ವಿಡಿಯೋ; ರಾಮನಗರ ಎಸ್ಪಿಗೆ ಎಚ್ಚರಿಕೆ ಕೊಟ್ಟ ಎಚ್ಡಿಕೆ!
ರಾಮನಗರ, ಫೆಬ್ರವರಿ 14; "ಹಳ್ಳಿಗಳಲ್ಲಿ ಹೆಚ್ಚಾಗಿರುವ ಮದ್ಯ ಮಾರಾಟವನ್ನು ತಡೆಗಟ್ಟಿ ಅವಾಗ ನಿಮ್ಮನ್ನು ಮೆಚ್ಚುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬುಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಕಾರ್ಯಕರ್ತರು, ಪೋಲಿಸರು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ವರ್ತಿಸುತ್ತಿಲ್ಲ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವವರಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಿದ್ದಾರೆ. ರೈತರ ಬಳಿ ಮದ್ಯ ಸಿಕ್ಕರೆ ಅವರನ್ನು ಜೈಲಿಗೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರ ಅಳಲಿನಿಂದ ಸಿಟ್ಟಾದ ಕುಮಾರಸ್ವಾಮಿ ಎಸ್ಪಿ ಸಂತೋಷ್ ಬಾಬುಗೆ ಕರೆ ಮಾಡಿದರು, ಪೋನಿನಲ್ಲೇ ತರಾಟೆ ತೆಗದುಕೊಂಡರು. "ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದರೆ ಬಿಡಲ್ಲ ನಾನು, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮಂತಹವರಿಂದ. ಆ ಕುಟುಂಬವನ್ನು ಉಳಿಸಿದ್ದು ನಾನು" ಎಂದು ಅಸಮಾಧಾನ ಹೊರಹಾಕಿದರು.

"ಇವತ್ತು ಮದ್ಯದ ಬಾಟಲ್ ಮಾರಾಟ ಮಾಡುತ್ತಿರುವ ಎಲ್ಲಾ ಅಂಗಡಿಗಳನ್ನು ರೈಡ್ ಮಾಡುತ್ತೀರಾ?. ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟಲ್ ಮದ್ಯ ಸಿಕ್ಕಿದವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾನೆ. ಹೊಲದಲ್ಲಿ ಕೆಲಸ ಮಾಡುವವರಿಗೆ ಕೊಡಲು 20 ಬಾಟಲ್ ಮದ್ಯ ಇಟ್ಟಿದ್ದ ರೈತನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೀರಿ" ಎಂದು ಎಸ್ಪಿ ವಿರುದ್ಧ ಹರಿಹಾಯ್ದರು.
"ಸರ್ಕಾರಕ್ಕೆ ಹೇಳಿ ಇದನ್ನೆಲ್ಲಾ ನಿಲ್ಲಿಸಲು, ನೀವು ಪಕ್ಷಾತೀತವಾಗಿ ಕೆಲಸ ಮಾಡಿ, ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಡಿ. ಈ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ನಾನು ಅಧಿಕಾರಿಗಳಿಗೆ ಗೌರವ ಕೊಡುತ್ತೇನೆ, ನೀವು ಹೀಗೆ ವರ್ತಿಸಿದರೆ ಕನಕಪುರದವರ ತರಹ ಡೈಲಾಗ್ ಹೇಳುತ್ತೇನೆ. ನೀವು ಎಲ್ಲಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಿ ಆಗ ನಿಮ್ಮನ್ನು ನಾನು ಮೆಚ್ಚುತ್ತೇನೆ" ಎಂದರು.
"ಇಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪ್ರಶ್ನೆ ಇಲ್ಲ ಜನರಿಗೆ ಒಳ್ಳೆಯದಾಗಬೇಕು. ಬಿಡದಿಯ ಗಾಣಕಲ್ ಗ್ರಾಮದಲ್ಲಿ ಹಾಫ್ ಮರ್ಡರ್ ಆಗಿದೆ. ನಿಮ್ಮ ಬಿಡದಿಯ ಇನ್ಸ್ಪೆಕ್ಟರ್ಗೆ ಯೋಗ್ಯತೆ ಇಲ್ಲ ಇದುವರೆಗೂ ಯಾರನ್ನು ಬಂಧಿಸಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಮಜಾಯಿಸಿ ನೀಡಲು ಎಸ್ಪಿ ಸಂತೋಷ್ ಬಾಬು, "ಸರ್ ಅದು ಮೈನರ್" ಎಂದರು. ಇದರಿಂದ ಮತ್ತಷ್ಟು ಸಿಟ್ಟಾದ ಕುಮಾರಸ್ವಾಮಿ, "ಕೊಲೆಯಾಗಿದ್ದರೆ ಏನೂ ಮಾಡುತ್ತಿದ್ದೀರಿ. ಇಲ್ಲಿ ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ನಾನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡುತ್ತೇನೆ" ಎಂದರು.
