ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ: ಅಶ್ವಥ್ ನಾರಾಯಣ
ರಾಮನಗರ, ಸೆಪ್ಟೆಂಬರ್ 28 : ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದಂತೆ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧಿಸಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ದೇಶ ವಿರೋಧಿ ಕೆಲಸ ಹಾಗೂ ದೇಶ ರಕ್ಷಣೆ ಮಾಡುವ ಸಂಘಟನೆಗಳ ಬಗ್ಗೆ ವ್ಯತ್ಯಾಸ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ, ಅವರು ರಾಜಕೀಯ ಮಾಡುತ್ತಾ ಕಣ್ಣು ಮುಚ್ಚೋಗಿದ್ಯಾ ಅಥವಾ ಮಂಕಾಗಿದ್ಯಾ..? ಸತ್ಯತೆ, ಅಸತ್ಯತೆಯನ್ನು ಗಮನಿಸಬೇಕು ಅಲ್ವಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನವರು ಏನನ್ನೂ ಮಾಡೋದಿಕ್ಕೆ ಆಗಿರಲಿಲ್ಲವೋ ಆ ಕೆಲಸವನ್ನು ನಾವು ಮಾಡಿ ತೋರಿಸಿದ್ದೇವೆ. ಈ ದೇಶದಲ್ಲಿ ಭಯೋತ್ಪಾದನೆ, ದೇಶದ್ರೋಹ ಮಾಡುತ್ತಿರುವ ಸಂಘಟನೆಗಳನ್ನು ಮಟ್ಟಹಾಕದೇ ಕಾಂಗ್ರೆಸ್ ನವರು ತಾವು ಅಧಿಕಾರದಲ್ಲಿದ್ದ ವೇಳೆ ಪಿಎಪ್ಐ ಸಂಘಟನೆಗಳ ಮೇಲಿದ್ದ ಕೇಸ್ ಗಳನ್ನು ವಿತ್ ಡ್ರಾ ಮಾಡಿದ್ದಾರೆ. ಇವರಿಗೆ ಪಿಎಪ್ಐ ನಿಷೇಧದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ," ಎಂದು ಸಚಿವ ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನವರು ರಾಜಕೀಯವಾಗಿ ಅಧಿಕಾರದ ದಾಹ ಇಟ್ಟಕೊಂಡು ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಪಿಎಫ್ಐ ಮೇಲೆ ಕೇಸ್ ವಿತ್ ಡ್ರಾ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆರ್ಎಸ್ಎಸ್ ಸಂಘಟನೆ ಬ್ಯಾನ್ ಮಾಡಿ ಎಂದು ನಿರಾಧಾರ ಹೇಳಿಕೆ ಕೊಡುವುದನ್ನ ಬಿಡಬೇಕು. ಆರ್ಎಸ್ಎಸ್ ಸಂಘಟನೆ ದೇಶ ದ್ರೋಹದ ಸಂಘಟನೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಚಿವ ಅಶ್ವಥ್ ನಾರಾಯಣ ಖಂಡಿಸಿದ್ದಾರೆ.

ಕಾಂಗ್ರೆಸ್ ನಡೆಯನ್ನು ಜನ ಒಪ್ಪಲ್ಲ
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದವರು ಅಧಿಕಾರದಲ್ಲಿ ಇದ್ದಾಗ ಭಾರತ್ ತೋಡೋ, ಅಧಿಕಾರ ಹೋಗಿ ಪ್ರತಿಪಕ್ಷವಾದ ತಕ್ಷಣ ಭಾರತ್ ಜೋಡೋ, ಕಾಂಗ್ರೆಸ್ ಪಕ್ಷದವರ ನಡೆಯನ್ನು ಜನರು ಒಪ್ಪುವುದಿಲ್ಲ. ಕಾಂಗ್ರೆಸ್ ಸಮಾಜ ಒಡೆಯುವ ಕೆಲಸವನ್ನಷ್ಟೇ ಮಾಡಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಸಂಸ್ಕೃತಿ ಹುಟ್ಟಿದ್ದೆ ಕಾಂಗ್ರೆಸ್ನಲ್ಲಿ
ಓಲೈಸುವ ರಾಜಕಾರಣ ಮಾಡಿ ದೇಶಕ್ಕೆ ಭ್ರಷ್ಟಾಚಾರ ಸಂಸ್ಕೃತಿ ಕೊಟ್ಟವರು ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ನವರ ಆರಾಧ್ಯ ದೈವ ಭ್ರಷ್ಟಾಚಾರ, ಕಾಂಗ್ರೆಸ್ ನವರು ಜನಪರವಾಗಿ ಬಂದಿಲ್ಲ, ಅವರ ಅಸ್ತಿತ್ವಕ್ಕೆ ಬಂದವರು. ಜನರು ತಮ್ಮನ್ನು ಮರೆತು ಹೋದರೆ ಹೇಗೆ ಎಂದು ಭಯದಲ್ಲಿ ಏನೋನೋ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಭಾರತ್ ಜೋಡೋ ಯಾತ್ರೆಯನ್ನು ಅಣಕಿಸಿದರು.

ದೇಶ ದ್ರೋಹಿ ಸಂಘಟನೆಗಳು ತಲೆ ಎತ್ತದಂತೆ ಮಾಡುತ್ತೇವೆ
ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪಿಎಫ್ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ. ದೇಶ ದ್ರೋಹಿ ಸಂಘಟನೆಗಳು ಬೇರೆ ಯಾವುದೇ ರೂಪದಲ್ಲಿ ತಲೆ ಎತ್ತದಂತೆ ತೀವ್ರ ನಿಗಾ ವಹಿಸಲಾಗುವುದು. ಪಿಎಫ್ಐ ಸಂಘಟನೆಯು ವಿದೇಶಿ ಜಾಲಗಳ ಮೂಲಕ ಅಕ್ರಮ ನೆರವು ಪಡೆದುಕೊಳ್ಳುತ್ತಿತ್ತು. ಈ ಮೂಲಕ ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟುಮಾಡಲು ಅದು ಸಂಚು ರೂಪಿಸುತ್ತಿತ್ತು. ಅದಕ್ಕಾಗಿಯೇ ನಿಷೇಧಿಸಲಾಗಿದೆ ಎಂದರು.

ದೇಶದ ಹಿತಕ್ಕೆ ವಿರುದ್ಧ ನಡೆಯುವ ಯಾವ ಸಂಘಟನೆಯನ್ನು ಬಿಡಲ್ಲ
ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯ ವಿಧ್ವಂಸಕ ಚಟುವಟಿಕೆಗಳು ಹಾಗೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಇದರ ಬೆನ್ನಲ್ಲೇ ಎರಡು ದಿವಸಗಳ ಹಿಂದೆ ದೇಶಾದ್ಯಂತ ಸಂಘಟನೆಯ ಕಚೇರಿಗಳು ಮತ್ತು ನಾಯಕರ ಮೇಲೆ ಎನ್ಐಎ ದಾಳಿ ನಡೆಸಲಾಗಿತ್ತು. ಸಮಾಜ ಮತ್ತು ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಯಾವ ಸಂಘಟನೆಗಳನ್ನು ಕೂಡ ಬಿಡುವುದಿಲ್ಲ. ಕೇಂದ್ರ ಸರಕಾರದ ದಾಳಿಯ ಬೆನ್ನಲ್ಲೇ ರಾಜ್ಯ ಪೊಲೀಸರು ಕೂಡ ಮಂಗಳವಾರ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದರು ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications