ರಾಮನಗರದಲ್ಲಿ ಬಸ್ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರ ಪ್ರತಿಭಟನೆ
ರಾಮನಗರ, ಡಿಸೆಂಬರ್ 11: ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರನ್ನು ಬಂಧಿಸಿದ ಪೋಲೀಸರ ವರ್ತನೆ ಖಂಡಿಸಿ ರಾಮನಗರ ಮತ್ತು ಬಿಡದಿಯಲ್ಲಿ ಬಸ್ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿ, ಬೆಂಗಳೂರು ಹೊಂದಿಕೊಂಡಂತೆ ಇರುವ ಬಿಡದಿಯಲ್ಲಿ ಬೆಳಂಬೆಳಿಗ್ಗೆ ಬಿಎಂಟಿಸಿ ನೌಕರರು ಬಿಡದಿಯಿಂದ ಸಂಚಾರ ಮಾಡುತ್ತಿದ್ದ ಬಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಬಿಡದಿಯಿಂದ ಬೆಂಗಳೂರಿಗೆ ದಿನ ನಿತ್ಯ ಸಾವಿರಾರು ಜನ ಕೆಲಸಕ್ಕಾಗಿ ಸಂಚಾರ ಮಾಡುತ್ತಿದ್ದರು. ದಿಢೀರ್ ಬಿಎಂಟಿಸಿ ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ರೇಷ್ಮೆ ನಗರಿ ರಾಮನಗರ ಸಾರಿಗೆ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಬೆಳಂಬೆಳಿಗ್ಗೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದ ಸಾರಿಗೆ ನೌಕರರು ಬಸ್ ಸಂಚಾರ ನಿಲ್ಲಿಸಿದರು. ಬಸ್ ಗಳನ್ನು ನಿಲ್ದಾಣದಲ್ಲೇ ನಿಲ್ಲಿಸಿ ಬಸ್ ಬಂದ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ದಿಢೀರ್ ಬಸ್ ಬಂದ್ ನಿಂದ ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು. ದೂರದ ಊರಿಗೆ ತೆರಳಲು ಹರಸಾಹಸಪಡುತ್ತಾ ಖಾಸಗಿ ಬಸ್ ಗಳತ್ತ ಜನರು ಮುಖಮಾಡಿದ್ದರು. ಇನ್ನು ದಿಢೀರ್ ಬಸ್ ಬಂದ್ ಮಾಡಿದ ಸಾರಿಗೆ ನೌಕರರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ಸರ್ಕಾರಿ ನೌಕರರ ಮತ್ತು ಸಾರಿಗೆ ನೌಕರರ ನಡುವೆ ಇರುವ ವೇತನ ತಾರತಮ್ಯ ನಿಲ್ಲಬೇಕು ಎಂದು ಸಾರಿಗೆ ನೌಕರರು ಒತ್ತಾಯಿಸಿದರು.












Click it and Unblock the Notifications