ಹೆಚ್ಚಾದ ಅಕ್ರಮ ಮದ್ಯ ಮಾರಾಟ; ಕುಡಿಯಲು ನೀರು ಸಿಗದ ಕುಗ್ರಾಮಗಳಲ್ಲೂ ಮದ್ಯ ಸಿಗುತ್ತದೆ. ಅಕ್ರಮ ಮದ್ಯ ಮಾರಾಟ ಸಾಮಾಜಿಕ ಪಿಡುಗಾಗಿ ಇಡೀ ರಾಜ್ಯವನ್ನು ಕಾಡುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ ಇರುವ ಬಹುತೇಕ ಎಲ್ಲಾ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 40ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಾಗಿವೆ.
ಇಡೀ ರಾಜ್ಯದಲ್ಲೇ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಗ್ರಾಮಗಳ ಪೆಟ್ಟಿ ಅಂಗಡಿಗಳಲ್ಲದೇ ಕೆಲವು ಮನೆಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಸರ್ಕಾರ ನೀಡುವ ಟಾರ್ಗೆಟ್ ರೀಚ್ ಮಾಡುವ ಬರದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಪರೋಕ್ಷ ಬೆಂಬಲವೂ ಇದೆ ಎಂಬುದೇ ಆತಂಕದ ವಿಚಾರ.
ಸಮರ ಸಾರಿದ ಎಸ್ಪಿ; ನೂತನವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸಂತೋಷ್ ಬಾಬು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರವನ್ನೇ ಸಾರಿದ್ದು ಪ್ರತಿ ದಿನ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಾಗುತ್ತಿವೆ.
ಪೋಲಿಸ್ ಇಲಾಖೆ ನಿರಂತರವಾಗಿ ದಾಳಿ ಮಾಡುತ್ತಿದ್ದರು ಅಕ್ರಮ ಮದ್ಯ ಮಾರಾಟ ನಿಂತಿಲ್ಲ, ಎಸ್ಪಿ ಯವರ ಖಡಕ್ ಆದೇಶ ಕೆಳ ಹಂತದ ಅಧಿಕಾರಿಗಳಿಗೆ ದುಡ್ಡು ಮಾಡುವ ದಂದೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅಕ್ರಮ ಮದ್ಯಮಾರುವ ಅಂಗಡಿಗಳ ಮೇಲೆ ದಾಳಿ ಮಾಡುವ ಪೋಲಿಸರು ನೂರಾರು ಮದ್ಯದ ಬಾಟಲ್ ಸಿಕ್ಕರು ಅವರಿಂದ ಹಣ ಪಡೆದು, ಠಾಣೆಯಲ್ಲೇ ಜಾಮೀನು ನೀಡಿ ಕಳುಹಿಸುತ್ತಿದ್ದಾರೆ. ಏನು ತಿಳಿಯದೇ ಮನೆಯಲ್ಲಿ ಹತ್ತರ ಸಂಖ್ಯೆಯಲ್ಲಿ ಬಾಟಲ್ ಇದ್ದು ಪೋಲಿಸರಿಗೆ ಹಣ ಕೊಡದಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
"ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳಾದ ಚನ್ನಪಟ್ಟಣ ,ರಾಮನಗರ ಮತ್ತು ಮಾಗಡಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಿಸಿರುವ ಜಿಲ್ಲೆಯ ಪೋಲಿಸರು ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕೇವಲ ನೆಪಮಾತ್ರಕ್ಕೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಅಂದರೆ ಕನಕಪುರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಿಲ್ಲವೇ? ಅಥವಾ ಪೋಲಿಸರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆಯೇ?" ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಪ್ರಶ್ನಿಸಿದ್ದಾರೆ.












Click it and Unblock the Notifications