ಕುಮಾರಸ್ವಾಮಿ ಬಗ್ಗೆ ನಂಜಾವಧೂತ ಶ್ರೀಗಳು ನುಡಿದರು ಈ ಭವಿಷ್ಯ
ಚನ್ನಪಟ್ಟಣ, ಮಾರ್ಚ್ 6: "ಇನ್ನೊಂದು ಬಾರಿ ಮುಖ್ಯಮಂತ್ರಿ ಆಗುವ ಯೋಗ ಕುಮಾರಸ್ವಾಮಿ ಅವರಿಗೆ ಬಂದೇ ಬರುತ್ತದೆ. ಅವರು ಮತ್ತೊಮ್ಮೆ ಸಿಎಂ ಆಗುತ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ ತುಮಕೂರಿನ ಶಿರಾ ಪಟ್ಟನಾಯಕನಹಳ್ಳಿಯ ಸ್ಫಟಿಕ ಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ.
ನಿನ್ನೆ ನಗರದ ದೊಡ್ಡಮಳೂರಿನಲ್ಲಿ ಬಮೂಲ್ ವತಿಯಿಂದ ಆಯೋಜಿಸಿದ್ದ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಅವರು, "ಮಾಜಿ ಸಿಎಂ ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಅವರು ಮಾಡಿದ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರವಾಗಲಿಲ್ಲ, ಮಾಧ್ಯಮದವರು ಸರಿಯಾದ ರೀತಿ ಅಭಿವೃದ್ಧಿಗೆ ಮನ್ನಣೆ ನೀಡಲಿಲ್ಲ" ಎಂದು ಆರೋಪಿಸಿದರು.
ಮತ್ತೊಮ್ಮೆ ಮುಖ್ಯಮಂತ್ರಿ ಆಗೋ 'ಯೋಗ' ನನಗಿದೆ ಎಂದು ಹೇಳಿದ್ದಾರೆ: ಎಚ್ಡಿಕೆ
"ಮತ್ತೊಮ್ಮೆ ಕುಮಾರಸ್ವಾಮಿಯವರು ಸಿಎಂ ಆಗೋ ದಿನ ಬರುತ್ತದೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿಯವರು ಮಾತ್ರ. ಮುಂದಿನ ದಿನಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ಕಾಲ ಬರುತ್ತದೆ" ಎಂದು ವೇದಿಕೆಯಲ್ಲೇ ಭವಿಷ್ಯದ ಮಾತುಗಳನ್ನು ಆಡಿದರು. ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೀಳಿಸಿ ವಾಮ ಮಾರ್ಗದಲ್ಲಿ ಕುಮಾರಸ್ವಾಮಿ ಅಧಿಕಾರ ಹಿಡಿಯುವುದಿಲ್ಲ. ಜನರ ಸಂಪೂರ್ಣ ಆಶೀರ್ವಾದ ಪಡೆದೇ ರಾಜ್ಯದ ಗದ್ದುಗೆ ಏರುತ್ತಾರೆ" ಎಂದರು ನಂಜಾವಧೂತ ಶ್ರೀಗಳು.