ಕಣ್ವ ಜಲಾಶಯಕ್ಕೆ 76ನೇ ವಸಂತ: ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯ
ಚನ್ನಪಟ್ಟಣ, ಸೆಪ್ಟೆಂಬರ್ 22: ದಟ್ಟ ಹಸುರಿನಿಂದ ಕಂಗೊಳಿಸುತ್ತಾ ನಿಸರ್ಗದ ಸೆರಗಿನಲ್ಲಿರುವ ಪ್ರಸಿದ್ದ ಕಣ್ವ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮ ಉತ್ತೇಜನ ನೀಡುವಂತೆ ಆಗ್ರಹಿಸಿ ಪ್ರಗತಿಪರರು ಹಾಗೂ ಹೋರಾಟಗಾರರು ಸಹಿ ಸಂಗ್ರಹ ಮಾಡುವ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಹೊರ ವಲಯದಲ್ಲಿ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಮುಕ್ತವಾದ ನಂತರ ಪಟ್ಟಣದಲ್ಲಿ ವಾಹನಗಳ ಸಂಚಾರ ವಿರಳವಾಗಿ ಸಣ್ಣ ಸಣ್ಣ ಉದ್ಯಮಗಳು, ವಿಶ್ವ ವಿಖ್ಯಾತ ಬೊಂಬೆ ಉದ್ಯಮಗಳು ಸೇರಿದಂತೆ ಹತ್ತಾರು ಉದ್ಯಮಗಳು ವ್ಯಾಪಾರವಿಲ್ಲದೇ ತತ್ತರಿಸಿವೆ.
ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಇಲ್ಲದೇ ತತ್ತರಿಸಿರು ಜನರ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ ತಾಲ್ಲೂಕಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಜೀವನಾಡಿ ಕಣ್ವ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿಸಿ ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಸಹಿ ಸಂಗ್ರಹಣಾ ಅಭಿಯಾನ ನಡೆಸಿದ್ದಾರೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡರ ನೇತೃತ್ವದಲ್ಲಿ ಹಲವಹ ಪ್ರಗತಿಪರ ಹೋರಾಟಗಾರರು ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಂಗಲ್ ನಿಂದ - ಕಣ್ವ ಜಲಾಶಯದ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಸಹಿ ಸಂಗ್ರಹಿಸಿ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಬೋಟಿಂಗ್ ವ್ಯವಸ್ಥೆಗೆ ಬೇಡಿಕೆ
ಕಣ್ವ ಜಲಾಶಯದ ಬಳಿ ಪೊಲೀಸ್ ಭದ್ರತೆ, ಜಲಾಶಯದ ಏರಿಯುದ್ದಕ್ಕೂ ವಿದ್ಯುತ್ ದೀಪಲಂಕಾರ, ಜಲಾಶಯದಲ್ಲಿ ಪ್ರವಾಸಿಗರು ವಿಹರಿಸಲು ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸೋದ್ಯವನ್ನು ಕೇಂದ್ರವನ್ನಾಗಿ ಅಭಿವೃದ್ಧಿ ಮಾಡಬೇಕು ಹಾಗೂ ಜಲಾಶಯದ ಆವರಣದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಜಲಾಶಯ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು, ಡ್ಯಾಂ ಆಸು-ಪಾಸು ಅಟಿಕೆ ಅಂಗಡಿಗಳು ಎಳನೀರು ಮಾರಾಟ ಕೇಂದ್ರ, ನೀರಾ ಮಾರಾಟ ಕೇಂದ್ರ, ಕಬ್ಬಿನ ಹಾಲಿನ ಮಾರಾಟ ಕೇಂದ್ರ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡುವಂತೆ ಸರ್ಕಾರವನ್ನು ಸಹಿ ಸಂಗ್ರಹಣೆ ಮೂಲಕ ಒತ್ತಾಯಿಸಿದರು.

5 ಸಾವಿರ ಎಕರೆಗೂ ಹೆಚ್ಚು ನೀರು
ಏಷ್ಯಾದಲ್ಲೇ ಸ್ವಯಂ ಚಾಲಿತ ಬಾಗಿಲು ಹೊಂದಿರುವ ಹೆಗ್ಗಳಿಕೆ ಪಡೆದಿರುವ ಕಣ್ವ ಜಲಾಶಯವನ್ನು 1946 ರಲ್ಲಿ ಮೈಸೂರಿನ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಕಟ್ಟಿಸಿದ್ದು, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ತಾಂತ್ರಿಕ ನೈಪುಣ್ಯತೆಯಲ್ಲಿ ನಿರ್ಮಾಣಗೊಂಡಿದೆ. ರಾಮನಗರ ಜಿಲ್ಲೆಯ ಜೀವನದಿ ಕಣ್ವ ಸುಮಾರು 1190 ಎಕರೆ ವಿಶಾಲವಾದ ಪ್ರದೇಶದಲ್ಲಿದ್ದು, ಸಮುದ್ರ ಮಟ್ಟದಿಂದ 740 ಮೀಟರ್ ಎತ್ತರವಿದ್ದು 809 ಎಂಸಿಎಫ್ಟಿ ನೀರು ಶೇಖರಣಾ ಸಾಮರ್ಥ್ಯ ಹೊಂದಿರುವ ಜಲಾಶಯ
ಸಾಮರ್ಥ್ಯ ಹೊಂದಿದೆ. 5 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ.

ಅನೈತಿಕ ಚಟುವಟಿಕೆಯ ತಾಣ
ಕಣ್ವ ನಿರ್ಮಾಣವಾಗಿ 75 ವರ್ಷ ತುಂಬಿ 76ನೇ ವಸಂತಕ್ಕೆ ಕಾಲಿಟ್ಟಿದೆ. ತಾಲ್ಲೂಕು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರಿಗೆ ಜಲಾಶಯದ ಬಳಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದಿರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಪ್ರಾವಾಸಿಗರ ನೆಚ್ಚಿನ ತಾಣವಾಗಿದ್ದ ಕಣ್ವ ಜಲಾಶಯ ಕುಡುಕರ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಪ್ರವಾಸೋದ್ಯಮದ ಉತ್ತೇಜನ ಅಗತ್ಯ
ಕಣ್ವ ಮಹರ್ಷಿಯ ತಪೋಭೂಮಿಯ ಕಣ್ವ ಜಲಾಶಯ ನಿರ್ಮಾಣವಾಗಿ 75 ವರ್ಷಗಳು ಪೂರೈಸಿದ್ದರೂ ಜಲಾಶಯದ ಬಳಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಣ್ವ ಜಲಾಶಯದ ಬಳಿ ಚಿಲ್ಡ್ರನ್ ಪಾರ್ಕ್ ಸೇರಿದಂತೆ ಎಲ್ಲಾ ಸೌಲಭ್ಯ ಒದುಗಿಸುವುದಾಗಿ ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಹೇಳಿಕೆ ನೀಡಿದ್ದರು. ಅದು ಕಾರ್ಯಗತವಾಗಿಲ್ಲ ಎಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಅಸಮಧಾನ ವ್ಯಕ್ತಪಡಿಸಿದರು.
ಕಣ್ವ ಜಲಾಶಯದ ಬಳಿ ಮೂಲಭೂತ ಸೌಕರ್ಯ ಕಲ್ಪಿಸದ ಜಿಲ್ಲಾಡಳಿತ ಜಲಾಶಯದಲ್ಲಿ ಮೀನು ಸಾಕಾಣಿಕೆ ಟೆಂಡರ್ ಮೂಲಕ ಮೀನುಗಾರಿಕೆಯಲಿ ಲಕ್ಷಾಂತರ ರೂಪಾಯಿ ಹಣವನ್ನು ಖಜಾನೆಗೆ ಸೇರಿಸಿಕೊಳ್ಳುತ್ತಿರುವ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಕಣ್ವ ಜಲಾಶಯವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ನೂರಾರು ಕುಟುಂಬಗಳಿಗೆ ಉದ್ಯೋಗ ಸೃಷ್ಟಿಸಬೇಕು ಎಂದು ರಮೇಶ್ ಗೌಡ ಒತ್ತಾಯಿಸಿದ್ದಾರೆ.












Click it and Unblock the Notifications