ಚಿಲೂರು ಗ್ರಾಮದಲ್ಲಿ ನಡೆದ ಘಟನೆ ನೋವು ತಂದಿದೆ; ನಿಖಿಲ್
ರಾಮನಗರ, ಮಾರ್ಚ್ 28: "ಮೊನ್ನೆ ನಡೆದ ವಿಚಾರವನ್ನು ಮುಂದುವರೆಸೋದು ಬೇಡ. ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ. ಒಟ್ಟಾರೆಯಾಗಿ ಇಡೀ ಗ್ರಾಮಕ್ಕೆ ಒಳ್ಳೇಯದು ಆಗಬೇಕು" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಭಾನುವಾರ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಚೀಲೂರು ಗ್ರಾಮಕ್ಕೆ ಭೇಟಿ ನೀಡಿದರು. "ನಾನು ಇಂದು ಮತ್ತೆ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಮೊನ್ನೆ ವೇದಿಕೆ ಮೇಲೆ ನಡೆದ ಘಟನೆಯಿಂದ ನನಗೆ ತುಂಬಾ ನೋವಾಯಿತು" ಎಂದರು.
"ಅತ್ಯಂತ ಪ್ರೀತಿಯಿಂದ ನೀವು ನನ್ನನ್ನು ನಾಟಕಕ್ಕೆ ಬರ ಮಾಡಿಕೊಂಡಿರಿ. ಎಲ್ಲೋ ಒಂದು ಕಡೆ ನನ್ನಿಂದ ಗೊಂದಲ ಸೃಷ್ಟಿ ಆಯ್ತಾ? ಅನ್ನೋದು ನನ್ನ ಮನಸ್ಸಲ್ಲಿ ಕಾಡುತ್ತಿತ್ತು. ಊರಿನ ಹಲವಾರು ಮುಖಂಡರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದೆ" ಎಂದು ಹೇಳಿದರು.

"ಮತ್ತೆ ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ನಿರ್ಧಾರ ಮಾಡಿದೆ. ನೀವು ನಮ್ಮ ಕುಟುಂಬದ ಸದಸ್ಯರಿದ್ದಂತೆ, ನಾವು ಕೆಲವೊಂದು ವಿಚಾರಗಳನ್ನು ಮನಸ್ಸು ಬಿಚ್ಚಿ ಪ್ರಸ್ತಾಪ ಮಾಡುತ್ತಿದ್ದೆವು. ಆಗ ಕೆಲವೊಂದು ಧ್ವನಿಗಳು ಹಿಂದಿನಿಂದ ಅದಕ್ಕೆ ಅಡ್ಡಿ ಪಡಿಸಿದವು. ನಿಮಗೂ ಅವಕಾಶ ಇದೆ, ವೇದಿಕೆ ನಿಮ್ಮದೇ" ಎಂದು ತಿಳಿಸಿದರು.
"ನೀವು ಒಳ್ಳೆದನ್ನು ಮಾಡಿದರೆ ಬಂದು ಹೇಳಿ ಅಂತಾ ಹೇಳಿದೆ, ಅದನ್ನೇ ಗೊಂದಲ ಮಾಡಿದರು. ಅದು ಈಗ ಮುಗಿದಿರೋ ವಿಚಾರ. ಇದನ್ನು ಮುಂದುವರೆಸೋದು ಬೇಡ. ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ" ಎಂದು ಹೇಳಿದರು.
"ಒಬ್ಬ ಯುವಕನಾಗಿ ತಮ್ಮ ಪರವಾಗಿ ಸದಾ ನಿಲ್ಲುತ್ತೇನೆ. ಯಾವುದೇ ದುರುದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ. ದೇವೇಗೌಡರ ಕಾಲದಿಂದ ನೀವು ನಮ್ಮ ಪರವಾಗಿ ನಿಂತಿದ್ದೀರಿ. ಕುಮಾರಣ್ಣ ಮೂಲತಃ ಹಾಸನದವರಾದರೂ ರಾಜಕೀಯವಾಗಿ ರಾಮನಗರದಲ್ಲಿ ನೆಲೆ ಕಂಡುಕೊಂಡಿದ್ದಾರೆ, ಅದಕ್ಕೆಲ್ಲಾ ಕಾರಣಕರ್ತರು ನೀವು" ಎಂದರು.
"ಈಗ ಬೇಸಿಗೆ ಕಾಲ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದೇವೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಏನು ಸಮಸ್ಯೆ ಇದೆ ಅಂತಾ ಪಟ್ಟಿ ಮಾಡಿ ಕೊಡಲು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ನಿಮ್ಮ ಮನೆ ಮಗನ ಹಾಗೆ ನಿಮ್ಮ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.











Click it and Unblock the Notifications