6 ದೇವಾಲಯ ಕಳವು ಪ್ರಕರಣ ಭೇದಿಸಿದ ರಾಮನಗರ ಪೊಲೀಸರು: 1.85 ಲಕ್ಷ ಮೌಲ್ಯದ ಸ್ವತ್ತು ವಶ
ರಾಮನಗರ, ಸೆಪ್ಟೆಂಬರ್ 16: ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆಯ ದೇವಾಲಯ ಸೇರಿದಂತೆ 6 ದೇವಾಲಯಗಳಲ್ಲಿ ಕಳವು ಮಾಡಿದ್ದ ಮೂರು ಕಳ್ಳರನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ, ಬಂಧಿತರಿಂದ 1,85,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚಕ್ಕರೆಯ ಮಹದೇಶ್ವರಸ್ವಾಮಿ ದೇವಾಲಯ ಕಳ್ಳತನ ನಡೆದ 24 ಗಂಟೆಯಲ್ಲಿ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ವಿವಿಧೆಡೆ ನಡೆದಿದ್ದ ದೇವಾಲಯ ಕಳವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀರಾಮ ದೇವರ ಬೆಟ್ಟದ ಬಳಿಯ ಇರುಳಿಗರ ಕಾಲೋನಿ ವಾಸಿಗಳಾದ ಮರಿಯಪ್ಪ, ಶ್ರೀನಿವಾಸ್, ನಾಗರಾಜ ಎಂಬ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಮಹದೇವ್ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಗ್ರಾಮದ ಹೊರ ಭಾಗದಲ್ಲಿರುವ ದೇವಾಲಯಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದರು. ಕಳೆದ ಕೆಲ ದಿನಗಳ ಅವಧಿಯಲ್ಲಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ, ಅಕ್ಕೂರು ಪೋಲಿಸ್ ಠಾಣೆ ಮತ್ತು ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ಕರೆ, ವಡ್ಡರದೊಡ್ಡಿ ಶ್ರೀ ಮಹದೇಶ್ವರ ದೇವಸ್ಥಾನ, ಪಟ್ಟಣದ ಹೊರವಲಯದ ಮಹದೇಶ್ವರಸ್ವಾಮಿ ದೇವಸ್ಥಾನ, ಎಂ.ಕೆ. ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯ ಚಿಕ್ಕನದೊಡ್ಡಿ ಗ್ರಾಮದ ಸಿದ್ದಪ್ಪಾಜಿ ಮತ್ತು ಆಂಜನೇಯ ದೇವಸ್ಥಾನ, ಬೇವೂರು ತಿಮ್ಮಪ್ಪಬೆಟ್ಟದ ದೇವಸ್ಥಾನಗಳಲ್ಲಿ ಕಳ್ಳರು ಕನ್ನ ಹಾಕಿದ್ದರು.
ಆರೋಪಿಗಳು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ ಎರಡು ಚಿನ್ನದ ತಾಳಿ, ಬಿಳಿ ಹರಳುಗಳಿರುವ ಒಂದು ಚಿನ್ನದ ಮೂಗುತಿ, ಕಂಚಿನ ಶಿವಲಿಂಗ, ಕಂಚಿನ ದೊಡ್ಡ ಗಂಟೆಗಳು, ಕಂಚಿನ ಚಿಕ್ಕ ಗಂಟೆಗಳು, ಕಂಚಿನ ಕೈ ಗಂಟೆಗಳು, ತೂಗು ಕಂಚಿನ ಜೀಪಗಳು, ಕಂಚಿನ ಪಣಿಗೆ, ದೇವರ ಶ್ರೀಶೂಲ, ಓಂ ಮತ್ತು ನಾಗಸೆಡೆ ಸೇರಿದಂತೆ ಸಯಮಾರು 1,85,000 ರೂಪಾಯಿ ಮೌಲ್ಯದ ವಸ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಇನ್ನು ದೇವಾಲಯದ ಹುಂಡಿ ಹಣವನ್ನು ಕಳ್ಳರು ಖರ್ಚು ಮಾಡಿಕೊಂಡಿದ್ದಾರೆ.
Recommended Video
ತ್ವರಿತವಾಗಿ ದೇವಾಲಯದ ಕಳ್ಳರನ್ನು ಹೆಟೆಮುರಿ ಕಟ್ಟಿ ಹಲವು ಪ್ರಕರಣಗಳನ್ನು ಭೇದಿಸಿದ ಸಿಪಿಐ ಟಿ.ಬಿ. ಶಿವಕುಮಾರ್, ಪಿಎಸ್ಐ ಎಚ್.ಎಂ. ಶಿವಕುಮಾರ್ ಸೇರಿದಂತೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅಭಿನಂದಿಸಿದ್ದಾರೆ.