ಕನಕಪುರದ ಜನರಿಗೆ ಡಿ.ಕೆ ಸಹೋದರರ ಸಹವಾಸ ಸಾಕಾಗಿದೆ-ಅಶ್ವತ್ಥ್ ನಾರಾಯಣ್
ರಾಮನಗರ, ಏಪ್ರಿಲ್ 14: ಕನಕಪುರದ ಜನತೆ ಡಿ.ಕೆ ಶಿವಕುಮಾರ್ ಸಹೋದರರ ಸಹವಾಸ ಸಾಕಪ್ಪ, ನಮಗೆ ಆರ್.ಅಶೋಕ್ ಬೇಕು ಎನ್ನುತ್ತಿದ್ದಾರೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಲೆ ಇದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಕಾಂಗ್ರೆಸ್ ವಿರುದ್ಧ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಕನಕಪುರದಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಎಲ್ಲಾ ಕಡೆಯಲ್ಲೂ ಚುನಾವಣಾ ಪ್ರಚಾರ ಮಾಡುತ್ತೇವೆ. ಎಲ್ಲಾ ಕ್ಷೇತ್ರದಲ್ಲೂ ಸಂಘಟನೆ ಮಾಡಿ ಗೆಲುವು ಸಾಧಿಸುತ್ತೇವೆ. ಕನಕಪುರದ ಮತದಾರರು ಕಾಂಗ್ರೆಸ್ ಸಾಕು, ಡಿಕೆಶಿ ಸಾಕು, ಬಿಜೆಪಿ ಬೇಕು ಎನ್ನುತ್ತಿದ್ದಾರೆ ಎಂದು ಡಾ.ಸಿಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಗೆ ಒಳ್ಳೆಯ ಆತಿಥ್ಯ ಕೊಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶ್ವತ್ಥ್ ನಾರಾಯಣ್ , ಡಿಕೆಶಿ ನೀಡುವ ಆ ಆಥಿತ್ಯವನ್ನೂ ಸ್ವೀಕರಿಸುತ್ತೇವೆ. ಮಿಲ್ಟ್ರಿ ಹೋಟೆಲ್ ಊಟಾನೂ ಮಾಡುತ್ತೇವೆ, ಜನರಿಂದ ಓಟನ್ನೂ ತೆಗೆದುಕೊಳ್ಳುತ್ತೇವೆ. ಈ ಬಾರಿ ಜಯಭೇರಿ ನಮ್ಮದೇ ಎಂದರು.
ಬಿಜೆಪಿ ಹಿರಿಯ ಮುಖಂಡರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಶ್ವತ್ಥ್ ನಾರಾಯಣ್, ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಆದರೆ ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ಹಾಗಾಗಿ ಏನೇ ಸಮಸ್ಯೆ ಇದ್ದರು ಸಭೆ ಮಾಡಿ ಬಗೆಹರಿಸುತ್ತೇವೆ. ಜನರು ಮೋದಿ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಜನರ ಭಾವನೆಗಳನ್ನು ಗೌರವಿಸುವ ನಮ್ಮ ಪಕ್ಷ ಗೆಲ್ಲುವುದು ನಿಶ್ಚಿತ. ಹಾಗಾಗಿ ಎಲ್ಲಾ ಅಸಮಾಧಾನಗಳನ್ನ ಸರಿಪಡಿಸುವ ಶಕ್ತಿ ನಮಗಿದೆ ಎಂದು ಪಕ್ಷದಲ್ಲಿ ಇರುವ ಅಸಮಾಧಾನ ಸರಿಪಡಿಸುವ ವಿಶ್ವಾಸ ಇದೆ ಎಂದರು.
ಹಿಂದಿನ ಯಾವುದೇ ಸರ್ಕಾರಗಳು ಮಾಗಡಿ ಅಭಿವೃದ್ಧಿಗೆ ಶ್ರಮಿಸಿಲ್ಲ, ಮಾಗಡಿಯಲ್ಲಿ ಶ್ರೀರಂಗ ನೀರಾವರಿ ಯೋಜನ, ಸಂಸ್ಕೃತ ವಿವಿ, ಜಿಟಿಡಿಸಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಾಗಾರಿಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮುಂದೆಯು ಮಾಗಡಿ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಹಾಗಾಗಿ ಈ ಬಾರಿ ಮಾಗಡಿಯ ಜನ ಪ್ರಸಾದ್ ಗೌಡ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಕಮಲ ಅರಳುಸುತ್ತಾರೆ ಎಂದು ಹೇಳಿದರು.

ಮಾಗಡಿಯಲ್ಲಿ ಅರಳಲಿದೆ ಕಮಲ
2023ರ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ತಮ್ಮ ಉಮೇದುವಾರಿಕೆ ಸಲ್ಲಿಸಿದ ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೆ ಮೊದಲು ಪಟ್ಟಣದ ಶ್ರೀರಂಗನಾಥ ದೇವಾಲಯ ಹಾಗೂ ಗಣಪತಿ ದೇವಾಲಯದ ಪೂಜೆ ಸಲ್ಲಿಸಿ, ಸುಮಾರ ಮೂರು ಸಾವಿರ ಜನರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ, ಮಾಗಡಿಯಲ್ಲಿ ಈ ಬಾರಿ ಬಿಜೆಪಿ ಅರಳಲಿದೆ. ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸ ನಮ್ಮ ಕೈಹಿಡಿಯಲಿದೆ. ಜಿಲ್ಲೆ ಸೇರಿದಂತೆ ಮಾಗಡಿಯಲ್ಲೂ ಈ ಬಾರಿ ಬಿಜೆಪಿ ಪರವಾದ ಅಲೆ ಇದೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ಕೊಟ್ಟಿದೆ. ಸಚಿವ ಅಶ್ವತ್ಥ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಿದ್ದೇನೆ. ನನ್ನನ್ನು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ, ಪಕ್ಷದ ಎಲ್ಲಾ ಮುಖಂಡರು, ನಾಯಕರು ಹಾಗೂ ಕಾರ್ಯಕರ್ತರು ಜೊತೆಗೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಹಾಗಾಗಿ ಕ್ಷೇತ್ರದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ ಎಂದರು.












Click it and Unblock the Notifications