ರಾಮನಗರದ ಋಣ ನನ್ನ ಮೇಲಿದೆ, ಇಲ್ಲೇ ಮದುವೆ ಮಾಡ್ತೀನಿ ಎಂದ ಎಚ್ ಡಿಕೆ
ಚನ್ನಪಟ್ಟಣ, ಫೆಬ್ರವರಿ 03: "ರಾಜ್ಯವನ್ನು ದೇವರೇ ಕಾಪಾಡಬೇಕು. ಈ ಬಾರಿ ರಾಜ್ಯಕ್ಕೆ 9 ರಿಂದ 11 ಸಾವಿರ ಕೋಟಿ ಖೋತಾ ಮಾಡಿದ್ದಾರೆ. 30 ಸಾವಿರ ಕೋಟಿ ಯೋಜನೆಗಳ ಅನುದಾನವನ್ನು ಕಡಿತ ಮಾಡಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈತರಿಗೆ, ಯುವಕರಿಗೆ ಯಾವ ನಿರೀಕ್ಷೆಯೂ ಇಲ್ಲ" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.
ಚನ್ನಪಟ್ಟಣಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭ ಅವರು ಸಚಿವ ಸಂಪುಟ ವಿಸ್ತರಣೆ ಕುರಿತೂ ಮಾತನಾಡಿದರು. "ಈ ಸರ್ಕಾರದಲ್ಲಿ ಮಂತ್ರಿ ಮಂಡಲ ರಚನೆ ಮಾಡುವುದೇ ದುಸ್ಸಾಹಸವಾಗಿದೆ. ಈ ಪುಣ್ಯಾತ್ಮರು ಅದನ್ನೇ ನೋಡ್ತಾರೋ, ರಾಜ್ಯದ ಅಭಿವೃದ್ಧಿ ಬಗ್ಗೆ ನೋಡ್ತಾರೋ ಆ ದೇವರೇ ಕಾಪಾಡಬೇಕು" ಎಂದರು.

ಪುಟ್ಟಣ್ಣ ವಿರುದ್ಧ ಮಾಜಿ ಸಿಎಂ ಎಚ್ ಡಿಕೆ ಕಿಡಿ
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಲು ಬಂದಿದ್ದ ಸಂದರ್ಭ "ಜೆಡಿಎಸ್ ಪಕ್ಷ ಕುಸಿಯುತ್ತಿರುವ ಗುಡ್ಡ" ಎಂದಿದ್ದ ಪುಟ್ಟಣ್ಣ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, "ಅವು ಎಲ್ಲಿಂದ ಬಂದಿದ್ದವು ಹೊಟ್ಟೆಪಾಡಿಗೆ, ಯಾರಿಂದ ಬೆಳೆದವು, ಇವುಗಳ ಮಾತಿಗೆ ನಾನು ಉತ್ತರ ಕೊಡ್ಲಾ? ಎಲ್ಲೋ ಪಾಪ ಹೊಟ್ಟೆಪಾಡು ಮಾಡ್ಕೋಳಕೆ ಹೋಗವೆ. ನಾನ್ ಯಾಕೆ ತಲೆಕೆಡಿಸಿಕೊಳ್ಳಲಿ" ಎಂದು ವ್ಯಂಗ್ಯವಾಡಿದರು.

ವಲಸಿಗ ಶಾಸಕರಿಗೆ ಟಾಂಗ್
ಇದೇ ಸಂದರ್ಭ ಬಿಜೆಪಿಯ ವಲಸಿಗ ಶಾಸಕರಿಗೆ ಟಾಂಗ್ ನೀಡಿದ ಅವರು, "ಅವರು ಮಂತ್ರಿಗಳಾಗೋದು, ಬಿಡೋದು ನನಗೆ ಸಂಬಂಧವಿಲ್ಲ. ಪಾಪ ಬಿಜೆಪಿ ಸರ್ಕಾರ ತರೋದಕ್ಕೆ ಕಷ್ಟಪಟ್ಟರು. ಅದು ಅವರ ಹಣೆಬರಹ" ಎನ್ನುತ್ತಲೇ, ಮಂತ್ರಿ ಸ್ಥಾನಕ್ಕೆ ಜಿದ್ದಿಗೆ ಬಿದ್ದಿರುವ ವಿಚಾರಕ್ಕೆ ಟಾಂಗ್ ನೀಡಿದರು.

"ಬೆಂಗಳೂರಿನಲ್ಲಿ ಮದುವೆ ಮಾಡಲ್ಲ"
"ಫೆಬ್ರವರಿ 10ಕ್ಕೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಆದರೆ ಮದುವೆ ರಾಮನಗರ - ಚನ್ನಪಟ್ಟಣ ಮಧ್ಯದಲ್ಲಿ ನಡೆಯಲಿದೆ. ನಾನು ಬೆಂಗಳೂರಿನಲ್ಲಿ ಮದುವೆ ಮಾಡಲ್ಲ. ಎಲ್ಲಾ ನಾಯಕರು ಬೆಂಗಳೂರಿನಲ್ಲಿ ಮಾಡ್ತಾರೆ. ಆದರೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ರಾಮನಗರ - ಚನ್ನಪಟ್ಟಣ ಮಧ್ಯೆ ಮಾಡ್ತೀನಿ. ರಾಜಕೀಯ ನನಗೆ ಜನ ಆರ್ಶೀವಾದ ಮಾಡಿದ್ದು. ಅವರ ಋಣವಿದೆ. ನನ್ನ ಮನೆಯಲ್ಲಿ ಸಮಾರಂಭ ಮಾಡಲು ಇದೊಂದೆ ಅವಕಾಶವಿರೋದು. ಹಾಗಾಗಿ ನನ್ನ ಜನರಿಗೆ ಮದುವೆ ಊಟ ಹಾಕಬೇಕಿದೆ" ಎಂದರು. "ಪ್ರತಿ ಮನೆಗೂ ಮದುವೆ ಆಹ್ವಾನ ಪತ್ರಿಕೆ ಕೊಡುವ ವ್ಯವಸ್ಥೆ ಮಾಡಿದ್ದೇನೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆ, ಆದರೆ ಬೆಳೆಸಿದ್ದು ರಾಮನಗರ ಜಿಲ್ಲೆಯವರು. ಹಾಗಾಗಿ ಈ ಜನರಿಗೆ ಊಟ ಹಾಕಿ ಋಣ ತೀರಿಸುವ ಅವಕಾಶ ಸಿಕ್ಕಿದೆ" ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಬೆಂಬಲಕ್ಕೆ ಎಚ್ ಡಿಕೆ
ಇಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪೊಲೀಸ್ ಕಮೀಷನರ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ ಅವರು, "ಪ್ರತಿಭಟನೆ ಮಾಡ್ಬೇಡಿ ಅಂದ್ರೆ ಭೂಮಿ ಇವರಪ್ಪನ ಮನೆ ಆಸ್ತಿನಾ? ಹೊಸದಾಗಿ ವ್ಯವಸ್ಥೆ ತರಲು ಇವರಿಗೆ ಅವಕಾಶ ಕೊಟ್ಟಿದ್ದು ಯಾರು?
ಅಧಿಕಾರಿಗಳು ಉದ್ಧಟತನವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಧೂಳಿಪಟ ಆಗುತ್ತೀರಿ" ಎಂದರು. ಬಿಸಿಯೂಟದ ಯೋಜನೆ ಖಾಸಗಿಕರಣ ಮಾಡುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, "ಇದು ಯಾರೋ ನಾಲ್ಕು ಜನ ದುಡ್ಡು ತಿನ್ನೋಕೆ ಅಷ್ಟೇ. ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು, ಯಾರೋ ಮಧ್ಯವರ್ತಿ ದುಡ್ಡು ತಿನ್ನೋಕೆ ಅವಕಾಶ ಮಾಡಿಕೊಡಬಾರದು. ಈ ಐಡಿಯೂ ಕೊಟ್ಟೋರು ಯಾರು ಇವರಿಗೆ" ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications