು ಮತದಾರರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

'ಮದಗಜ' ನಿರೀಕ್ಷೆ ಹೆಚ್ಚಾಗಿದೆ; "ಸಿನಿಮಾ ನನಗೆ ಅನ್ನ, ಹಣ, ಕೀರ್ತಿ ತಂದುಕೊಟ್ಟಿದೆ. ಸಿನಿಮಾ ಮತ್ತು ಒಕ್ಕಲಿಗ ಸಂಘದ ಚುನಾವಣೆ ನನಗೆ ಎರಡು ಕಣ್ಣು. ಎರಡು ಕಣ್ಣುಗಳು ನನಗೆ ಮುಖ್ಯ ಎರಡನ್ನು ನಿಭಾಯಿಸುತ್ತಿದ್ದೇನೆ" ಎಂದು ಉಮಾಪತಿ ಶ್ರೀನಿವಾಸ ಗೌಡ ಹೇಳಿದರು.
"ಡಿಸೆಂಬರ್ 3ರಂದು ಮದಗಜ ಸಿನಿಮಾ ಬಿಡುಗಡೆ ಇದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಎಲ್ಲಾ ಕಡೆ ಪ್ರಶಂಸೆ ಸಿಕ್ಕಿದೆ. ಸಿನಿಮಾ ಒಳ್ಳೆ ಮೊತ್ತದ ರೈಟ್ಸ್ಗೆ ಮಾರಾಟವಾಗಿದೆ" ಎಂದು ನಿರ್ಮಾಪಕ ಉಮಾಪತಿ ಸಂತಸ ವ್ಯಕ್ತಪಡಿಸಿದರು.
"ಡಿಸೆಂಬರ್ ತಿಂಗಳು ನನಗೆ ಲಕ್ಕಿ. ಮುಂದಿನ ಹತ್ತು ದಿನಗಳಲ್ಲಿ ಶುಭಸುದ್ದಿ ನೀಡುತ್ತೇನೆ. ಚುನಾವಣೆ ಅಂದರೆ ಕಲ್ಲು ಹೊಡೆಯುತ್ತಾರೆ, ಗುಂಡು ಹಾರಿಸುತ್ತಾರೆ. ಆದರೆ, ಅದನ್ನೆಲ್ಲ ಭೇದಿಸುವ ಶಕ್ತಿ ನಮಗೆ ಇರಬೇಕು. ಮುಂದೆ ರಾಜಕೀಯ ಕ್ಷೇತ್ರಕ್ಕೂ ಹೋಗುತ್ತೇನೆ. ನನಗೆ ನಾನೇ ಬೇಲಿ ಹಾಕಿಕೊಳ್ಳುವುದಿಲ್ಲ" ಎಂದು ಉಮಾಪತಿ ರಾಜಕೀಯ ಪ್ರವೇಶದ ಸುಳಿವು ನೀಡಿದರು.
"ನಾನು ಹಸು ಕಟ್ಟಿ ಹುಲ್ಲು ಹಾಕಿ, ಹಾಲು ಕರೆದುಕೊಳ್ಳುತ್ತೇನೆ. ಹೋರಿ ಕಟ್ಟಿಕೊಳ್ಳಲ್ಲ. ನಾನೇ ದುಡ್ಡು ಹಾಕಿ ಒಬ್ಬನನ್ನು ಹೀರೋ ಮಾಡುತ್ತೇನೆ. ನನಗೆ ನಾನೇ ಹೀರೋ, ನನ್ನ ಮೇಲೆ ನಾನು ಯಾಕೆ ಹಣ ಹೂಡಿಕೆ ಮಾಡಬಾರದು?" ಎಂದ ಉಮಾಪತಿ ರಾಜಕೀಯಕ್ಕೂ ಹೋಗುವ ಇರಾದೆ ವ್ಯಕ್ತಪಡಿಸಿದರು.
221 ಅಭ್ಯರ್ಥಿಗಳು ಕಣದಲ್ಲಿ; ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕಣ ಅಂತಿಮಗೊಂಡಿದೆ. 35 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 221 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 12ರಂದು ಮತದಾನ ನಡೆಯಲಿದೆ.
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 5,20,721 ಜನರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಬೆಂಗಳೂರು ನಗರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಎಂದರೆ 1,97,125 ಮತದಾರರು ಇದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಒಟ್ಟು 15 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, 141 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯದಲ್ಲಿ 4 ಸ್ಥಾನಕ್ಕೆ 16, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ಸ್ಥಾನಕ್ಕೆ 12 ಮಂದಿ ಕಣದಲ್ಲಿದ್ದಾರೆ.
ಹಾಸನದಲ್ಲಿ 3 ಸ್ಥಾನಕ್ಕೆ 11 ಅಭ್ಯರ್ಥಿಗಳು, ಮೈಸೂರು ಜಿಲ್ಲೆಯಲ್ಲಿ 3 ಸ್ಥಾನಕ್ಕೆ 9 ಜನರು, ತುಮಕೂರು ಜಿಲ್ಲೆಯಲ್ಲಿ 2 ಸ್ಥಾನಕ್ಕೆ 7 ಅಭ್ಯರ್ಥಿಗಳಿದ್ದಾರೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಸ್ಥಾನಗಳಿದ್ದು, 9 ಮಂದಿ ಕಣದಲ್ಲಿ ಉಳಿದಿದ್ದಾರೆ.
ಆರು ಪ್ರಬಲ ಸಿಂಡಿಕೇಟ್ ಸೇರಿದಂತೆ ಹಲವು ಬಣಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಬಿರುಸಿನ ಪ್ರಚಾರ ನಡೆಸುತ್ತಿವೆ. ಬೆಂಗಳೂರು ನಗರದ 15 ಸ್ಥಾನಗಳಿಗೆ ತೀವ್ರ ಪೈಪೋಟಿ ಇದ್ದು ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications