ಒಂದು ಅನಾಮಧೇಯ ಕಾಲ್, ಮದುವೆ ಕ್ಯಾನ್ಸಲ್
ರಾಮನಗರ, ನವೆಂಬರ್ 22: ಒಂದು ಅನಾಮಧೇಯ ಫೋನ್ ಕರೆಯಿಂದಾಗಿ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ. ಅರತಕ್ಷತೆಗೂ ಮುನ್ನ ಹೆಣ್ಣಿನ ಮನೆಯವ್ರಿಗೆ ಕಾಲ್ ಮಾಡಿದಾತ ಹೇಳಿದ್ದಾದ್ರೂ ಏನ್ ಗೊತ್ತಾ..? ಆ ಒಂದು ಕರೆಯಿಂದಾಗಿ ಮದುವೆ ಮುರಿದು ಬೀಳಲು ಕಾರಣವೇನು..? ನೋಡಿ ಒಂದು ಫೋನ್ ಕಾಲ್ ನಿಂದ ಮದುವೆನೇ ಮುರಿದು ಬಿದ್ದರೂ ಅದೇ ಮುಹೂರ್ತದಲ್ಲಿ ಬೇರೆ ಹುಡುಗನ ಜೊತೆ ವಿವಾಹವಾಗಿದೆ.
ಚೇತನ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಮದುವೆಯ ಹಿಂದಿನ ರಾತ್ರಿ ಬಂದ ಆ ಕರೆ "ಹುಡುಗನಿಗೆ ಮದುವೆಯಾಗಿದೆ, ಮಕ್ಕಳು ಇದ್ದಾರೆ" ಎಂಬ ಮಾತಿನಿಂದ ವಧುವಿನ ಕಡೆಯವ್ರು ಶಾಕ್ ಆಗಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾರೆ. ಬಸವರಾಜು ಮತ್ತು ಭಾಗ್ಯಶ್ರೀ ನಡುವೆ ಮದುವೆ ನಡೆಯಬೇಕಿತ್ತು. ಇದರಿಂದ ವರ ಬಸವರಾಜ್ ಕುಟುಂಬ ಕಂಗಾಲಾಗಿದೆ.
ನನಗೆ ಮದುವೆಯಾಗಿದೆ ಎಂಬುದನ್ನು ಸಾಬೀತುಪಡಿಸಿ ಎಂದು ವರ ಬಸವರಾಜ್ ಪಟ್ಟು ಹಿಡಿದಿದ್ದಾರೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯರಾತ್ರಿವರೆಗೂ ಠಾಣೆಯಲ್ಲಿ ಹೈಡ್ರಾಮಾ ನಡೆದಿದೆ. ಆರು ತಿಂಗಳ ಹಿಂದೆಯೇ ಬಸವರಾಜು-ಭಾಗ್ಯಶ್ರೀ ನಿಶ್ಚಿತಾರ್ಥ ನಡೆದಿತ್ತು. ಶುಕ್ರವಾರ ಮದುವೆ ನಡೆಯಬೇಕಿತ್ತು. ಹಿಂದಿನ ರಾತ್ರಿ ಅನಾಮಧೇಯ ಕಾಲ್ ನಿಂದ ಬಂದ ಆ ಸುದ್ಧಿ ಕೇಳಿ ವಧುವಿನ ಕಡೆಯವರು ಅಂತಿಮವಾಗಿ ನಮಗೆ ಈ ಮದುವೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇಂದು ನಡೆಯಬೇಕಿದ್ದ ಅದೇ ಮುಹೂರ್ತದಲ್ಲಿಯೇ ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಲು ವಧುವಿನ ಕಡೆಯವರು ಮುಂದಾಗಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಎಲೆಕೇರಿ ಗ್ರಾಮದ ಆನಂದ್ ಎಂಬಾತನೊಂದಿಗೆ ವಿವಾಹ ಮಾಡಲು ನಿಶ್ಚಯಿಸಿದ್ದಾರೆ.












Click it and Unblock the Notifications