ರಾಮನಗರದಲ್ಲಿ ಶಿವಕುಮಾರ ಶ್ರೀಗಳ 111 ಅಡಿ ಪುತ್ಥಳಿ ನಿರ್ಮಾಣ
ರಾಮನಗರ, ನವೆಂಬರ್ 04 : ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ನವೆಂಬರ್ 8ರಂದು ಶಂಕು ಸ್ಥಾಪನೆ ಮಾಡಲಾಗುತ್ತದೆ. ಶ್ರೀಗಳ ಹುಟ್ಟೂರು ವೀರಾಪುರ ಗ್ರಾಮದಲ್ಲಿ ಪುತ್ಥಳಿ ನಿರ್ಮಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಜಾಗ ನಿಗದಿ ಮಾಡಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗಲಿದ್ದು, ಗ್ರಾಮವನ್ನು ಸಹ ಅಭಿವೃದ್ಧಿ ಮಾಡಲಾಗುತ್ತದೆ.
ನವೆಂಬರ್ 8ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಶಂಕುಸ್ಥಾಪನೆ ಮಾಡಲಿದ್ದಾರೆ. ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮಿಗಳು ಉಪಸ್ಥಿತರಿರುವರು.

ವೀರಾಪುರ ಗ್ರಾಮ ಸಿದ್ದಗಂಗಾ ಶ್ರೀಗಳ ಹುಟ್ಟೂರು. ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಗಳ ಪುತ್ರರಾದ ಅವರು, ಬಿಎ ವ್ಯಾಸಂಗದ ಬಳಿಕ ಸನ್ಯಾಸತ್ವವನ್ನು ಸ್ವೀಕರಿಸಿದರು. ಮಠದ ಜವಾಬ್ದಾರಿ ಹೊತ್ತ ಬಳಿಕ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿರಲಿಲ್ಲ.
1930 ರಿಂದ 1955ರ ತನಕ ಶಿವಕುಮಾರ ಶ್ರೀಗಳು ಹುಟ್ಟೂರಿಗೆ ಭೇಟಿ ನೀಡಿರಲಿಲ್ಲ. ಭಕ್ತರ ಒತ್ತಾಯದ ಬಳಿಕ ಹುಟ್ಟೂರಿಗೆ ಭೇಟಿ ಕೊಟ್ಟಿದ್ದರು. ಶ್ರೀಗಳು ಲಿಂಗೈಕ್ಯರಾದ ಬಳಿಕ ಹುಟ್ಟೂರನ್ನು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿತ್ತು, ಅದಕ್ಕಾಗಿ ಅಲ್ಲಿಯೇ ಪುತ್ಥಳಿ ನಿರ್ಮಿಸಲಾಗುತ್ತಿದೆ.












Click it and Unblock the Notifications