ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತನಿಂದ ಲಂಚ ಪಡೆಯುತ್ತಿದ್ದ ಮೂವರ ಬಂಧನ
ರಾಮನಗರ, ನವೆಂಬರ್ 2: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಲಂಚ ಪಡೆಯುತ್ತಿದ್ದ ಭೂಸ್ವಾಧೀನಾ ಕಚೇರಿಯ ಮೂವರು ಸಿಬ್ಬಂದಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಭೂಸ್ವಾಧೀನಾ ಕಚೇರಿಯ ಕ್ಲರ್ಕ್ ಕೇಶವ, ಪ್ರಮೋದ್ ಮತ್ತು ಚಾಲಕ ಕಿರಣ್ ಕುಮಾರ್ ಬಂಧಿತ ಆರೋಪಿಗಳು.
ರೈತನಿಂದ ಲಂಚ ಪಡೆದು ಜೈಲು ಸೇರಿದ ಕೆ.ಆರ್. ಪೇಟೆ ಎಎಸ್ ಐ
ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ಸರ್ವೆ ನಂ.173/10 ಮತ್ತು 172/13 ರ ಕೆ.ಎಸ್.ಉಮಾಶಂಕರ್ ಎಂಬುವರಿಗೆ ಸೇರಿದ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಇದರ ಪರಿಹಾರ ಹಣ ಬಿಡುಗಡೆ ಮಾಡಲು ಆರೋಪಿಗಳು 1,70,000 ರೂಪಾಯಿ ಲಂಚದ ಬೇಡಿಕೆ ಇಟ್ಟು ಇಂದು ಲಕ್ಷ ರೂಪಾಯಿ ಲಂಚ ಪಡೆಯುವಾಗ ದಾಳಿ ಮಾಡಿ ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ಉಮಾಶಂಕರ್ ದೂರಿನ ಮೇರೆಗೆ ವ್ಯವಸ್ಥಿತವಾಗಿ ದಾಳಿ ಮಾಡಿದ ಎಸಿಬಿ ತಂಡ ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.