ಚನ್ನಪಟ್ಟಣದಲ್ಲಿ ರಕ್ತದ ಬಣ್ಣದ ಹುಣಸೆ; ಏನಿದರ ಹಿಂದಿನ ಕಥೆ?
ಚನ್ನಪಟ್ಟಣ, ಅಕ್ಟೋಬರ್ 16: ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್.ಕಾಲೋನಿ ಗ್ರಾಮದಲ್ಲಿ ವಿಚಿತ್ರವಾದ ಹುಣಸೆ ಮರವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಮರ ರಕ್ತದ ಬಣ್ಣದ ಹುಣಸೆ ಹಣ್ಣು ಬಿಡುತ್ತಿದ್ದು, ಅಚ್ಚರಿ ಮೂಡಿಸಿದೆ.
ಚನ್ನಪಟ್ಟಣ ಮತ್ತು ರಾಮನಗರದ ಗಡಿ ಸಮೀಪದ ಜಮೀನಿನಲ್ಲಿ ಈ ವಿಚಿತ್ರ ಹುಣಸೆ ಮರವಿದೆ. ಸುಮಾರು 25 ವರ್ಷದ ಈ ಮರ ಕಳೆದ 8 ವರ್ಷಗಳಿಂದ ಫಸಲು ನೀಡುತ್ತಿದೆ. ನೋಡಲು ಹುಣಸೆ ಕಾಯಿಯಂತೆ ಕಂಡರೂ ಇದನ್ನು ಮುರಿದರೆ ಒಳಗೆಲ್ಲ ಕೆಂಪು ಬಣ್ಣ ತುಂಬಿಕೊಂಡಿದೆ.
ಈ ಭಾಗದಲ್ಲಿ ಹಲವು ವಿಧದ ಹುಣಸೆ ಮರಗಳಿವೆ. ಆ ಎಲ್ಲಾ ಮರಗಳಲ್ಲೂ ಮಾಮೂಲಿಯಾದ ಹುಣಸೆ ಕಾಯಿಗಳಿವೆ. ಇದೊಂದು ಮರದಲ್ಲಿ ಮಾತ್ರ ಬೇರೆ ರೀತಿಯ ಹುಣಸೆ ಕಾಯಿ ಬಿಡುತ್ತಿದೆ. ರಕ್ತದ ಬಣ್ಣದ ಈ ಹುಣಸೆ ಹಣ್ಣು ತಿಂದರೆ ಸ್ವಲ್ಪ ಸಿಹಿ ಇದೆ, ಹುಳಿ ಕಮ್ಮಿಯಿದೆ ಮತ್ತು ಬಾಯೆಲ್ಲಾ ಕೆಂಪಾಗುತ್ತದೆ. ಆದ್ದರಿಂದ ಈ ಹುಣಸೆ ಹಣ್ಣನ್ನು ಯಾರೂ ತಿನ್ನುವುದಿಲ್ಲ ಹಾಗೂ ಅಡಿಗೆಗೂ ಬಳಸುವುದಿಲ್ಲ ಎನ್ನುತ್ತಾರೆ ರೈತ ತಮ್ಮಯ್ಯ.

ಗ್ರಾಮದ ಮಹಿಳೆ ಜಯಂತಿ ಮಾತನಾಡಿ, "ಪ್ರಾರಂಭದಲ್ಲಿ ನಮಗೂ ಕೆಂಪು ಹುಣಸೆ ಹಣ್ಣು ಕಂಡು ಭಯವಾಗಿತ್ತು, ಇದನ್ನು ಪರೀಕ್ಷಿಸಲೆಂದು ಹುಣಸೆ ಹಣ್ಣು ಬಳಸಿ ಸಾಂಬಾರ ಮಾಡಿ ನೋಡಿದಾಗ ಸಾಂಬಾರ್ ಸಂಪೂರ್ಣ ಕೆಂಪು ಬಣ್ಣದಿಂದ ರಾಚುತ್ತಿತ್ತು ಮತ್ತು ರುಚಿ ಸಿಹಿಯಾಗಿತ್ತು. ಆದರೆ ಇದರಿಂದ ಮಾಡಿದ ಆಹಾರ ತಿಂದ ಯಾರಿಗೂ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಈ ಹುಣಸೆಯ ಬಣ್ಣ ಹೆಚ್ಚಿದ್ದು, ಹುಳಿ ಕಮ್ಮಿ ಇರುವುದರಿಂದ ಇನ್ನು ಯಾರು ಬಳಸುವುದಿಲ್ಲ" ಎನ್ನುತ್ತಾರೆ.
ಇನ್ನು ಇದಕ್ಕೆ ಧಾರ್ಮಿಕ ಕಾರಣ ನೀಡುವ ಅನಿಲ್ ಎಂಬ ಗ್ರಾಮಸ್ಥ, "ಮರವಿರುವ ಸ್ಥಳದಲ್ಲಿ ನಮ್ಮ ಪೂರ್ವಿಕರ ಕಾಲದಲ್ಲಿ ಬೊಮ್ಮನಹಳ್ಳಿ ಎಂಬ ಗ್ರಾಮವಿತ್ತು. ರಕ್ತದ ಬಣ್ಣದ ಹುಣಸೆ ಕಾಯಿ ಬಿಡುತ್ತಿರುವ ಮರದ ಕೆಳಗೆ ಕಂಬದ ಮಾರಮ್ಮನನ್ನು ಪೂಜಿಸುತ್ತಿದ್ದರು. ತಾಯಿಗೆ ಕುರಿ, ಕೋಳಿ ಬಲಿ ನೀಡಿ ಪೂಜಿಸುತ್ತಿದ್ದರು. ಕಾಲಕ್ರಮೇಣ ಬರ ಬಂದು ಗ್ರಾಮವನ್ನು ತೊರೆ ನಮ್ಮ ಪೂರ್ವಿಕರು ಸನಿಹದಲ್ಲೇ ಎನ್.ಆರ್.ಕಾಲೋನಿಯಲ್ಲಿ ನೆಲೆ ನಿಂತರು. ಗ್ರಾಮದಲ್ಲಿ ಕಂಬದ ಮಾರಮ್ಮನ ದೇವಸ್ಥಾನ ಕಟ್ಟಿಸಿ ಪೂಜೆ ಮಾಡುತಿದ್ದಾರೆ. ಕಂಬದ ಮಾರಮ್ಮ ತನ್ನ ಇರುವಿಕೆಯನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಿದಾಳೆ ಎಂದು ನಮ್ಮ ಪೂರ್ವಿಕರು ನಮಗೆ ಹೇಳಿದರು" ಎನ್ನುತ್ತಾರೆ.

ಕಾರಣ ಏನೇ ಇರಲಿ, ಹುಣಸೆ ಹಣ್ಣಿನ ಈ ವಿಚಿತ್ರ ಬಣ್ಣ ಹಾಗೂ ರುಚಿ ಜನರಲ್ಲಿ ಕುತೂಹಲ ಹುಟ್ಟಿಸಿರುವುದಂತೂ ಸತ್ಯ.












Click it and Unblock the Notifications