ರಾಮನಗರ: ಮಾವಿನ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್
ರಾಮನಗರ, ಮೇ 24: ಮಾವು ಹಣ್ಣುಗಳ ರಾಜ. ಚಿಕ್ಕ ಮಕ್ಕಳಿಂದ ವಯೋವೃದ್ಧರೂ ಕೂಡ ಇಷ್ಟಪಡುವ ಈ ಹಣ್ಣು ತುಂಬಾ ರುಚಿಕರವಾಗಿದ್ದು, ಅನೇಕ ಜೀವಸತ್ವಗಳನ್ನೂ, ರೋಗ ಪ್ರತಿರೋಧಕ ಗುಣಗಳನ್ನೂ ಹೊಂದಿರುವುದು ಈ ಹಣ್ಣಿನ ವೈಶಿಷ್ಟ್ಯವಾಗಿದೆ.
ಗ್ರಾಹಕರಿಗೆ ನೇರವಾಗಿ ರೈತರಿಂದಲೇ ಇಂತಹ ತಾಜಾ ಹಾಗೂ ಸ್ವಾದಿಷ್ಟಭರಿತ ಮಾವಿನ ಹಣ್ಣುಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಇಂದಿನಿಂದ ಜಾನಪದ ಲೋಕದ ಬಳಿ ಮಾವು ಮೇಳ ಆರಂಭಿಸಿದೆ.
ಬೆಂಗಳೂರಿನ ಹಾಪ್ ಕಾಪ್ಸ್ ನಲ್ಲಿ ಮಾವು ಮತ್ತು ಹಲಸು ಮೇಳ
ಮಾವಿನ ಹಣ್ಣುಗಳದ್ದೇ ಕಾರುಬಾರು
ದಲ್ಲಾಳಿಗಳ ಹಾವಳಿ ತಪ್ಪಿಸೋಕೆ ಅಂತಲೇ ಏರ್ಪಡಿಸಿದ್ದ ಈ ಮಾವಿನ ಮೇಳದಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಅಂದಹಾಗೆ ಭಾರತದ ಮಾವು ವಿಶ್ವದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ.
ಭಾರತದಲ್ಲಿ ಸುಮಾರು 4 ಸಾವಿರ ವರ್ಷಗಳಿಂದಲೂ ಮಾವು ಬೆಳೆಯಲಾಗುತ್ತಿದ್ದು, ನೂರೈವತ್ತಕ್ಕೂ ಹೆಚ್ಚು ತಳಿಯ ಹಣ್ಣುಗಳಿಗೆ ತವರೂರಾಗಿದೆ. ಇವುಗಳಲ್ಲಿ 40 ತಳಿಗಳು ಮಾತ್ರ ಆರ್ಥಿಕ ದೃಷ್ಟಿಯಿಂದ ಸಾಗುವಳಿಯಲ್ಲಿವೆ.
30ಕ್ಕೂ ಹೆಚ್ಚು ತಳಿಗಳ ಪ್ರದರ್ಶನ
ಬಾದಾಮಿ, ರಸಪುರಿ, ಸಿಂಧೂರ, ಮಲಗೋವ, ಮಲ್ಲಿಕಾ, ನೀಲಂ, ಬಂಗನಪಲ್ಲಿ, ಬೆನಿಷಾ, ಕೇಸರ್, ಐಶ್ವರ್ಯ, ಸಕ್ಕರ ಬುತ್ತಿ, ಹಾಗೂ ಸಕ್ಕರೆ ಗೂಟ್ಲಾ, ಸೀಬಾ ಸೇರಿದಂತೆ 30ಕ್ಕೂ ಹೆಚ್ಚು ತಳಿಗಳು ಈ ಮಾವು ಮೇಳ ಪ್ರದರ್ಶನದಲ್ಲಿದ್ದವು.
ರಾಮನಗರಕ್ಕೆ ಎರಡನೇ ಸ್ಥಾನ
ಕರ್ನಾಟಕದಲ್ಲಿ ಕೋಲಾರದ ಬಳಿಕ ರಾಮನಗರ ಮಾವು ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಇಲ್ಲಿನ ಬಾದಾಮಿ ಮಾವು ಹೆಸರುವಾಸಿ. ಇಷ್ಟೆಲ್ಲಾ ವೈಶಿಷ್ಟ್ಯತೆಯಿಂದ ಕೂಡಿದ ವಿವಿಧ ತಳಿಯ ಮಾವು ಒಂದೇ ಸೂರಿನಡಿ, ಅದು ನೈಸರ್ಗಿಕ ರೀತಿಯಲ್ಲಿ ಮಾಗಿಸಿದ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿರುವುದರಿಂದ ಪ್ರವಾಸಿಗರು ಕೂಡಾ ಆಕರ್ಷಿತರಾಗ್ತಿದ್ದಾರೆ.
ಆದರೆ ಈ ಬಾರಿ ಚುನಾವಣೆ ಕಾವಿನಿಂದ ತಡವಾಗಿ ಮಾವು ಮೇಳ ಆರಂಭಗೊಂಡಿರುವುದು ಅನಾನುಕೂಲವಾಗಿದೆ ಅಂತಾರೆ ಇಲ್ಲಿನ ರೈತರು.
ನೇರವಾಗಿ ಗ್ರಾಹಕರಿಗೆ ಮಾರಾಟ
ಜಿಲ್ಲಾ ತೋಟಗಾರಿಕಾ ಇಲಾಖೆ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟವಾಗುವಂತೆ ಮಾವಿನ ಮೇಳ ಏರ್ಪಡಿಸಿತ್ತು. ಈ ಮೇಳವನ್ನ ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಉದ್ಘಾಟಿಸಿ ಮೇಳವನ್ನ ವೀಕ್ಷಿಸಿದ್ದಲ್ಲದೇ ಮಾವಿನ ರುಚಿಯನ್ನು ಸವಿದರು.
ಒಟ್ಟಾರೆ ಮಧ್ಯವರ್ತಿಗಳಿಂದ ರೈತರನ್ನು ರಕ್ಷಿಸಿ ಗ್ರಾಹಕರಿಗೆ ತಾಜಾ ಮಾವಿನ ಹಣ್ಣುಗಳನ್ನು ಪೂರೈಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಕರುನಾಡ ಮಾವು ಹೆಸರಿನ ಸ್ವಾದಿಷ್ಟಭರಿತ ಹಣ್ಣಗಳನ್ನು ಈ ಮಾವು ಮೇಳದಲ್ಲಿ ಮಾರಾಟ ಮಾಡುತ್ತಿದೆ.
ಇನ್ನಷ್ಟು ಮೇಳಗಳು ನಡೆಯಲಿ
ಮಾವಿನ ಮೇಳಕ್ಕೆ ಗ್ರಾಹಕರಿಂದಲೂ ಸಹ ಒಳ್ಳೆಯ ರೆಸ್ಪಾನ್ಸ್ ಕಂಡುಬಂದಿದ್ದು, ಇನ್ನಷ್ಟು ಇಂತಹ ಮೇಳಗಳು ನಡೆಸುವುದರ ಜೊತೆಗೆ ರಾಮನಗರದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸುಬೇಕೆನ್ನುವುದು ರೈತಾಪಿ ವರ್ಗದ ಅಶಯವಾಗಿದೆ.