ರಾಮನಗರ: ಮುಷ್ಕರ ನಿರತ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ
ರಾಮನಗರ, ಏಪ್ರಿಲ್ 10: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ರಾಜ್ಯ ಸರ್ಕಾರ ಪ್ರತಿಭಟನಾನಿರತ ಸಾರಿಗೆ ನೌಕರರ ವಿರುದ್ಧ ವರ್ಗಾವಣೆ ಅಸ್ತ್ರ ಪ್ರಯೋಗಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ, ಚಾಲನಾ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿಯ ಆಡಳಿತಾತ್ಮಕ ವರ್ಗಾವಣೆ ಹೆಸರಿನಲ್ಲಿ ದೂರದ ಡಿಪೋಗಳಿಗೆ ವರ್ಗಾವಣೆ ಮಾಡುವ ಮೂಲಕ ಬೆದರಿಕೆಯ ತಂತ್ರ ಪ್ರಯೋಗಿಸಿದೆ.

ರಾಮನಗರ ಜಿಲ್ಲೆಯ ಸುಮಾರು 11 ಮಂದಿ ಸಾರಿಗೆ ನೌಕರರನ್ನು ದೂರದ ಪುತ್ತೂರು ಬಸ್ ಡಿಪೋಗೆ ವರ್ಗಾವಣೆ ಮಾಡಿ ಕೇಂದ್ರ ಕಚೇರಿ ಆದೇಶ ಹೊರಡಿಸಿದೆ. ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಸಾರಿಗೆ ಕೇಂದ್ರ ಕಚೇರಿ ಸಮಾಜಾಯಿಸಿ ನೀಡಿದೆ.

ಸಾರಿಗೆ ನೌಕರರ ಹೋರಾಟ ಹತ್ತಿಕ್ಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದು, ಪ್ರಾರಂಭದಲ್ಲಿ ಪ್ರತಿಭಟನೆಗೆ ಮುಂದಾದರೆ ಅಮಾನತ್ತು ಮಾಡುವ ಎಚ್ಚರಿಕೆ ನೀಡಿದ ಸಾರಿಗೆ ಇಲಾಖೆ, ಎರಡನೇ ಬಾರಿಗೆ ಕೆಲಸಕ್ಕೆ ಹಾಜರಾಗಿ ಇಲ್ಲವೇ ವಸತಿ ಗೃಹ ಖಾಲಿ ಮಾಡಿ ಎಂದು ಬೆದರಿಕೆಯೊಡ್ಡಿತ್ತು. ಇದಕ್ಕೆ ಸೊಪ್ಪು ಹಾಕದ ನೌಕರರ ಮೇಲೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದೆ.












Click it and Unblock the Notifications