ಶಾಸಕ ಗಣೇಶ್ಗೆ ಜಾಮೀನು ಡೌಟ್, ಕೋರ್ಟ್ಗೆ ಹಾಜರು ಪಡಿಸಿದ್ಮೇಲೆ ಏನಾಗಬಹುದು?
ಬೆಂಗಳೂರು, ಫೆಬ್ರವರಿ 21: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದು ಇವತ್ತು ಕೋರ್ಟ್ಮುಂದೆ ಹಾಜರು ಪಡಿಸಲಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸ್ ತಂಡ ಬಂಧಿಸಿರುವ ಶಾಸಕ ಗಣೇಶ್ ಗೆ ಸದ್ಯಕ್ಕೆ ಜಾಮೀನು ಸಿಗುವುದೇ ಎಂಬ ಪ್ರಶ್ನೆ ಎದ್ದಿದೆ. ಕೊಲೆಯತ್ನ ಗಂಭೀರ ಸ್ವರೂಪದ ಪ್ರಕರಣ ಆಗಿರುವುದರಿಂದ ಸಹಜವಾಗಿಯೇ ಈ ಪ್ರಶ್ನೆ ಎದ್ದಿದೆ.
ನ್ಯಾಯಾಲಯ ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿಯೇ ಪರಿಗಣಿಸುತ್ತದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು. ಕೊಲೆ ಯತ್ನ ಪ್ರಕರಣದ ತನಿಖೆ ಮತ್ತು ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗಣೇಶ್ ಮೂರು ದಿನಗಳ ಹಿಂದಷ್ಟೇ ಹಿಂಪಡೆದಿದ್ದರು. ಹೀಗಾಗಿ ಜಾಮೀನು ದೊರೆಯುವ ನಿರೀಕ್ಷೆಗಳು ದೂರವಾಗಿವೆ.
ಕೋರ್ಟ್ಗೆ ಹಾಜರುಪಡಿಸಿದ ಮೇಲೆ ಏನೇನಾಗಬಹುದು? ಪೊಲೀಸರ ಮನವಿಯಂತೆ 14 ದಿನವೂ ಪೊಲೀಸ್ ಕಸ್ಟಡಿಗೆ ಕೊಡಬಹುದು ಅಥವಾ 7 ದಿನಕ್ಕಾದರೂ ಒಪ್ಪಿಸಬಹುದು. ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೇ ಹಾಜರುಪಡಿಸುವುದರಿಂದ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನು ನೀಡುವ ಅಧಿಕಾರ ವ್ಯಾಪ್ತಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಇರುವುದಿಲ್ಲ.
ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅರ್ಜಿ ಸಲ್ಲಿಸಿದ ದಿನವೇ ಕೈಗೆತ್ತಿಕೊಳ್ಳುತ್ತದೆ ಎನ್ನಲಾಗುತ್ತದೆ. ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿ ಎರಡೂ ಕಡೆಯವರಿಗೂ ವಾದ ಮಂಡಿಸಲು ಕೋರ್ಟ್ ಅವಕಾಶ ನೀಡುತ್ತದೆ.
ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ತೀರ್ಪು ಹೊರ ಬೀಳುವ ಹೊತ್ತಿಗೆ ಕನಿಷ್ಠ 20 ದಿನಗಳಾದರೂ ಆಗಬಹುದು.ಅಲ್ಲಿಯವರೆಗೂ ವ್ಯಕ್ತಿಗೆ ಜೈಲು ಅನಿವಾರ್ಯವಾಗಿರುತ್ತದೆ.
ತನಿಖಾಧಿಕಾರಿಗಳು ದೋಷಾರೋಪಣೆ ಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಕಾಶ ಇರುತ್ತದೆ. ಪಟ್ಟಿ ಸಲ್ಲಿಕೆ ಆಗುವವರೆಗೂ ಜಾಮೀನು ಸಿಗದೇ ಇರುವ ಸಾಧ್ಯತೆಗಳೂ ಇವೆ.

ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುವ ಸಾಧ್ಯತೆ
ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷವು ಗಣೇಶ್ನನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಈಗ ಪೊಲೀಸರು ಬಂಧಿಸಿರುವುದರಿಂದ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿಯವರನ್ನು ಸದಾ ಜೈಲಿಗೆ ಹೋಗಿಬಂದವರು,ಬೇಲ್ ಮೇಲೆ ಇರುವವರು ಎಂದು ನಿಂದಿಸುತ್ತಿದ್ದ ಕಾಂಗ್ರೆಸ್ಗೆ ಇದೀಗ ಮುಖಭಂಗವಾದಂತಾಗಿದೆ.

ತಮ್ಮದೇ ಸರ್ಕಾರವಿದ್ದಾಗ ಆಗಿರುವ ಘಟನೆ
ವಿಶೇಷವಾಗಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ಗೆ ತನ್ನದೇ ಸರ್ಕಾರವಿದ್ದಾಗ ತನ್ನದೇ ಶಾಸಕರು ಬಂಧನಕ್ಕೆ ಒಳಗಾಗಿರುವುದು ಪಕ್ಷದ ವರ್ಚಸ್ಸಿಗೆ ಸಾಕಷ್ಟು ಹಾನಿ ತಂದಿದೆ. ಶಾಸಕ ಗಣೇಶ್ ಕಾಂಗ್ರೆಸ್ನ ಬಂಡಾಯಗಾರರು ಎಂದು ಗುರುತಿಸಿಕೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಂಪಿನ ಜೊತೆ ಸಂಪರ್ಕದಲ್ಲಿದುದರಿಂದ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ.

ಕಂಪ್ಲಿ ಗಣೇಶ್ ಕೊನೆಗೂ ಅರೆಸ್ಟ್
ಗಣೇಶ್ ಗುಜರಾತ್ನಲ್ಲಿರುವ ಮಾಹಿತಿ ಮೂರು ದಿನಗಳ ಹಿಂದೆ ಪೊಲೀಸರಿಗೆ ಬಂದಿತ್ತು. ಹೀಗಾಗಿ ಮೂರು ತಂಡ ರಚಿಸಿ ಶೋಧ ಕಾರ್ಯ ಆರಮಭಿಸಲಾಗಿತ್ತು ಎಂದು ರಾಮನಗರ ಎಸ್ಪಿ ಬಿ ರಮೇಶ್ ಹೇಳಿದ್ದಾರೆ. ಇದೀಗ ರಾಜ್ಯದ ಇಬ್ಬರು, ಹೊರರಾಜ್ಯದ ಒಬ್ಬ ಸ್ನೇಹಿತನ ಜೊತೆ ಗಣೇಶ್ ಸಿಕ್ಕಿಬಿದ್ದಿದ್ದಾರೆ.

ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದರೆ ಮೇಲ್ಮನವಿಗೆ ಅವಕಾಶ
ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದರೆ ವ್ಯಕ್ತಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು, ಹೀಗಾದರೆ 60-90 ದಿನಗಳವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ.












Click it and Unblock the Notifications