ಚನ್ನಪಟ್ಟಣದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ದೈಹಿಕ ಶಿಕ್ಷಕ ಸಾವು
ರಾಮನಗರ, ಜುಲೈ.24:ಸೂಕ್ತ ಚಿಕಿತ್ಸೆ ಸಿಗದೇ ರೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ರೋಗಿಯ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ಪೀಠೋಪಕರಣಗಳ ಧ್ವಂಸ ಮಾಡಿರುವ ಘಟನೆ ಚನ್ನಪಟ್ಟಣದ ರಮೇಶ್ ಆಸ್ಪತ್ರೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ತಾಲೂಕಿನ ಅಬ್ಬೂರು ಗ್ರಾಮದ ನಿವಾಸಿ ಸ್ವಾಮಿ(35). ಸ್ವಾಮಿ ಬೆಂಗಳೂರಿನ ದೀಪಾಂಜಲಿ ನಗರದ ನರೇಂದ್ರ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಎರಡು ಚಿಕ್ಕ ಮಕ್ಕಳಿವೆ.
ತಂದೆಯನ್ನು ಕಳೆದುಕೊಂಡ ಮಕ್ಕಳು ಈಗ ಅನಾಥವಾಗಿವೆ. ಪಟ್ಟಣದ ಕೋರ್ಟ್ ರಸ್ತೆಯಲ್ಲಿರುವ ರಮೇಶ್ ಆಸ್ಪತ್ರೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಮೃತ ಸ್ವಾಮಿಗೆ ಅಪೆಂಡಿಕ್ಸ್ ಅಗಿದ್ದ ಹಿನ್ನೆಲೆಯಲ್ಲಿ ರಮೇಶ್ ಬಾಬು ಎಂಬ ವೈದ್ಯರಿಂದ ಅಪರೇಷನ್ ಮಾಡಿಸಿಕೊಂಡು ಕೆಲ ದಿನ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು.

ಆದರೆ ಕಳೆದ ರಾತ್ರಿ ಸ್ವಾಮಿ ದೇಹದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ರಮೇಶ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ಬಂದ ಸ್ವಾಮಿಗೆ ವೈದ್ಯ ರಮೇಶ್ ಚಿಕಿತ್ಸೆ ನೀಡಲಿಲ್ಲ. ಆಗ ಕೆಲ ಸಮಯದಲ್ಲೇ ಆಸ್ಪತ್ರೆಯಲ್ಲೇ ಸ್ವಾಮಿ ಅಸುನೀಗಿದ್ದಾರೆ.
ಇದರಿಂದ ಕುಪಿತಗೊಂಡ ಮೃತನ ಸಂಬಂಧಿಕರು ರೋಗಿ ಸ್ವಾಮಿ ಸಾವಿಗೆ ವೈದ್ಯ ರಮೇಶ್ ಬಾಬು ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಆಸ್ಪತ್ರೆಯ ಕಿಟಕಿ , ಬಾಗಿಲು, ಹೂಕುಂಡ ಮತ್ತು ಪೀಠೋಪಕರಣಗಳನ್ನು ದ್ವಂಸಮಾಡಿ ತಮ್ಮ ಸಿಟ್ಟು ಹೊರಹಾಕಿದರು.

ಸ್ಥಳಕ್ಕೆ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಉದ್ರಿಕ್ತರನ್ನು ಸಮಧಾನಪಡಿಸಿ ವೈದ್ಯ ರಮೇಶ್ ಬಾಬು ಅವರನ್ನು ಸ್ಥಳಕ್ಕೆ ಕರೆಸುವ ಪ್ರಯತ್ನ ನಡೆಸಿದರು. ಆದರೆ ವೈದ್ಯ ಮಾತ್ರ "ಸಾವಿಗೆ ನಾನು ಕಾರಣನಲ್ಲ" ಎಂದು ಫೋನ್ ಸ್ವಿಚ್ ಆಫ್ ಮಾಡಿ ಸ್ಥಳಕ್ಕೆ ಬರಲಿಲ್ಲ.
ಚನ್ನಪಟ್ಟಣ ಪುರ ಠಾಣೆ ಪೊಲೀಸರು ಪ್ರಕರಣದ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications