ಸದನದಲ್ಲಿ ಶಾಸಕರು ಬಾಯಿ ಚಪಲಕ್ಕೆ ಮಾತನಾಡಬಾರದು: ಇಕ್ಬಾಲ್ ಹುಸೇನ್ ವಿರುದ್ಧ ಜೆಡಿಎಸ್ ಕಿಡಿ
ರಾಮನಗರ, ಜುಲೈ 21: ಕ್ಷೇತಕ್ಕೆ ಮುಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಂಡಿದನ್ನು ಪ್ರಶ್ನಿಸಲು ಆಗದವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕ ಕಳೆದುಕೊಂಡಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಜೆಡಿಎಸ್ ಮುಖಂಡರು ವ್ಯಂಗ್ಯವಾಡಿದ್ದಾರೆ.
ರಾಮನಗರದ ಜಿಲ್ಲಾ ಜೆಡಿಎಸ್ ಮುಂಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಶಾಸಕ ಇಕ್ಬಾಲ್ ಹುಸೇನ್ ಸದನದಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿದರು.

ಸದನದಲ್ಲಿ ಚರ್ಚೆಯ ವೇಳೆ ಶಾಸಕ ಇಕ್ಬಾಲ್ ಹುಸೇನ್ ಕ್ಷೇತ್ರಕ್ಕೆ ಯಾವ ಅನುದಾನ ಬೇಕು ಎಂದು ಕೇಳದೇ ಹಿಂದಿನ ಶಾಸಕರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಆರೋಪಕ್ಕೆ ಸೀಮಿತರಾಗಿದ್ದಾರೆ. ಸಭಾಧ್ಯಕ್ಷರು ನಿಮ್ಮ ಕ್ಷೇತ್ರಕ್ಕೆ ಎನು ಬೇಕು ಎಂದು ಕೇಳಿದರೂ ತಮಗೆ ಸಿಕ್ಕ ಸಮಯದಲ್ಲಿ ಸರ್ಕಾರದ ಗಮನ ಸೆಳೆದು ಅಭಿವೃದ್ಧಿ ಯೋಜನೆ ಧಕ್ಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದರು.
ಕಳೆದ 20 ವರ್ಷಗಳಲ್ಲಿ ರಾಮನಗರ ಕ್ಷೇತ್ರದ ಅಭಿವೃದ್ಧಿ ಶೂನ್ಯ ಎಂದು ವಿಧಾನಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದು, ಮುಂದಿನ 5 ವರ್ಷಗಳಲ್ಲಿ ನೀವೆಷ್ಟು ಅಭಿವೃದ್ಧಿ ಮಾಡುತ್ತೀರ ಎನ್ನುವುದನ್ನು ಜನ ನೋಡುತ್ತಾರೆ. ಶಾಸಕರು ಬಾಯಿ ಚಪಲಕ್ಕೆ ಮಾತನಾಡುವುದು ಬೇಡ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಮಾಡಿರುವಷ್ಟು ಅಭಿವೃದ್ಧಿಯನ್ನು ಶಾಸಕರು ಮುಂದೆ ಮಾಡಿ ತೋರಿಸಲಿ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಶಾಸಕರಿಗೆ ಸವಾಲು ಹಾಕಿದರು.
ಜಿಲ್ಲೆ ಮಾಡಿದ್ದು, ಕುಡಿಯುವ ನೀರು ತಂದದ್ದು ಜೆಡಿಎಸ್ ಸಾಧನೆ
ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲೆಯನ್ನು ರೂಪಿಸಿದ್ದು ಕುಮಾರಸ್ವಾಮಿ ಅವರೇ, ಜಿಲ್ಲಾಡಳಿತಕ್ಕೆ ಅಗತ್ಯವಾದ ಜಿಲ್ಲಾಧಿಕಾರಿಗಳ ಸಂಕೀರ್ಣ, ಪೊಲೀಸ್ ಭವನ, ಕಂದಾಯ ಭವನ, ಮಿನಿ ವಿಧಾನ ಸೌಧ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜಿಲ್ಲಾ ಮಟ್ಟದ 36 ಇಲಾಖೆಗಳು ಜಿಲ್ಲೆಯಲ್ಲೇ ಕಾರ್ಯಾರಂಭ ಮಾಡಿದರಿಂದ ಸರ್ಕಾರಿ ಕಚೇರಿಗಳ ಕೆಲಸಕ್ಕೆ ಬೆಂಗಳೂರಿಗೆ ಆಲೆಯುವುದು ತಪ್ಪಿ ಜನರಿಗೆ ಅನುಕೂಲವಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಮತ್ತು ಆರೋಗ್ಯ ನಗರದ ಯೋಜನೆ ರೂಪಿಸಿದ್ದಾರೆ. ಆದರೆ ಅವರ ನಂತರ ಬಂದ ಸರ್ಕಾರಗಳು ಆರೋಗ್ಯ ವಿವಿ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ, ಇನ್ನೂ ಹೈಟೆಕ್ ಜಿಲ್ಲಾಸ್ಪತ್ರೆಯನ್ನು ಬಸವನಪುರ ಬಳಿ ಸ್ಥಾಪಿಸಲು ಉದ್ದೇಶಿಸಿದ್ದರು. ಅದನ್ನು ನಗರ ವ್ಯಾಪ್ತಿಯಲ್ಲೇ ನಿರ್ಮಿಸಲು ಎಚ್.ಡಿ.ಕುಮಾರಸ್ವಾಮಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ 450 ಕೋಟಿ ರೂ. ವೆಚ್ಚದ ನೆಟ್ಕಲ್ ಕುಡಿಯುವ ನೀರಿನ ಯೋಜನೆ ರೂಪಿಸಿದ್ದರು. ಈ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಧಿಕಾರದ ಸಮಯದಲ್ಲಿ ತೊರೆಕಾಡನಹಳ್ಳಿಯಿಂದ ರಾಮನಗರಕ್ಕೆ ಕುಡಿಯುವ ನೀರು ತರದೆ ಹೋಗಿದ್ದರೆ ರಾಮನಗರದಲ್ಲಿ ಕುಡಿಯುವ ನೀರಿಗೆ ಬಾರೀ ಸಮಸ್ಯೆ ಆಗುತ್ತಿತ್ತು ಎನ್ನುವುದನ್ನು ಶಾಸಕರು ಮನಗಾಣಬೇಕು ಎಂದು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದರು.
ಅನಿತಾ ಕುಮಾರಸ್ವಾಮಿ ಅವರು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾರೋಹಳ್ಳಿಯನ್ನು ನೂತನ ತಾಲೂಕು ಕೇಂದ್ರ ರಚನೆ ಮಾಡಿಸಲು ಶ್ರಮಿಸಿದ್ದಾರೆ. ಆದರೆ ನಿಮ್ಮದೇ ಸರ್ಕಾರದಲ್ಲಿ ತಾಲೂಕು ಕೇಂದ್ರಕ್ಕೆ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳುವಲ್ಲಿ ನೀವು ವಿಫಲರಾಗಿದ್ದೀರಿ ಎಂದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಜಿಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ನಗರಸಭೆ ಸದಸ್ಯ ಮಂಜುನಾಥ್, ಜೆಡಿಎಸ್ ಮುಖಂಡರಾದ ಸಿ.ಎಸ್.ಜಯಕುಮಾರ್ ಹಾಗೂ ಸುಗ್ಗನಹಳ್ಳಿ ರಾಮಕೃಷ್ಣಯ್ಯ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.












Click it and Unblock the Notifications